2050ನೇ ಇಸ್ವಿಯ ವೇಳೆಗೆ ಭಾರತದ ನಗರಗಳಲ್ಲಿನ ಒಟ್ಟಾರೆ ಜನಸಂಖ್ಯೆ 416 ಮಿಲಿಯನ್ಗೆ ತಲುಪುವ ಸಾಧ್ಯತೆಯಿದ್ದು, ದೇಶವು ಬೃಹತ್ ಪ್ರಮಾಣದ ನಗರೀಕರಣಕ್ಕೆ ಒಳಗಾಗಲಿದೆ. ತಮ್ಮ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಒಟ್ಟಾರೆ ಅಭಿವೃದ್ಧಿ ಪಥದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ನಗರಗಳು ದೇಶದ 'ಬೆಳವಣಿಗೆಯ ಕೇಂದ್ರಗಳು' ಎಂದು ಬಣ್ಣಿಸಿದ್ದಾರೆ. ಆದಾಗ್ಯೂ, ಬಡತನ ಮತ್ತು ಆರ್ಥಿಕ ಅಸಮಾನತೆಯ ದೀರ್ಘಕಾಲದ ಸಮಸ್ಯೆಯ ಹೊರತಾಗಿ, ಮೂಲಸೌಕರ್ಯ ಮತ್ತು ಸೇವಾ ಕೊರತೆಗಳು ಸಹ ನಮ್ಮ ದೇಶದ ನಗರಗಳಲ್ಲಿ ವ್ಯಾಪಕವಾಗಿವೆ.
ದುರ್ಬಲ ನಗರ ಆಡಳಿತ ಸಾಮರ್ಥ್ಯವು ನಗರಗಳು 'ಬೆಳವಣಿಗೆಯ ಕೇಂದ್ರಗಳಾಗುವ' ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಹೀಗಾಗಿ ಸುಸ್ಥಿರ ನಗರಾಭಿವೃದ್ಧಿ ಕಾರ್ಯತಂತ್ರದ ಅಗತ್ಯವನ್ನು ಮನಗಂಡ ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ನಗರಾಭಿವೃದ್ಧಿಗೆ ಬಜೆಟ್ ಅನುದಾನವನ್ನು ಹೆಚ್ಚಿಸಿದೆ.
ಈ ಪ್ರವೃತ್ತಿಗೆ ಅನುಗುಣವಾಗಿ, 2024-25ರ ಪೂರ್ಣ ಬಜೆಟ್ ನಗರಾಭಿವೃದ್ಧಿಯನ್ನು 'ವಿಕಸಿತ್ ಭಾರತ್' ಅನ್ವೇಷಣೆಗಳಿಗೆ ಕೊಡುಗೆ ನೀಡುವ ಪ್ರಮುಖ ಆದ್ಯತೆಯನ್ನಾಗಿ ಪರಿಗಣಿಸಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ ಯುಎ)ಕ್ಕೆ 82576.57 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ. ಇದು 2023-24 ರಲ್ಲಿ ಪರಿಷ್ಕೃತ ಅಂದಾಜು 69270.72 ಕೋಟಿ ರೂ.ಗಿಂತ ಸುಮಾರು 19 ಪ್ರತಿಶತದಷ್ಟು ಹೆಚ್ಚಾಗಿದೆ. ಸುಸ್ಥಿರ ನಗರಾಭಿವೃದ್ಧಿಯ ಅಸಂಖ್ಯಾತ ಸವಾಲುಗಳನ್ನು ಗಮನಿಸಿದರೆ, ಬಜೆಟ್ನಲ್ಲಿ ಇಷ್ಟು ಅನುದಾನ ಮೀಸಲಿಟ್ಟಿರುವುದು ಪ್ರಶಂಸನೀಯವಾಗಿದೆ.
ಅದೇನೇ ಇದ್ದರೂ, ವಿವಿಧ ಯೋಜನೆಗಳಲ್ಲಿ 2023-24 ರ ಪರಿಷ್ಕೃತ ಅಂದಾಜುಗಳು ಮತ್ತು 2024-25 ರ ಬಜೆಟ್ ಅಂದಾಜುಗಳನ್ನು ಹೋಲಿಕೆ ಮಾಡಿದಾಗ ಆಸಕ್ತಿದಾಯಕ ವಿಷಯಗಳು ಕಂಡು ಬರುತ್ತವೆ. ಕೇಂದ್ರ ವಲಯದ ಯೋಜನೆಗಳು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 2024-25ರ ಬಜೆಟ್ನಲ್ಲಿ ಕ್ರಮವಾಗಿ ಶೇಕಡಾ 9.5 ಮತ್ತು ಶೇಕಡಾ 26 ರಷ್ಟು ಅನುದಾನ ಹೆಚ್ಚಿಸಲಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯ ಬಜೆಟ್ ಅನುದಾನದ ಪಾಲು ಶೇಕಡಾ 62 ರಷ್ಟಿದೆ.
ಪಿಎಂಎವೈ (ಯು) ಗೆ 2023-24ರಲ್ಲಿ ನೀಡಲಾಗಿದ್ದ 22103.03 ಕೋಟಿ ರೂ. ಅನುದಾನಕ್ಕೆ ಹೋಲಿಸಿದರೆ ಈ ಬಾರಿ 30170.61 ಕೋಟಿ ರೂ.ಗಳನ್ನು ನೀಡಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳು / ಕಡಿಮೆ ಆದಾಯದ ಗುಂಪಿನ ಜನರಿಗೆ 3000 ಕೋಟಿ ರೂ.ಗಳು ಮತ್ತು ಮಧ್ಯಮ ಆದಾಯದ ಗುಂಪಿಗೆ 1000 ಕೋಟಿ ರೂ.ಗಳ ಬಜೆಟ್ ಅನುದಾನದೊಂದಿಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಯೋಜನೆಯನ್ನು ಮರು ಜಾರಿ ಮಾಡಿರುವುದು ಅವರ ವಸತಿ ಅಗತ್ಯಗಳನ್ನು ಪೂರೈಸಲು ಭಾಗಶಃ ಉಪಯುಕ್ತವಾಗಿದೆ.
ಇದಲ್ಲದೆ, ಒಟ್ಟು ನಿರ್ಮಾಣವಾದ ಮನೆಗಳ ಪೈಕಿ 63 ಪ್ರತಿಶತದಷ್ಟು ಪಾಲು ಹೊಂದಿರುವ ಫಲಾನುಭವಿ ನೇತೃತ್ವದ ನಿರ್ಮಾಣ (ಬಿಎಲ್ಸಿ) ಯೋಜನೆಯು ಪಿಎಂಎವೈ (ಯು) ನ ಅತ್ಯಂತ ಯಶಸ್ವಿ ಯೋಜನೆಯಾಗಿದೆ. ಕೊಳೆಗೇರಿಗಳ ಮರು-ಅಭಿವೃದ್ಧಿ (ಐಎಸ್ಎಸ್ಆರ್) ಯೋಜನೆಯು ಕೊಳೆಗೇರಿ ನಿವಾಸಿಗಳ ವಸತಿ ಕೊರತೆಯನ್ನು ಪರಿಹರಿಸಲು ಅಪಾರ ಸಾಮರ್ಥ್ಯ ಹೊಂದಿದೆ. ಆದರೆ ಇದು ಯೋಜನೆಯಡಿ ನಿರ್ಮಾಣವಾದ ಒಟ್ಟು ಮನೆಗಳ ಕೇವಲ 2.5 ಪ್ರತಿಶತದಷ್ಟು ಮಾತ್ರ ಆಗಿದೆ.
ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಕೊಳೆಗೇರಿಗಳಲ್ಲಿ ವಾಸಿಸುವ ಬಡವರು ಯಾವುದೇ ಭೂಮಿಯ ಮಾಲೀಕತ್ವ ಹೊಂದಿಲ್ಲ. ಹೀಗಾಗಿ ಅವರು ಪಿಎಂಎವೈ (ಯು) ಜಾಲದಿಂದ ಹೊರಗುಳಿದಿದ್ದಾರೆ. ಪಿಎಂಎವೈ (ಯು) ಯೋಜನೆಯು ನಗರ ಬಡವರಿಗಿಂತ ಮಧ್ಯಮ ಮತ್ತು ಹೆಚ್ಚಿನ ಆದಾಯದ ಗುಂಪಿನ ಜನರಿಗೆ ಹೆಚ್ಚು ಪ್ರಯೋಜನ ನೀಡಿದೆ ಎಂದು ತೋರುತ್ತದೆ. ಈ ಹಿನ್ನೆಲೆಯಲ್ಲಿ, ಜಿಐಎಸ್ ಮ್ಯಾಪಿಂಗ್ನೊಂದಿಗೆ ಭೂ ದಾಖಲೆಗಳ ಡಿಜಿಟಲೀಕರಣವನ್ನು ಸರಿಯಾಗಿ ಜಾರಿಗೆ ತಂದರೆ, ಬಡವರಿಗೆ ಭೂ ಹಕ್ಕುಗಳನ್ನು ಒದಗಿಸುವಲ್ಲಿನ ಆಡಳಿತಾತ್ಮಕ ತೊಂದರೆಗಳನ್ನು ನಿವಾರಿಸಬಹುದು. ಬಜೆಟ್ ನಲ್ಲಿ ಕಲ್ಪಿಸಿರುವಂತೆ ಭೂ ಅಭಿವೃದ್ಧಿ ನಿಯಮಗಳಲ್ಲಿನ ಸುಧಾರಣೆಗಳ ಜೊತೆಗೆ ಸರಿಯಾದ ನಗರ ಯೋಜನೆ ಕೂಡ ವಸತಿಗಾಗಿ ನಗರ ಭೂಮಿಯನ್ನು ಸಮರ್ಪಕವಾಗಿ ಪೂರೈಸಲು ಅನುಕೂಲವಾಗುತ್ತದೆ.
ನಗರ ನಿವಾಸಿಗಳ ಪೈಕಿ ಬಹುತೇಕರು ಸ್ವಂತ ಮನೆಯನ್ನು ಹೊಂದುವ ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಗಮನಿಸಿದರೆ, ಹೆಚ್ಚುತ್ತಿರುವ ವಸತಿಯ ಬೇಡಿಕೆಯನ್ನು ಬಾಡಿಗೆ ಮನೆಗಳು ಪೂರೈಸಬಹುದು. ಆದ್ದರಿಂದ, ಬಾಡಿಗೆ ವಸತಿಯ ಬಜೆಟ್ ಪ್ರಸ್ತಾಪ, ನಿರ್ದಿಷ್ಟವಾಗಿ ಕೈಗಾರಿಕಾ ಕಾರ್ಮಿಕರಿಗೆ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮೋಡ್ನಲ್ಲಿ ವಸತಿ ನಿಲಯದಂತಹ ವಸತಿ ನಿರ್ಮಾಣಗಳು ಸಮಯೋಚಿತ ಕ್ರಮಗಳಾಗಿವೆ. ಇದಕ್ಕೂ ಮೊದಲು, 2020 ರಲ್ಲಿ, ಕೇಂದ್ರ ಸರ್ಕಾರವು ನಗರ ಬಡವರ, ವಿಶೇಷವಾಗಿ ಕೋವಿಡ್ 19 ನಿಂದ ತೀವ್ರವಾಗಿ ಹಾನಿಗೊಳಗಾದ ವಲಸಿಗರ ವಸತಿ ಅಗತ್ಯಗಳಿಗೆ ಸ್ಪಂದಿಸಲು ಪಿಎಂಎವೈ - (ಯು) ಅಡಿಯಲ್ಲಿ ಉಪ ಯೋಜನೆಯಾಗಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ (ಎಆರ್ಎಚ್ಸಿ) ನಿರ್ಮಾಣಕ್ಕೆ ಆದ್ಯತೆ ನೀಡಿತ್ತು. ನಗರಗಳಲ್ಲಿನ ಖಾಲಿ ಮನೆಗಳನ್ನು ಪಿಪಿಪಿಗಳ ಮೂಲಕ ಬಾಡಿಗೆಗೆ ಮರುಬಳಕೆ ಮಾಡಲು ಮತ್ತು ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳು ತಮ್ಮ ಸ್ವಂತ ಖಾಲಿ ಭೂಮಿಯಲ್ಲಿ ಬಾಡಿಗೆ ಮನೆಗಳನ್ನು ಅಭಿವೃದ್ಧಿಪಡಿಸಲು ಕೂಡ ಅವಕಾಶಗಳಿವೆ.
ಆದಾಗ್ಯೂ, ಎಆರ್ಎಚ್ಸಿ ಯೋಜನೆಯಡಿ ನಿರ್ಮಿಸಲಾದ ವಾಸದ ಮನೆಗಳು ಕಳಪೆ ಪ್ರದೇಶ, ಮೂಲಭೂತ ನಗರ ಸೇವೆಗಳ ಅಲಭ್ಯತೆ ಮತ್ತು ಖಾಸಗಿ ಬಾಡಿಗೆ ಮಾರುಕಟ್ಟೆಗಿಂತ ಹೆಚ್ಚಿನ ಬಾಡಿಗೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಿದವು. ತೆರಿಗೆ ರಿಯಾಯಿತಿ, ಕಡಿಮೆ ಬಡ್ಡಿದರದಲ್ಲಿ ಯೋಜನಾ ಸಾಲ, ಹೆಚ್ಚುವರಿ ಫ್ಲೋರ್ ಏರಿಯಾ ಅನುಪಾತ (ಎಫ್ಎಆರ್) / ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್ಎಸ್ಐ), ಟ್ರಂಕ್ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಹಲವಾರು ರಿಯಾಯಿತಿಗಳ ಹೊರತಾಗಿಯೂ ಈ ಯೋಜನೆಗೆ ಖಾಸಗಿ ವಲಯದ ಪ್ರತಿಕ್ರಿಯೆ ನೀರಸವಾಗಿತ್ತು.
ಹೆಚ್ಚಿನ ಸಂದರ್ಭಗಳಲ್ಲಿ, ಬಾಡಿಗೆ ಮನೆಗಳ ಲಭ್ಯತೆಯು ಫಲಾನುಭವಿಗಳ ಬಾಡಿಗೆ ಪಾವತಿಸುವ ಸಾಮರ್ಥ್ಯವನ್ನು ಮತ್ತು ಉದ್ಯೋಗದಾತರು ವಸತಿಯನ್ನು ಒದಗಿಸಿದ್ದರೆ ಫಲಾನುಭವಿಯು ಎಷ್ಟು ಅವಧಿಗೆ ಆ ಉದ್ಯೋಗದಲ್ಲಿ ಮುಂದುವರಿಯುತ್ತಾನೆ ಎಂಬ ಅಂಶಗಳನ್ನು ಆಧರಿಸಿದೆ. ಈ ಸಂಕೀರ್ಣತೆಗಳನ್ನು ಗಮನದಲ್ಲಿಟ್ಟುಕೊಂಡು, ದಕ್ಷ ಮತ್ತು ಪಾರದರ್ಶಕ ಬಾಡಿಗೆ ವಸತಿ ಮಾರುಕಟ್ಟೆಗಳಿಗೆ ಸಕ್ರಿಯಗೊಳಿಸುವ ನೀತಿಗಳು ಮತ್ತು ನಿಬಂಧನೆಗಳ ಜಾರಿ ಅಗತ್ಯ ಎಂಬುದನ್ನು ಬಜೆಟ್ ಒತ್ತಿಹೇಳುತ್ತದೆ. ದುರ್ಬಲ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸುವ ನಿಬಂಧನೆಗಳೊಂದಿಗೆ ಮಾದರಿ ಬಾಡಿಗೆ ಕಾಯ್ದೆಯ ಅನುಷ್ಠಾನವನ್ನು ತ್ವರಿತಗೊಳಿಸುವುದು ಮತ್ತು ಬಾಡಿಗೆ ನಿಯಮಗಳನ್ನು ನಿರ್ವಹಿಸಲು ವೃತ್ತಿಪರ ಬಾಡಿಗೆ ನಿರ್ವಹಣಾ ಸಮಿತಿಗಳನ್ನು ಸ್ಥಾಪಿಸುವುದು ಭಾರತದ ಬಾಡಿಗೆ ವಸತಿ ಮಾರುಕಟ್ಟೆಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು ಸಹಾಯ ಮಾಡುತ್ತದೆ.
ಸ್ಮಾರ್ಟ್ ಸಿಟಿ ಮಿಷನ್ನ ವೆಚ್ಚವು 2023-24ರಲ್ಲಿ ಪರಿಷ್ಕೃತ ಅಂದಾಜು 8000 ಕೋಟಿ ರೂ. ಇದ್ದದ್ದು 2024-25ರಲ್ಲಿ 2400 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಅಮೃತ್ ಯೋಜನೆಗೆ 500 ನಗರಗಳಿಗೆ 8000 ಕೋಟಿ ರೂ. ನೀಡಲಾಗಿದೆ. ಇದು 2023-24ರಲ್ಲಿ ಪರಿಷ್ಕೃತ ಅಂದಾಜು 5200 ಕೋಟಿ ರೂ.ಗಿಂತ ಸುಮಾರು 54 ಪ್ರತಿಶತದಷ್ಟು ಹೆಚ್ಚಾಗಿದೆ. ಹಾಗೆಯೇ 2023-24ರಲ್ಲಿ ಇದ್ದ 2550 ಕೋಟಿ ರೂ. ಪರಿಷ್ಕೃತ ಹಂಚಿಕೆಗೆ ಹೋಲಿಸಿದರೆ, ಪ್ರಸ್ತುತ ಬಜೆಟ್ನಲ್ಲಿ ಸ್ವಚ್ಛ ಭಾರತ್ ಮಿಷನ್ (ನಗರ) ಗಾಗಿ 5000 ಕೋಟಿ ರೂ. ನೀಡಲಾಗಿದೆ.