ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಿದ 112 ಸಿಬ್ಬಂದಿ (ETV Bharat) ಶಿವಮೊಗ್ಗ:ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಸಾಹಸದಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವ ಯುವಕನ ಜೀವ ಉಳಿದಿದೆ. ಹೌದು, ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಪಕ್ಕದ ಕೊಮ್ಮನಾಳು ಸಮೀಪದ ಖಾಸಗಿ ಶಾಲೆಯೊಂದರ ಬಳಿ ನಿನ್ನೆ ಭಾರಿ ಮಳೆಯಿಂದ ರಸ್ತೆ ಮೇಲೆಯೇ ನೀರು ಹರಿಯುತ್ತಿತ್ತು. ಗುಡ್ಡದ ಮೇಲೆ ಬಿದ್ದ ಮಳೆಯ ನೀರು ರಸ್ತೆ ಮೇಲೆ ಹರಿದು ತಗ್ಗು ಪ್ರದೇಶಗಳಿಗೆ ನುಗ್ಗಿತ್ತು.
ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದ ವೇಳೆ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಪ್ರದೀಪ್ ಎಂಬವರು ತಮ್ಮ ಬೈಕ್ನಲ್ಲಿ ನ್ಯಾಮತಿಯ ದೊಡ್ಡೆತ್ತಿನಳ್ಳಿಯ ಕಡೆಗೆ ಹೊರಟಿದ್ದರು. ನೀರಿನ ರಭಸ ಅರಿಯದ ಅವರು ಅದೇ ರೋಡಿನಲ್ಲಿ ಮುಂದಕ್ಕೆ ಹೋಗಿದ್ದರು. ಪರಿಣಾಮ ಹರಿಯುವ ನೀರಿನಲ್ಲಿ ಅವರು ಕೊಚ್ಚಿಕೊಂಡು ರಸ್ತೆಯ ಪಕ್ಕದಲ್ಲಿದ್ದ ಪ್ಲಾಂಟೇಷನೊಳಗೆ ಹೋಗಿದ್ದಾರೆ. ಈ ದೃಶ್ಯವನ್ನು ಕಂಡ ವ್ಯಕ್ತಿಯೊಬ್ಬರು 112 ನಂಬರ್ಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇಷ್ಟಾಗುವ ಹೊತ್ತಿಗೆ ಗಂಟೆ ರಾತ್ರಿ 11.30 ಆಗಿತ್ತು.
ಜೀವ ಉಳಿಸಿದ 112 ಪೊಲೀಸ್ ಸಿಬ್ಬಂದಿ: ವಿಷಯ ತಿಳಿದ ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್ ಹಾಗೂ ಡ್ರೈವರ್ ಪ್ರಸನ್ನ 112ಕ್ಕೆ ಕರೆ ಮಾಡಿದ ವ್ಯಕ್ತಿಯನ್ನು ಸಂಪರ್ಕ ಮಾಡಲು ಯತ್ನಿಸಿದ್ದಾರೆ. ಆದರೆ, ಮಾಹಿತಿ ನೀಡಿದ್ದ ವ್ಯಕ್ತಿ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಮೊದಲು ಫೇಕ್ ಕಾಲ್ ಇರಬಹುದು ಎಂದು ಕೊಂಡಿದ್ದ ಸಿಬ್ಬಂದಿ ನಿರ್ಲಕ್ಷಿಸುವುದು ಮಾಡುವುದು ಬೇಡ ಎಂದು ಸಮರೋಪಾದಿಯಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಆಗ ವೃದ್ಧರೊಬ್ಬರು ವ್ಯಕ್ತಿಯೊಬ್ಬನ ರಕ್ಷಣೆಗೆ ಮುಂದಾಗಿದ್ದು ಕಂಡು ಬಂದಿದೆ. ತಕ್ಷಣವೇ ವಾಹನದಿಂದ ಇಳಿದ ಸಿಬ್ಬಂದಿ ಖುದ್ದು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರದೀಪ್, ಮರದ ಪೊಟರೆಯ ಬಳಿ ಆಸರೆ ಪಡೆದು ಸಹಾಯಕ್ಕಾಗಿ ಕೂಗುತ್ತಿದ್ದರು. ಆ ವೇಳೆ, ಅಲ್ಲಿಗೆ ಬಂದ ಸಿಬ್ಬಂದಿ ಅವರನ್ನ ರಕ್ಷಣೆ ಮಾಡಿದ್ದಾರೆ. ಆ ಬಳಿಕ ಪ್ರದೀಪ್ರ ಯೋಗಕ್ಷೇಮ ವಿಚಾರಿಸಿ, ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಮತ್ತೊಂದೆಡೆ, ಘಟನೆ ನಡೆದ ಜಾಗದಿಂದ ಸುಮಾರು ದೂರ ಕೊಚ್ಚಿ ಹೋಗಿದ್ದ ಬೈಕ್ ಮರವೊಂದರ ಬುಡದಲ್ಲಿ ಇಂದು ಪತ್ತೆಯಾಗಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಡಕೆ ತೋಟದಲ್ಲಿ ಮಿಶ್ರಬೆಳೆ ಕೋಕೋ ಬೆಳೆದು ಲಕ್ಷಾಂತರ ಹಣ ಗಳಿಸುತ್ತಿರುವ ರೈತ, ಈತನ ಸಾವಯವ ಕೃಷಿ ಮಾದರಿ - successful farmer in cocoa farming