ಕರ್ನಾಟಕ

karnataka

ETV Bharat / state

ಮಹಾಕುಂಭ ಮೇಳ ಕಾಲ್ತುಳಿತ: ಬೆಳಗಾವಿಗೆ ಆಗಮಿಸಿದ ಇಬ್ಬರ ಮೃತದೇಹಗಳು - ಕುಟುಂಬಸ್ಥರ ಆಕ್ರಂದನ - MAHAKUMBH STAMPEDE

ಮಹಾಕುಂಭ ಮೇಳದಲ್ಲಿನ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಪೈಕಿ ಇಬ್ಬರ ಮೃತದೇಹಗಳು ಬೆಳಗಾವಿಗೆ ತಲುಪಿವೆ.

MAHAKUMBH STAMPEDE
ಮೃತರ ಕುಟುಂಬಸ್ಥರ ಆಕ್ರಂದನ (ETV Bharat)

By ETV Bharat Karnataka Team

Published : Jan 30, 2025, 7:34 PM IST

ಬೆಳಗಾವಿ:ಪ್ರಯಾಗ್​​ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ನಾಲ್ವರ ಪೈಕಿ ಇಬ್ಬರ ಮೃತದೇಹಗಳನ್ನು ಬೆಳಗಾವಿ ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಗುರುವಾರ 6.20ಕ್ಕೆ ತರಲಾಯಿತು.

ದೆಹಲಿಯಿಂದ ವಿಮಾನದಲ್ಲಿ ನೇರವಾಗಿ ತರಲಾದ ಬೆಳಗಾವಿ ಶಿವಾಜಿ ನಗರದ ಮಹಾದೇವಿ ಬಾವನೂರ (48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ (61) ಅವರ ಮೃತದೇಹಗಳನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು. ಇದಕ್ಕೂ ಮೊದಲೇ ನೆರೆದಿದ್ದ ಮೃತರ ಕುಟುಂಬಸ್ಥರ ಆಕ್ರಂದನ ಈ ವೇಳೆ ಮುಗಿಲುಮುಟ್ಟಿತ್ತು.

ಮುಖ ನೋಡುತ್ತೇವೆ, ಮುಖ ತೋರಿಸಿ ಎಂದು ಅಲವತ್ತುಕೊಂಡರು. ಸರ್ಕಾರಿ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಮೃತದೇಹಗಳನ್ನು ತಮಗೆ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟರು‌. ಆಗ ಕುಟುಂಬ ಸದಸ್ಯರ ದುಃಖ ಉಮ್ಮಳಿಸಿದ್ದು, ಶವಗಳ ಪೆಟ್ಟಿಗೆ ಮೇಲೆಯೇ ಒರಗಿ ಕಣ್ಣೀರು ಹಾಕಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮಾಧಾನಪಡಿಸಿದರು‌.

ಬೆಳಗಾವಿಗೆ ಆಗಮಿಸಿದ ಇಬ್ಬರ ಮೃತದೇಹಗಳು (ETV Bharat)

ಬಳಿಕ ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಅಭಯ್ ಪಾಟೀಲ, ಆಸೀಫ್ ಸೇಠ್, ಮಾಜಿ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಪುಷ್ಪನಮನ ಸಲ್ಲಿಸಿದರು. ಬಳಿಕ ಮೃತದೇಹಗಳನ್ನು ಎರಡು ಪ್ರತ್ಯೇಕ ಆಂಬ್ಯುಲೆನ್ಸ್​ಗಳಲ್ಲಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು.

ಮೃತರ ಕುಟುಂಬಸ್ಥರ ಆಕ್ರಂದನ (ETV Bharat)

ಇವತ್ತೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಎಂದ ಡಿಸಿ : ಮೃತದೇಹಗಳನ್ನು ಬೆಳಗಾವಿ ಸಾಂಬ್ರಾ ವಿಮಾನ‌ ನಿಲ್ದಾಣದಲ್ಲಿ ಬರಮಾಡಿಕೊಂಡು ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ''ಇವತ್ತು ರಾತ್ರಿ ಎಷ್ಟೇ ಸಮಯವಾದರೂ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತಹದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇವೆ'' ಎಂದು ತಿಳಿಸಿದರು.

ಇದನ್ನೂ ಓದಿ:ಹಠ ಮಾಡಿ ಪ್ರಯಾಗ್​ರಾಜ್​ಗೆ ಹೋದ ಮಗಳು, ಸಾವಿಗೂ ಮುನ್ನ ಫೇಸ್‌ಬುಕ್​ ಲೈವ್; ಪತ್ನಿ, ಮಗಳ ಕಳ್ಕೊಂಡು ಒಂಟಿಯಾದ ವ್ಯಕ್ತಿ

''ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಅವರ ಮೃತದೇಹಗಳನ್ನು ನಾವು ಬರಮಾಡಿಕೊಂಡಿದ್ದೇವೆ. ಇನ್ನೂ ಇಬ್ಬರ ಮೃತದೇಹಗಳನ್ನು ಕಳಿಸಿಕೊಡುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವಿಮಾನದಲ್ಲಿ ದೆಹಲಿಯಿಂದ ಗೋವಾಗೆ ಸುಮಾರು 8.30ಕ್ಕೆ ಬರಲಿವೆ. ಅಲ್ಲಿ ಆ ಮೃತದೇಹಗಳನ್ನು ಸ್ವೀಕರಿಸಿ, ಬಳಿಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಳಗಾವಿಯಲ್ಲಿ ನಾವು ಬರಮಾಡಿಕೊಳ್ಳಲು ಎಲ್ಲ ರೀತಿ ಸಿದ್ಧತೆ ಕೈಗೊಂಡಿದ್ದೇವೆ'' ಎಂದರು.

ಮೃತದೇಹಗಳಿಗೆ ಗಣ್ಯರಿಂದ ಪುಷ್ಪ ನಮನ (ETV Bharat)

''ಪ್ರಯಾಗ್​ರಾಜ್​​ನಲ್ಲಿ ದುರಾದೃಷ್ಟವಶಾತ್ ಮರಣೋತ್ತರ ಪರೀಕ್ಷೆ ಆಗಿಲ್ಲ. ಇನ್ನು ದೆಹಲಿಯಲ್ಲೂ ಪರೀಕ್ಷೆಗೆ ಪ್ರಯತ್ನಿಸಿದ್ದೆವು. ಆದರೆ, ವಿಮಾನ‌ ವಿಳಂಬ ಆಗುವ ಹಿನ್ನೆಲೆಯಲ್ಲಿ ಅಲ್ಲಿಯೂ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಮೊದಲು ಮೃತದೇಹಗಳನ್ನು ನಮ್ಮ ಜಿಲ್ಲೆಗೆ ತರಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಯೇ ಮಾಡಲು ನಿರ್ಧರಿಸಿದೆವು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುತ್ತೇವೆ'' ಎಂದು ತಿಳಿಸಿದರು.

ಉತ್ತರಪ್ರದೇಶ ಸರ್ಕಾರ ಆಂಬ್ಯುಲೆನ್ಸ್​​​​ ವ್ಯವಸ್ಥೆಯನ್ನೂ ಮಾಡದ ವಿಚಾರಕ್ಕೆ, ''ಪ್ರಯಾಗ್​​ರಾಜ್ ಜಿಲ್ಲಾಡಳಿತಕ್ಕೆ ಬಹಳ ಒತ್ತಡ ಇರಬಹುದು. ಆದರಿಂದ ಈ ರೀತಿ ಸಂದರ್ಭ ಸೃಷ್ಟಿ ಆಗಿರಬಹುದು.‌ ಹಾಗಾಗಿ, ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದೇವೆ'' ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಮಹಾಕುಂಭ ಮೇಳ ಕಾಲ್ತುಳಿತ : ಇಬ್ಬರ ಮೃತದೇಹ ನೇರವಾಗಿ, ಇನ್ನಿಬ್ಬರ ಶವ ಗೋವಾ ಮೂಲಕ‌ ಬೆಳಗಾವಿಗೆ : ಜಿಲ್ಲಾಧಿಕಾರಿ

ABOUT THE AUTHOR

...view details