ಕರ್ನಾಟಕ

karnataka

ಸ್ಮಾರ್ಟ್ ಆದ ಲೋಕಾಯುಕ್ತ ಪೊಲೀಸರು: ಮೊಬೈಲ್​​, ಲ್ಯಾಪ್ ಟಾಪ್ ಸಹಿತ ಹೊಸ ಸಮವಸ್ತ್ರ ವಿತರಣೆ - Smart phone for Lokayukta Police

By ETV Bharat Karnataka Team

Published : May 27, 2024, 9:02 PM IST

ರಾಜ್ಯದಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಇನ್ಸ್​ಪೆಕ್ಟರ್​, ಡಿವೈಎಸ್ಪಿ ಹಾಗೂ ಎಸ್ಪಿ ಸೇರಿ 175 ಮಂದಿ ಅಧಿಕಾರಿಗಳಿಗೆ ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್ ವಿತರಿಸಿದ್ದು, ಲೋಕಾಯುಕ್ತ ದಾಳಿ ಅಥವಾ ಟ್ರ್ಯಾಪ್‌ ಕಾರ್ಯಾಚರಣೆ ಸಂದರ್ಭದಲ್ಲಿ ಪಾರದರ್ಶಕತೆ ತನಿಖೆ ಕೈಗೊಳ್ಳಲು ಸಹಕಾರಿ ಆಗಲಿದೆ.

Lokayukta Police
ಲೋಕಾಯುಕ್ತ ಪೊಲೀಸರು (ETV Bharat)

ಬೆಂಗಳೂರು:ಪಾರದರ್ಶಕತೆ ಹಾಗೂ ಪ್ರಕರಣಗಳ ತ್ವರಿತ ತನಿಖೆಗೆ ಪೂರಕವಾಗಿ ತಂತ್ರಜ್ಞಾನಕ್ಕೆ‌ ಒಗ್ಗಿಕೊಂಡಿರುವ ಲೋಕಾಯುಕ್ತ ಪೊಲೀಸರು‌ ಇನ್ಮುಂದೆ ಇನ್ನಷ್ಟು ಸ್ಮಾರ್ಟ್ ಆಗಲಿದ್ದಾರೆ. ರಾಜ್ಯದೆಲ್ಲೆಡೆ ಕಾರ್ಯನಿರ್ವಹಿಸುತ್ತಿರುವ ಇನ್ಸ್​​​ಪೆಕ್ಟರ್​ ಮೇಲಿನ ಅಧಿಕಾರಿಗಳಿಗೆ ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್ ಸಹಿತ ಹೊಸ ಸಮವಸ್ತ್ರ ‌ನೀಡಲಾಗಿದೆ.

ಇನ್ಸ್​​ಪೆಕ್ಟರ್​, ಡಿವೈಎಸ್ಪಿ ಹಾಗೂ ಎಸ್ಪಿ ಸೇರಿ 175 ಮಂದಿ ಅಧಿಕಾರಿಗಳಿಗೆ ಸ್ಯಾಮ್​ಸಂಗ್​ ಕಂಪನಿಯ ಸ್ಮಾರ್ಟ್ ಮೊಬೈಲ್ ಈಗಾಗಲೇ ವಿತರಿಸಲಾಗಿದೆ.‌ ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಮನ್ವಯತೆ ಸಾಧಿಸಲು ವೈಯಕ್ತಿಕ ಮೊಬೈಲ್ ಬಳಸುತ್ತಿದ್ದ ಅಧಿಕಾರಿಗಳು ಇದೀಗ ಲೋಕಾಯುಕ್ತ ಇಲಾಖೆಯಿಂದ ಮೊಬೈಲ್ ನೀಡಿರುವುದರಿಂದ ತನಿಖೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಹಕಾರಿಯಾಗಲಿದೆ.

ಡಿಜಿಟಲ್‌ ಸಾಕ್ಷ್ಯಾಧಾರ ಸಂಗ್ರಹಿಸಲು ಸಹಕಾರಿ:ದಾಳಿ ಅಥವಾ ಟ್ರ್ಯಾಪ್‌ ಕಾರ್ಯಾಚರಣೆ ಪ್ರಕರಣಗಳಲ್ಲಿ ಬಂಧಿತರಾಗುವವರಿಗೆ ಆಥವಾ ಆರೋಪಿತರಿಗೆ ದಾಖಲಾತಿ ಸಲ್ಲಿಕೆ ಹಾಗೂ ವಿಚಾರಣೆ ಹಾಜರಾಗುವಂತೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​ ಮೂಲಕ ನೊಟೀಸ್ ಕಳುಹಿಸಲು ಸ್ಮಾರ್ಟ್ ಮೊಬೈಲ್ ಪೂರಕವಾಗಿರಲಿದೆ‌‌. ಡಿಜಿಟಲ್‌ ಸಾಕ್ಷ್ಯಾಧಾರ ಸಂಗ್ರಹಿಸಲು ಅಥವಾ ಪರಿಶೀಲಿಸಲು ನೆರವಿಗೆ ಬರಲಿದೆ. ಅಲ್ಲದೇ ಎಫ್ಐಆರ್ ದಾಖಲಿಸಲು ಇನ್ನಿತರ ಕೇಸ್​​ಗಳಿಗೆ ಸಂಬಂಧಿಸಿದಂತೆ ಬಳಸಲು ಅಗತ್ಯವಿರುವ ಅಧಿಕಾರಿಗಳಿಗೆ 108 ಕಂಪ್ಯೂಟರ್ ಹಾಗೂ 30 ಲ್ಯಾಪ್ ಟಾಪ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳಿಗೂ ಸಮವಸ್ತ್ರ ಕಡ್ಡಾಯ:ಎನ್ಐಎ ಹಾಗೂ ಬೆಂಗಳೂರು ನಗರ ಸಿಸಿಬಿ ಮಾದರಿಯಲ್ಲಿ‌ ಲೋಕಾಯುಕ್ತ ಪೊಲೀಸರಿಗೂ ಸಮವಸ್ತ್ರ ನೀಡಲಾಗಿದೆ. ನೀಡಲಾಗಿರುವ ಜಾಕೆಟ್ ಮೇಲೆ ಕರ್ನಾಟಕ ಲೋಕಾಯುಕ್ತ ಎಂದು ನಮೂದಿಸಲಾಗಿದೆ. ಸರ್ಕಾರಿ ಅಧಿಕಾರಿಗಳ ಮನೆಗಳ‌ ಮೇಲೆ‌ ದಾಳಿ ಸಂದರ್ಭಗಳಲ್ಲಿ‌ ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.

ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸಮವಸ್ತ್ರ:ಹಲವು ಸಂದರ್ಭಗಳಲ್ಲಿ ದಾಳಿ ನಡೆಸಿದಾಗ ಅಧಿಕಾರಿಗಳೇ ಬಂದಿದ್ದರೂ ದಾಳಿಗೊಳಗಾದ ಅಧಿಕಾರಿ ಅಥವಾ ಕುಟುಂಬಸ್ಥರು ಸಹಕರಿಸುತ್ತಿರಲಿಲ್ಲ. ಎಷ್ಟೋ ಬಾರಿ ಮಾತಿನ ಚಕಮಕಿಗಳು ಸಹ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ ಇಂತಹ ಗೋಡವೆಗಳಿಂದ ದೂರವಾಗಿಸಲು ಹಾಗೂ ಶಿಸ್ತು ಕಾಪಾಡಿಕೊಳ್ಳಲು ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂಓದಿ:ಮೇ 31 ರಂದು ಎಸ್ಐಟಿ ಎದುರು ಪ್ರಜ್ವಲ್ ಹಾಜರಾಗುವ ವಿಚಾರ ಸ್ವಾಗತಿಸಿದ ಗೃಹ ಸಚಿವ ಪರಮೇಶ್ವರ್ - G Prameshwar

ABOUT THE AUTHOR

...view details