Nitish Kumar Reddy: ಮಕ್ಕಳ ಜೀವನವನ್ನು ರೂಪಿಸಿಲು ತನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ಹಗಲು-ರಾತ್ರಿ ಕಷ್ಟಪಡುವ ಜೀವಿ ಎಂದರೆ ಅದು ಅಪ್ಪ. ಮಕ್ಕಳ ಭವಿಷ್ಯಕ್ಕಾಗಿ ಎಷ್ಟು ಕಷ್ಟಗಳನ್ನಾದರೂ ನುಂಗಿ ಭವಿಷ್ಯವನ್ನು ರೂಪಿಸುವ ಗುರು ಕೂಡ ಹೌದು. ತ್ಯಾಗರೂಪಿ ತಂದೆಯ ಮುಂದೆ ಮಕ್ಕಳು ಯಶಸ್ಸು ಸಾಧಿಸಿದಾಗ ಅವರಿಗಾಗುವ ಖುಷಿ ಎಷ್ಟು ಎಂಬುದಕ್ಕೆ ಮೆಲ್ಬೋರ್ನ್ ಮೈದಾನ ಸಾಕ್ಷಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಶತಕ ಸಿಡಿಸಿ ಸಂಚಲನ ಸೃಷ್ಟಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್ಗೆ ಕಾಲಿಟ್ಟ ನಿತೀಶ್ ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದರು. ಒಟ್ಟು 171 ಎಸೆತಗಳನ್ನು ಎದುರಿಸಿದ ನಿತೀಶ್, 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯವಾಗಿ ಶತಕ ಸಿಡಿಸಿದರು. ಇದೇ ಮೈದಾನದಲ್ಲಿ ಮಗನ ಪಂದ್ಯ ವೀಕ್ಷಿಸಲು ಬಂದಿದ್ದ ತಂದೆ ಮುತ್ಯಾಲ ರೆಡ್ಡಿ, ನಿತೀಶ್ ಬ್ಯಾಟ್ನಿಂದ ಶತಕ ಬರುತ್ತಿದ್ದಂತೆ ಮೈದಾನದಲ್ಲೇ ಭಾವುಕರಾದರು. ನಿತೀಶ್ ಅವರ ಈ ಸಾಧನೆಯ ಹಿಂದೆ ತಂದೆಯ ತ್ಯಾಗ ದೊಡ್ಡದಿದೆ.
ಮಗನಿಗಾಗಿ ಅಪ್ಪನ ಮಹಾತ್ಯಾಗ:ಹೌದು, ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಮುತ್ಯಾಲ ರೆಡ್ಡಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಅವರು ಸರ್ಕಾರಿ ನೌಕರಿಯನ್ನೇ ಬಿಟ್ಟಿದ್ದರು. ನಿತೀಶ್ ರೆಡ್ಡಿ ಅವರದ್ದು ಮಧ್ಯಮ ವರ್ಗದ ಕುಟುಂಬ. ಅವರ ತಂದೆ ಮುತ್ಯಾಲ ರೆಡ್ಡಿ ಕಷ್ಟಪಟ್ಟು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಂಡಿದ್ದರು.
ಆದರೆ ಅದೃಷ್ಟವೋ, ದುರಾದೃಷ್ಟವೋ ಮುತ್ಯಾಲ ರೆಡ್ಡಿ ಅವರನ್ನು ರಾಜಸ್ಥಾನಕ್ಕೆ ವರ್ಗಾವಣೆ ಮಾಡಲಾಯ್ತು. ಆದ್ರೆ, ಇದೇ ತನ್ನ ಮಗನ ಕ್ರಿಕೆಟ್ಗೆ ಎಲ್ಲಿ ಅಡ್ಡಿ ಆಗುತ್ತೋ ಎಂದು ಮುತ್ಯಾಲ ರೆಡ್ಡಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅವರ ಈ ನಿರ್ಧಾರವನ್ನು ಸಂಬಂಧಿಕರು ಟೀಕಿಸಿದ್ದರು. ಆದ್ರೂ ಮಗನಿಗಾಗಿ ಎಲ್ಲವನ್ನೂ ಸಹಿಸಿಕೊಂಡರು. ಇಂದು ಅವರ ತ್ಯಾಗ ಮತ್ತು ಶ್ರಮಕ್ಕೆ ಫಲ ಸಿಕ್ಕಿದೆ.
ನನ್ನ ತಂದೆ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ;ತನ್ನ ತಂದೆಯ ತ್ಯಾಗದ ಬಗ್ಗೆ ನಿತೀಶ್ ಬಿಸಿಸಿಐ ಯೊಂದಿಗಿನ ಸಂದರ್ಶನದಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು. ಬಾಲ್ಯದಲ್ಲಿ ನಾನು ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನನ್ನ ತಂದೆ ನನಗಾಗಿ ಕೆಲಸ ಬಿಟ್ಟಿದ್ದರು. ನಾನು ಕ್ರಿಕೆಟಿಗನಾಗಲು ಅವರು ಅನೇಕ ತ್ಯಾಗಗಳನ್ನು ಮಾಡಿದ್ದರು. ಒಮ್ಮೆ ನನ್ನ ತಂದೆ ಹಣಕಾಸಿನ ಸಮಸ್ಯೆಯಿಂದ ಅಳುವುದನ್ನು ನಾನು ಕಣ್ಣಾರೆ ಕಂಡಿದ್ದೆ. ಅಂದೇ ನಾನು ಕ್ರಿಕೆಟರ್ ಆಗಬೇಕೆಂದು ಶಪಥ ಮಾಡಿದ್ದೆ.