ಕರ್ನಾಟಕ

karnataka

ಹಾವೇರಿ: ಕಾಂಗ್ರೆಸ್​ ಬೂತ್​ಮಟ್ಟದ ಸದಸ್ಯರ ಸಮಾವೇಶ, ಸಚಿವರಿಂದ ಕಾರ್ಯಕರ್ತರಿಗೆ ಒಗ್ಗಟ್ಟಿನ ಕರೆ - Congress members Convention

By ETV Bharat Karnataka Team

Published : 4 hours ago

Updated : 42 minutes ago

ಮುಂಬರುವ ಉಪ ಚುನಾವಣೆಗೆ ಟಿಕೆಟ್​ ಕೊಟ್ಟಿಲ್ಲವೆಂದು ಮುಖಂಡರು ಪಕ್ಷದ ವಿರುದ್ಧ ನಿಲ್ಲುವ ಬದಲು, ಟಿಕೆಟ್​ ಸಿಗದೇ ಇದ್ದರೂ ಪಕ್ಷನಿಷ್ಠೆಯಿಂದ ಕಾರ್ಯಕರ್ತರ ಜೊತೆಗೂಡಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸುವಲ್ಲಿ ಕೆಲಸ ಮಾಡಬೇಕು ಎಂದು ಸಚಿವರಾದ ಈಶ್ವರ್​ ಖಂಡ್ರೆ, ಶಿವಾನಂದ್​ ಪಾಟೀಲ್​, ಮಾಜಿ ಸಚಿವ ವಿನಯ್​ ಕುಲಕರ್ಣಿ ಕಿವಿಮಾತು ಹೇಳಿದರು.

Booth level Congress members Convention in Shiggaon of Haveri
ಕಾಂಗ್ರೆಸ್​ ಬೂತ್​ಮಟ್ಟದ ಸದಸ್ಯರ ಸಮಾವೇಶ (ETV Bharat)

ಹಾವೇರಿ: ಶಿಗ್ಗಾಂವ್ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಶನಿವಾರ ಶಿಗ್ಗಾಂವ್‌ನಲ್ಲಿ ಬೂತ್​ಮಟ್ಟದ ಸದಸ್ಯರ ಸಮಾವೇಶ ನಡೆಸಿತು. ಶಿಗ್ಗಾಂವ್‌ನ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶಕ್ಕೆ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ್​ ಪಾಟೀಲ್ ಸೇರಿದಂತೆ ವಿವಿಧ ನಾಯಕರು ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಈಶ್ವರ ಖಂಡ್ರೆ, "ಯಾವುದೇ ಕ್ಷಣದಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು. ಶಿಗ್ಗಾಂವ್, ಸಂಡೂರು, ಚನ್ನಪಟ್ಟಣ ಮೂರೂ ಕಡೆ ಸಿದ್ಧತೆ ನಡೆದಿದೆ. ಹೆದರಿಸಿ ಬೆದರಿಸಿ, ಇಡಿ, ಸಿಬಿಐ ಮೂಲಕ ಬಿಜೆಪಿಯವರು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ಸರ್ಕಾರವನ್ನು ಬುಡಮೇಲು ಮಾಡಲು ಪ್ರಯತ್ನ ನಡೆಸಿದ್ದಾರೆ. ಯಾವುದೇ ಶಕ್ತಿ ಬಂದರೂ ಐದು ವರ್ಷ ನಮ್ಮ ಸರ್ಕಾರವನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಸಿದರು.

ಕಾಂಗ್ರೆಸ್​ ಬೂತ್​ಮಟ್ಟದ ಸದಸ್ಯರ ಸಮಾವೇಶ (ETV Bharat)

"ಸುಳ್ಳು ಆರೋಪ ಮಾಡಿ, ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಮೋದಿ, ಅಮಿತ್ ಶಾ ಸಂಚು ಮಾಡಿ ಸಿದ್ದರಾಮಯ್ಯ ಸರ್ಕಾರ ಬುಡಮೇಲು ಮಾಡಲು ಮುಡಾ ಹಗರಣದ ಆರೋಪ ಮಾಡಿದ್ದಾರೆ. ಹೆಣಗಳ ರಾಶಿಗಳ ಮೇಲೆ ರಾಜಕೀಯ ಮಾಡಿದವರು ಬಿಜೆಪಿಯವರು. ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡೋರು ಬಿಜೆಪಿಯವರು" ಎಂದು ಖಂಡ್ರೆ ಆರೋಪಿಸಿದರು.

ರಾಹುಲ್ ಗಾಂಧಿ ಪ್ರಧಾನಿ ಆಗ್ತಾರೆ ಎಂದು ಮೋದಿಯವರಿಗೆ ಭಯ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಯಾರೇ ಆಗಲಿ, ಹೈಕಮಾಂಡ್ ಹೇಳಿದಂತೆ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿ. ಕಾಂಗ್ರೆಸ್​ಗೆ ಸೋಲಾಗುತ್ತಿರುವುದು ಕಾಂಗ್ರೆಸ್​ನವರಿಂದ. ಕಾಂಗ್ರೆಸ್​ಗೆ ದ್ರೋಹ ಮಾಡಲು ಹೋಗಬೇಡಿ. ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನಮಾನ ಪಕ್ಷದಲ್ಲಿ ಸಿಗಲಿದೆ"
ಎಂದು ತಿಳಿಸಿದರು.

ಸಚಿವ ಶಿವಾನಂದ ಪಾಟೀಲ್, "ಹಗಲು ಕಾಂಗ್ರೆಸ್, ರಾತ್ರಿ ಬಿಜೆಪಿ ಮಾಡುವುದು ಬೇಡ. ಇರೋದಾದರೆ ಕಾಂಗ್ರೆಸ್ ಜೊತೆ ಇರಿ, ಇಲ್ಲದಿದ್ದರೆ ನಾಳೆಯೇ ಬೊಮ್ಮಾಯಿ ಜೊತೆ ಹೋಗಿ. ನಮ್ಮದೇನು ಅಭ್ಯಂತರ ಇಲ್ಲ. ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ಮಾಡುವ ಕಾರ್ಯಕರ್ತರು ಯಾರೂ ಪಕ್ಷದಲ್ಲಿ ಇರಬೇಡಿ" ಎಂದು ಪಕ್ಷ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದರು.

"ಕಾಂಗ್ರೆಸ್ ಪಕ್ಷಕ್ಕೆ ರಾಮನ ಮೇಲೂ ನಂಬಿಕೆ ಇದೆ. ರಹೀಮನ ಮೇಲೂ ನಂಬಿಕೆ ಇದೆ. ಸದಾ ರಾಮ ರಹೀಮರ ಮೇಲೆ ವಿಶ್ವಾಸ ಇಟ್ಟಿರುವ ಪಕ್ಷ ನಮ್ಮದು. ಸಮಯ ಬಂದಾಗ ರಾಮನನ್ನು ಹಿಡಿಯೋದು, ಮತ್ತೊಮ್ಮೆ ರಹೀಮನ ಹಿಡಿಯೋದನ್ನು ಮಾಡಲ್ಲ" ಎಂದರು.

ಶಾಸಕ ವಿನಯ್ ಕುಲಕರ್ಣಿ, ಶಿಗ್ಗಾಂವ ಕ್ಷೇತ್ರ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ. ಕಾಂಗ್ರೆಸ್ ಸೋಲಲು ಕಾಂಗ್ರೆಸ್ಸೇ ಕಾರಣ. ನಮ್ಮ ಮುಖಂಡರಲ್ಲಿ ಮನವಿ ಮಾಡುತ್ತೇನೆ. ಪಕ್ಷ ಒಬ್ಬರಿಗೆ ಟಿಕೆಟ್ ಕೊಡುತ್ತೆ. ಟಿಕೆಟ್ ಸಿಗಲಿಲ್ಲವೆಂದು ಪಕ್ಷಕ್ಕೆ ದ್ರೋಹ ಮಾಡಿದರೆ, ಮತ್ತೂ ಇದೇ ಪರಿಸ್ಥಿತಿ ಬರುತ್ತೆ. ಮುಂದೆ ಕಾರ್ಯಕರ್ತರ ಪರಿಸ್ಥಿತಿ ಅದೋಗತಿಯಾಗುತ್ತದೆ" ಎಂದು ಬೇಸರ ವ್ಯಕ್ತಪಡಿಸಿದರು.

"ಯಾರು ಯೋಗ್ಯ ಅಂತ ನೋಡಿ ಪಕ್ಷ ಟಿಕೆಟ್ ಕೊಡುತ್ತದೆ. ನಮ್ಮ ನಮ್ಮ ನಡುವೆ ಹೇಳಿಕೆ, ಟೀಕೆ ಮಾಡುವುದು ಬಿಡಿ. ಇವತ್ತಿನಿಂದ ಎಲ್ಲರೂ ಒಗ್ಗಟ್ಟಾಗಿ ಹೋಗಿ ಶಿಗ್ಗಾಂವ್ ವಿಧಾನಸಭೆ ಉಪಚುನಾವಣೆಯಲ್ಲಿ ಕೆಲಸ ಮಾಡೋಣ. ಕಾಂಗ್ರೆಸ್ ಈ ಬಾರಿ ಜಯಗಳಿಸುವುದು ಶತಸಿದ್ಧ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ "ನಮ್ಮ 16 ಜನರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವು ಪಕ್ಷಕ್ಕಾಗಿ ದುಡಿಯುತ್ತೇವೆ. ಪಕ್ಷದ್ರೋಹ ಮಾಡುವುದಿಲ್ಲ" ಎಂದು ಅಕಾಂಕ್ಷಿಗಳಿಂದ ಪ್ರಮಾಣ ಮಾಡಿಸಲಾಯಿತು.

ಇದನ್ನೂ ಓದಿ:ಉಡುಪಿ ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಸಮರ: ಕಟೀಲ್​ಗೆ ಸಿಗುತ್ತಾ ಬಿಜೆಪಿ ಟಿಕೆಟ್? - Legislative Council Re election

Last Updated : 42 minutes ago

ABOUT THE AUTHOR

...view details