ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲಾ ತ್ರೈಮಾಸಿಕ‌ ಕೆಡಿಪಿ ಸಭೆ: ಕುಡಿಯುವ ನೀರು, ಮೇವು ಪೂರೈಕೆಗೆ ಸಚಿವರ ಸೂಚನೆ - ಬೆಳಗಾವಿ ಸುವರ್ಣ ವಿಧಾನಸೌಧ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿಂದು 2023-24ನೇ ಸಾಲಿನ ಜಿಲ್ಲಾ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯಿತು.

kdp progress review meeting
ಬೆಳಗಾವಿ ಜಿಲ್ಲಾ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

By ETV Bharat Karnataka Team

Published : Mar 1, 2024, 9:48 PM IST

ಬೆಳಗಾವಿ:ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.

ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ 2023-24ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ಒಮ್ಮೆಲೆ ವಿತರಿಸಲು ಕ್ರಮ ಕೈಗೊಳ್ಳುವುದು ಸೂಕ್ತ. ಆದ್ದರಿಂದ ಬೆಳಗಾವಿ ಸೇರಿದಂತೆ ಪ್ರತಿವರ್ಷ ಕನಿಷ್ಠ ಎರಡು ಜಿಲ್ಲೆಗಳ ವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಒಂದೆರಡು ವರ್ಷಗಳಲ್ಲಿ ವಾಹನ ವಿತರಿಸಲು ಕ್ರಮ ಕೈಗೊಳ್ಳಬೇಕು. ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಒಮ್ಮೆ ಮಂಜೂರಾಗಿರುವ ಪಾಲಿಹೌಸ್​ಗಳನ್ನೇ ಹೊಸದಾಗಿ ಮಂಜೂರಾದ ಫಲಾನುಭವಿಗಳಿಗೆ ಅಕ್ರಮವಾಗಿ ಹಸ್ತಾಂತರಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಕಟ್ಟಡ ಪೂರ್ಣಗೊಂಡಿರುವ ತಾಯಿ ಮಕ್ಕಳ ಆಸ್ಪತ್ರೆಗಳು ಐದಾರು ವರ್ಷಗಳಾದರೂ ಕಾರ್ಯಾರಂಭಿಸಿಲ್ಲ. ಮುಂದಿನ ಕೆಡಿಪಿ ಸಭೆಗಿಂತ ಮುಂಚೆ ಇಂತಹ ಆಸ್ಪತ್ರೆಗಳು ಕಾರ್ಯಾರಂಭಿಸಬೇಕು. ಪ್ರತೀ ವರ್ಷ ಕನಿಷ್ಠ ಎರಡು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು. ಹೀಗೆ ಮಾಡಿದ್ದಲ್ಲಿ ನಾಲ್ಕೈದು ವರ್ಷಗಳಲ್ಲಿ ಜಿಲ್ಲಾದ್ಯಂತ ಎಲ್ಲೆಡೆ ಸ್ವಂತ ಅಂಗನವಾಡಿ ಕಟ್ಟಡಗಳನ್ನು ಹೊಂದಿದಂತಾಗುತ್ತದೆ ಎಂದರು.

ಪ್ರತಿಯೊಂದು ಗ್ರಾ.ಪಂ.ಗಳಲ್ಲಿ ಕಡ್ಡಾಯವಾಗಿ ಸ್ವಂತ ಟ್ಯಾಂಕರ್ ಖರೀದಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇದುವರೆಗೆ 280 ಗ್ರಾ.ಪಂ.ಗಳಲ್ಲಿ ಸ್ವಂತ ಟ್ಯಾಂಕರ್ ಖರೀದಿಸಲಾಗಿದೆ. ಉಳಿದ ಪಂಚಾಯಿತಿಗಳಲ್ಲಿ ಆದಷ್ಟು ಬೇಗ ಟ್ಯಾಂಕರ್ ಖರೀದಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ವಂತ ಟ್ಯಾಂಕರ್ ಹೊಂದಿದ್ದರೆ ಬೇಸಿಗೆಯಲ್ಲಿ ತುರ್ತಾಗಿ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ. ಹೊಸ ಕೊಳವೆಬಾವಿಗಿಂತ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ಸಮರ್ಪಕವಾಗಿ ನೀರು ಪೂರೈಸಬಹುದು ಎಂದು ಹೇಳಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜಿಲ್ಲೆಯ ಕೆಲವೆಡೆ ಹೊರ ರಾಜ್ಯದವರು ಮೇವು ಖರೀದಿಸುತ್ತಿರುವುದು ಕಂಡುಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕೊರತೆ ಉ‌ಂಟಾಗದಂತೆ ಮುಂಚಿತವಾಗಿ ಮೇವು ಖರೀದಿಸಿ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈಲು ಮಾರ್ಗ ಸಮರ್ಪಕ ಅನುಷ್ಠಾನ: ಭೂಸ್ವಾಧೀನ ಹಾಗೂ ಹೆಚ್ಚು ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಕೈಗೊಂಡಿದ್ದು, ಇದರಿಂದ ಬೆಳಗಾವಿ-ಧಾರವಾಡ ರೈಲುಮಾರ್ಗ, ಎಸ್.ಟಿ.ಪಿ. ಸೇರಿದಂತೆ ಅನೇಕ ಪ್ರಮುಖ ಯೋಜನೆಗಳು ವಿಳಂಬಗೊಳ್ಳುತ್ತಿವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಜಿಲ್ಲಾಧಿಕಾರಿ ನಿತೇಶ್​ ಪಾಟೀಲ ಮಾತನಾಡಿ, ತೇಗೂರದಿಂದ ದೇಸೂರವರೆಗೆ ಮಾರ್ಗ ನಿರ್ಮಾಣವಾಗುತ್ತಿದೆ. ದೇಸೂರ-ಕಣವಿನಕೊಪ್ಪ ನಡುವೆ 150 ಎಕರೆ ನೀರಾವರಿ ಭೂಮಿ ಇರುವುದರಿಂದ ಮಾರ್ಗ ಬದಲಾಯಿಸುವಂತೆ ರೈತರು ಕೋರಿದ್ದಾರೆ. ಮಾರ್ಗ ಬದಲಾವಣೆ ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿರುವುದರಿಂದ ರೈತರಿಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು ಹಲವಾರು ಬಾರಿ ಸಭೆ ನಿಗದಿಪಡಿಸಲಾಗಿದೆ. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ ಎಂದರು. ಇನ್ನು 608ರ ಪೈಕಿ 444 ರಲ್ಲಿ ಕೆಲಸ ಆರಂಭಗೊಂಡಿದ್ದು, ಕೇವಲ 150 ಎಕರೆ ಜಮೀನು ಸ್ವಾಧೀನದ ಬಗ್ಗೆ ಮಾತ್ರ ಸಮಸ್ಯೆ ಉದ್ಭವಿಸಿದೆ ಎಂದು ಭೂಸ್ವಾಧೀನಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.

ಈಗಾಗಲೇ ಕಾಮಗಾರಿ ಆರಂಭಗೊಂಡಿರುವುದರಿಂದ ಆದಷ್ಟು ಬೇಗನೇ ಇನ್ನುಳಿದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಸದೆ ಮಂಗಳಾ ಅಂಗಡಿ ತಿಳಿಸಿದರು. ಬೆಳಗಾವಿ-ಧಾರವಾಡ ರೈಲು ಯೋಜನೆ ಮಹತ್ವದ ಯೋಜನೆಯಾಗಿದೆ. ಆದ್ದರಿಂದ ಸಮಸ್ಯೆ ಇರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಯೋಜನೆ ವಿಳಂಬವಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

280 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸ್ವಂತ ಟ್ಯಾಂಕರ್ ಖರೀದಿಸಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳಿನಲ್ಲಿ ಟ್ಯಾಂಕರ್ ಖರೀದಿಸಲಾಗುವುದು ಜಿಪಂ ಸಿಇಒ ರಾಹುಲ್ ಶಿಂಧೆ ತಿಳಿಸಿದರು.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ಸಮಸ್ಯೆ ನಿರ್ವಹಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಬಾವಿಗಳನ್ನು ಗುರುತಿಸಲಾಗಿದೆ. ಆಯವ್ಯಯದಲ್ಲೂ ಅನುದಾನ ತೆಗೆದಿರಿಸಲಾಗಿದೆ. ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್‌ಗಳನ್ನು ಕೂಡ ಖರೀದಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ‌‌.ಎನ್.ಲೋಕೇಶ್ ವಿವರಿಸಿದರು.

ಇದೇ ವೇಳೆ ಗ್ರಾಮ ಪಂಚಾಯಿತಿಯಲ್ಲಿ ಅನುಕಂಪ ಆಧಾರಿತವಾಗಿ ನೇಮಕಗೊಂಡ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೇಮಕಾತಿ ಆದೇಶಪತ್ರವನ್ನು ವಿತರಿಸಿದರು. ಶಾಸಕರಾದ ದುರ್ಯೋಧನ ಐಹೊಳೆ, ಆಸಿಫ್(ರಾಜು) ಸೇಠ್, ವಿಠ್ಠಲ ಹಲಗೇಕರ್, ಬಾಬಾಸಾಹೇಬ ಪಾಟೀಲ, ಮಹೇಂದ್ರ ತಮ್ಮಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಸೇರಿ‌ ಮತ್ತಿತರರು‌ ಇದ್ದರು.

ಇದನ್ನೂಓದಿ:ಗ್ರಾ.ಪಂ ಕುಂದುಕೊರತೆ ದಾಖಲಿಸಲು ವಾಟ್ಸ್​ಆ್ಯಪ್ ಚಾಟ್​ಬಾಟ್: 'ಪಂಚಮಿತ್ರ ಪೋರ್ಟಲ್'​ಗೆ ಚಾಲನೆ

ABOUT THE AUTHOR

...view details