ಕರ್ನಾಟಕ

karnataka

ETV Bharat / sports

ಕೆಎಲ್ ರಾಹುಲ್ ವಿರುದ್ದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನ: ತಂಡದ ಸಹಾಯಕ ಕೋಚ್ ಹೇಳಿದ್ದೇನು? - Lance Klusener - LANCE KLUSENER

ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಈ ಚರ್ಚೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಈ ರೀತಿಯ ಸಂಭಾಷಣೆಗಳನ್ನು ನಾವು ಇಷ್ಟಪಡುತ್ತೇವೆ ಎಂದು ಎಲ್‌ಎಸ್‌ಜಿ ತಂಡದ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸೆನರ್​ ಹೇಳಿದ್ದಾರೆ.

ಕೆಎಲ್ ರಾಹುಲ್ ವಿರುದ್ದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನ
ಕೆಎಲ್ ರಾಹುಲ್ ವಿರುದ್ದ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನ (ETV Bharat)

By ETV Bharat Karnataka Team

Published : May 13, 2024, 10:53 PM IST

ನವದೆಹಲಿ:ಲಕ್ನೋ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ಅವರ ನಾಯಕ ಕೆಎಲ್‌ ರಾಹುಲ್‌ ಅವರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದ ಬಗ್ಗೆ ತಂಡದ ಸಹಾಯಕ ಕೋಚ್ ಲ್ಯಾನ್ಸ್ ಕ್ಲೂಸೆನರ್ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಇದು ಚಹಾ ಕಪ್‌ನಲ್ಲಿ ಬಿರುಗಾಳಿ ಎದ್ದಿದೆ. ಇಬ್ಬರು ಕ್ರಿಕೆಟ್ ಪ್ರೇಮಿಗಳ ನಡುವಿನ ಈ ಚರ್ಚೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಂಡದಲ್ಲಿ ಈ ರೀತಿಯ ಸಂಭಾಷಣೆಗಳನ್ನು ನಾವು ಇಷ್ಟಪಡುತ್ತೇವೆ. ಇದು ತಂಡಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದು ನಮಗೆ ದೊಡ್ಡ ವಿಷಯವಲ್ಲ ಎಂದಿದ್ದಾರೆ.

ರಾಹುಲ್ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ, ಅದು ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಈ ಐಪಿಎಲ್ ಅವರಿಗೆ ಕಷ್ಟಕರವಾಗಿತ್ತು. ಏಕೆಂದರೆ ನಮ್ಮ ತಂಡ ಪ್ರತಿ ಪಂದ್ಯದಲ್ಲೂ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು ಇದರಿಂದಾಗಿ ಅವರಿಗೆ ಮುಕ್ತವಾಗಿ ಆಡಲು ಅವಕಾಶ ಸಿಗಲಿಲ್ಲ. ರಾಹುಲ್ ಈ ಆವೃತ್ತಿಯಲ್ಲಿ ಒಂದು ಅಥವಾ ಎರಡು ಶತಕಗಳನ್ನು ಬಾರಿಸಲು ಬಯಸಿದ್ದರು. ಆದರೆ ತಂಡದ ಕಳಪೆ ಆಟದಿಂದಾಗಿ ಅದು ಸಂಭವಿಸಲಿಲ್ಲ. ಅವರು ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಲಕ್ನೋ ಸೂಪರ್‌ಜೈಂಟ್ಸ್ ತಂಡದ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಪಂದ್ಯಗಳನ್ನು ಗೆಲ್ಲುವುದರ ಮೇಲೆ ತಂಡದ ಸಂಪೂರ್ಣ ಗಮನವಿದೆ. ತಂಡ 12 ಪಂದ್ಯಗಳಲ್ಲಿ 6 ಗೆಲುವುಗಳೊಂದಿಗೆ ಏಳನೇ ಸ್ಥಾನದಲ್ಲಿದೆ, ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಲು ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿರ್ವಾಯತೆ ಇದೆ ಹೀಗಾಗಿ ನಾವು ಈ ಬಗ್ಗೆ ಗಮನ ಹರಿಸಿದ್ದೇವೆ ಎಂದು ಹೇಳುವ ಮೂಲಕ ಇಷ್ಟು ದಿನ ಹುಟ್ಟಿಕೊಂಡಿದ್ದ ಹಲವು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಕಳೆದ ವಾರ ನಡೆದ ಪಂದ್ಯದಲ್ಲಿ 166 ರನ್‌ಗಳ ಗುರಿಯನ್ನು ಕೇವಲ 9.4 ಓವರ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೆನ್ನಟ್ಟಿದ ಕಾರಣ ಲಕ್ನೋ ಸೂಪರ್‌ ಜೈಂಟ್ಸ್‌ ಹೀನಾಯ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್​ ಮಾಡಿದ ಎಲ್‌ಎಸ್‌ಜಿ ಒಟ್ಟು 165/4 ಗಳಿಸಿತ್ತು. ನಾಯಕ ಕೆ.ಎಲ್. ರಾಹುಲ್ 33 ಎಸೆತಗಳಲ್ಲಿ 29 ರನ್‌ಗಳ ಬಾರಿಸಿ ನಿಧಾನಗತಿಯ ಆಟವಾಡಿದ್ದರು. ಲಕ್ನೋ ಇನ್ನಿಂಗ್ಸ್‌ ಉದ್ದಕ್ಕೂ ರನ್​ ಗಳಿಸಲು ಹೆಣಗಾಡಿತು ಮತ್ತು ಮೊದಲ 10 ಓವರ್‌ಗಳಲ್ಲಿ ಬ್ಯಾಟರ್‌ಗಳು ಬೌಂಡರಿ ಸಿಡಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಐಪಿಎಲ್ ಸರಣಿಯಲ್ಲಿ 12 ಇನ್ನಿಂಗ್ಸ್ ಆಡಿರುವ ಕೆಎಲ್ ರಾಹುಲ್ 460 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 136.09 ಆಗಿದೆ.

ಕಳೆದ ವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ 10 ವಿಕೆಟ್‌ಗಳ ಹೀನಾಯ ಸೋಲು ಕಂಡ ಬಳಿಕ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ, ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಕೋಪಗೊಂಡು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ವಿವಾದ ಕೂಡ ಹುಟ್ಟಿಕೊಂಡಿತ್ತು. ಅದಾದ ನಂತೆ ಕೆಲವು ಮಾಜಿ ಆಟಗಾರರು ರಾಹುಲ್ ಅವರನ್ನು ಬೆಂಬಲಿಸುವ ಸಂದರ್ಭದಲ್ಲಿ ಗೋಯೆಂಕಾ ಅವರ ವರ್ತನೆಯನ್ನು ಟೀಕಿಸಿದ್ದರು. ಅಲ್ಲದೆ ಅಭಿಮಾನಿಗಳು ಕೂಡ ರಾಹುಲ್​ರನ್ನು ಲಕ್ನೋ ತಂಡವನ್ನು ತೊರೆಯುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ:ದೇಶೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಮುಂದಾದ ಬಿಸಿಸಿಐ: ಎರಡು ಹಂತದಲ್ಲಿ ನಡೆಯಲಿದೆ ರಣಜಿ ಟ್ರೋಫಿ - BCCI announces reforms

ABOUT THE AUTHOR

...view details