ಕರ್ನಾಟಕ

karnataka

ETV Bharat / international

ಗಾಜಾದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ವಿಚಾರ: ಇಸ್ರೇಲ್​ ಯುದ್ಧ ಕ್ಯಾಬಿನೆಟ್ ಮಹತ್ವದ ಸಭೆ, ಚರ್ಚೆ - Israel War Cabinet - ISRAEL WAR CABINET

ಹಮಾಸ್​ ಒತ್ತೆಯಾಳಾಗಿ ನರಕದಲ್ಲಿರುವ ಇಸ್ರೇಲ್​​ನ ಜನರನ್ನು ಹೊರತರಲು ಬೇಕಾಗಿರುವ ಪ್ರಯತ್ನಗಳ ಬಗ್ಗೆ ನಿನ್ನೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಳಗೊಂಡ ಇಸ್ರೇಲ್​ ಯುದ್ಧ ಕ್ಯಾಬಿನೆಟ್ ಸಭೆ ನಡೆಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

By ETV Bharat Karnataka Team

Published : Apr 22, 2024, 7:22 AM IST

ಟೆಲ್​ಅವೀವ್​, ಇಸ್ರೇಲ್: ಗಾಜಾದಲ್ಲಿ ಬಾಕಿಯಾಗಿರುವ ಇಸ್ರೇಲ್​​ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬೆಳವಣಿಗೆಗಳ ಕುರಿತು ಚರ್ಚಿಸಲು ಇಸ್ರೇಲಿ ಯುದ್ಧ ಕ್ಯಾಬಿನೆಟ್ ಭಾನುವಾರ ತಡರಾತ್ರಿ ಸಭೆ ನಡೆಸಿದೆ ಎಂದು ಇಸ್ರೇಲಿ ಅಧಿಕಾರಿಯನ್ನು ಉಲ್ಲೇಖಿಸಿ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ರಾಷ್ಟ್ರೀಯ ಏಕತಾ ಪಕ್ಷದ ಅಧ್ಯಕ್ಷ ಬೆನ್ನಿ ಗ್ಯಾಂಟ್ಜ್ ಒಳಗೊಂಡು ಇಸ್ರೇಲಿ ಯುದ್ಧ ಕ್ಯಾಬಿನೆಟ್ ಒಟ್ಟು ನಾಲ್ಕು ಸದಸ್ಯರನ್ನು ಹೊಂದಿದೆ.

ಭಾನುವಾರದಂದು ಪಾಸೋವರ್ ಹಬ್ಬ ಆಚರಿಸುವ ಸಲುವಾಗಿ ಇಸ್ರೇಲ್ ಸರ್ಕಾರ ತನ್ನ ಪತ್ರಿಕಾ ಕಚೇರಿಯ ವಿಡಿಯೋ ಹೊರಬಿಟ್ಟಿದೆ. ಆ ವಿಡಿಯೋ ಹೇಳಿಕೆಯಲ್ಲಿ ಪ್ರಧಾನಿ ನೆತನ್ಯಾಹು, " ನಮ್ಮ ಪ್ರೀತಿಯ 133 ಸಹೋದರರು ಮತ್ತು ಸಹೋದರಿಯರು ಹಮಾಸ್​​​ ನರಕದಲ್ಲಿ ಸೆರೆಯಾಗಿದ್ದು, ಈ ಹಬ್ಬದ ರಾತ್ರಿ ಅವರು ಭೋಜನದ ಟೇಬಲ್​(Seder table)ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜತೆಗೆ ಹಮಾಸ್​ ಒತ್ತೆಯಾಳು ಒಪ್ಪಂದದ ಪ್ರಸ್ತಾಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಇಸ್ರೇಲ್ ಶೀಘ್ರದಲ್ಲೇ ಹಮಾಸ್​ಗೆ ಏಟು ನೀಡಲಿದ್ದು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಮೇಲೆ ಮಿಲಿಟರಿ ಮತ್ತು ರಾಜಕೀಯ ಒತ್ತಡ ಹೇರಲಿದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆ ಹಿಂದಿನ ವಾರಗಳಲ್ಲಿ ಅಂತಾರಾಷ್ಟ್ರೀಯ ಮಧ್ಯವರ್ತಿಗಳು ಹಮಾಸ್​ ಮತ್ತು ಇಸ್ರೇಲ್​ ನಡುವಿನ ಕದನ ವಿರಾಮ, ಒತ್ತೆಯಾಳುಗಳ ಒಪ್ಪಂದದ ಕುರಿತು ಮಾತುಕತೆಗಳನ್ನು ನಡೆಸಿದ್ದಾರೆ. ಆದರೂ ಆ ಮಾತುಕತೆಗಳು ಯಾವುದೇ ಫಲ ನೀಡಿಲ್ಲ. ಇನ್ನು ಈ ಬಗ್ಗೆ ತಿಂಗಳ ಆರಂಭದಲ್ಲಿ ಹಮಾಸ್,​ 'ಕದನ ವಿರಾಮ ಒಪ್ಪಂದದ ಮೊದಲ ಹಂತಕ್ಕೆ ಅಗತ್ಯವಿರುವ 40 ಇಸ್ರೇಲಿ ಒತ್ತೆಯಾಳುಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ' ಎಂದು ಹೇಳಿತ್ತು.

ಸಮಾಲೋಚಕರ ಪ್ರಕಾರ, ಹಮಾಸ್​ ಮತ್ತು ಇಸ್ರೇಲ್​​ ನಡುವಿನ ಯುದ್ಧದಲ್ಲಿ ಮೊದಲ 6 ವಾರಗಳ ವಿರಾಮದ ಅವಧಿಯಲ್ಲಿ 'ಎಲ್ಲಾ ಮಹಿಳೆಯರು ಮತ್ತು ರೋಗಿಗಳು ಮತ್ತು ವಯಸ್ಸಾದ ಪುರುಷರು ಸೇರಿದಂತೆ ಒಟ್ಟು 40 ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಬೇಕು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ನೂರಾರು ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿತ್ತು.

ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ನಿನ್ನೆ ಬೀರ್ಶೆಬಾದಲ್ಲಿರುವ ಸದರ್ನ್ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಯುದ್ಧ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಇಸ್ರೇಲ್​ನ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಐಡಿಎಫ್ ಪ್ರಕಾರ, ಇಸ್ರೇಲ್‌ನ ಸದರ್ನ್ ಕಮಾಂಡ್ ಮುಖ್ಯಸ್ಥ ಮೇಜರ್ ಜನರಲ್ ಯಾರೋನ್ ಫಿಂಕೆಲ್‌ಮನ್ ಹಾಗೂ ಉಳಿದ ಅಧಿಕಾರಿಗಳು ಕೂಡ ಅನುಮೋದನೆ ಸಮಯದಲ್ಲಿ ಭಾಗಿಯಾಗಿದ್ದರು.

ಇನ್ನು, ಇಸ್ರೇಲಿಯ ಸೈನಿಕರು ಪಶ್ಚಿಮ ದಂಡೆಯ ತುಲ್ಕರ್ಮ್ ಬಳಿಯ ನೂರ್ ಅಲ್-ಶಮ್ಸ್ ನಿರಾಶ್ರಿತರ ಶಿಬಿರದಲ್ಲಿ 2 ದಿನಗಳ ತಮ್ಮ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಐಡಿಎಫ್​​ ತಿಳಿಸಿದೆ. ಈ ಇಸ್ರೇಲಿ ಸೈನಿಕರ ಕಾರ್ಯಾಚರಣೆಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಮತ್ತು ವಾಫಾ ಸುದ್ದಿ ಸಂಸ್ಥೆ ತಿಳಿಸಿದೆ. ಐಡಿಎಫ್ ಪ್ರಕಾರ ಗುರುವಾರ ಪ್ರಾರಂಭವಾದ ಅದರ ವ್ಯಾಪಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಇಸ್ರೇಲ್​ ಭದ್ರತಾ ಪಡೆಗಳು 10 ಭಯೋತ್ಪಾದಕರನ್ನು ಹತ್ಯೆ ಮಾಡಿದ್ದು, 8 ವಾಂಟೆಡ್ ಶಂಕಿತರನ್ನು ಬಂಧಿಸಿವೆ.

ಇದನ್ನೂ ಓದಿ:ಗಾಜಾ ಮೇಲೆ ಇಸ್ರೇಲ್​ ದಾಳಿ; ಮಕ್ಕಳು ಸೇರಿ 14 ಜನ ಸಾವು - Israeli strikes on the Gaza

ABOUT THE AUTHOR

...view details