ಕರ್ನಾಟಕ

karnataka

ETV Bharat / international

ಕೀನ್ಯಾದಲ್ಲಿ 10 ಲಕ್ಷ ಜನರಿಗೆ ಆಹಾರ ಕೊರತೆ: 23 ಕೌಂಟಿಗಳಲ್ಲಿ ಕ್ಷಾಮ

ಕೀನ್ಯಾದಲ್ಲಿ ಕನಿಷ್ಠ ಒಂದು ದಶಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳಿದೆ.

By ETV Bharat Karnataka Team

Published : 6 hours ago

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನೈರೋಬಿ: ಕೀನ್ಯಾದಲ್ಲಿ ಕನಿಷ್ಠ ಒಂದು ದಶಲಕ್ಷ ಜನರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ತಕ್ಷಣದಲ್ಲಿ ಮಾನವೀಯ ಸಹಾಯ ನೀಡುವುದು ಅಗತ್ಯವಾಗಿದೆ ಎಂದು ದೇಶದ ರಾಷ್ಟ್ರೀಯ ಬರ ನಿರ್ವಹಣಾ ಪ್ರಾಧಿಕಾರ (ಎನ್​​ಡಿಎಂಎ) ಸೋಮವಾರ ತಿಳಿಸಿದೆ. ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ 47 ಕೌಂಟಿಗಳ ಪೈಕಿ 23 ಕೌಂಟಿಗಳಲ್ಲಿನ ಜನ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿಸಲಾಗಿದ್ದು, ಈ ಪ್ರದೇಶಗಳನ್ನು ಬರ ಪೀಡಿತ ಎಂದು ಗುರುತಿಸಲಾಗಿದೆ.

ತೀವ್ರ ಅಪೌಷ್ಟಿಕತೆಗೆ ಒಳಗಾಗಿ, ಚಿಕಿತ್ಸೆ ಅಗತ್ಯವಿರುವ 6 ರಿಂದ 59 ತಿಂಗಳ ವಯಸ್ಸಿನ ಮಕ್ಕಳ ಸಂಖ್ಯೆ ಫೆಬ್ರವರಿಯಲ್ಲಿ ಇದ್ದ 8,47,932 ರಿಂದ ಆಗಸ್ಟ್​ನಲ್ಲಿ 7,60,488 ಕ್ಕೆ ಇಳಿಕೆಯಾಗಿದೆ ಎಂದು ಬರ ನಿರ್ವಹಣಾ ಪ್ರಾಧಿಕಾರ ವರದಿಯಲ್ಲಿ ಉಲ್ಲೇಖಿಸಿದೆ.

ಏತನ್ಮಧ್ಯೆ, ತೀವ್ರ ಅಪೌಷ್ಟಿಕತೆಗೀಡಾಗಿ ಚಿಕಿತ್ಸೆ ಅಗತ್ಯವಿರುವ ಒಟ್ಟು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಸಂಖ್ಯೆ 1,12,401 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಿನನಿತ್ಯದ ಇತರ ವೆಚ್ಚಗಳಿಗಾಗಿ ತಾವು ಬೆಳೆದ ಬಹುತೇಕ ಬೆಳೆಗಳನ್ನು ಜನ ಮಾರಾಟ ಮಾಡುವುದರಿಂದ ಅವರು ಆಹಾರ ಅಭದ್ರತೆ ಅನುಭವಿಸುವಂತಾಗಿದೆ ಎಂದು ಎನ್​ಡಿಎಂಎ ಬಹಿರಂಗಪಡಿಸಿದೆ.

ಜುಲೈನಲ್ಲಿ ಬಿಡುಗಡೆಯಾದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮತ್ತು ಅಭಿವೃದ್ಧಿಯ ಅಂತರ್​ ಸರ್ಕಾರೀಯ ಪ್ರಾಧಿಕಾರ (ಐಜಿಎಡಿ)ದ ವರದಿಯ ಪ್ರಕಾರ, ಆಫ್ರಿಕಾದ ದೇಶಗಳಲ್ಲಿ 66.7 ಮಿಲಿಯನ್ ಜನ ಆಹಾರ ಕೊರತೆ ಎದುರಿಸುತ್ತಿದ್ದಾರೆ. ಇದರಲ್ಲಿ 39.1 ಮಿಲಿಯನ್ ಜನರು ಐಜಿಎಡಿ ಸದಸ್ಯ ರಾಷ್ಟ್ರಗಳಾದ ಜಿಬೌಟಿ, ಕೀನ್ಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಸುಡಾನ್ ಮತ್ತು ಉಗಾಂಡಾದಲ್ಲಿದ್ದಾರೆ.

ಐಎಂಎಫ್​ನಿಂದ ಕೀನ್ಯಾ ಸರ್ಕಾರದ ಭ್ರಷ್ಟಾಚಾರ ತನಿಖೆ: ಕೀನ್ಯಾದ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಅಧಿಕೃತ ಪರಾಮರ್ಶೆ ನಡೆಸುವಂತೆ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಕೀನ್ಯಾ ಮನವಿ ಮಾಡಿದೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕೀನ್ಯಾದ ಆರ್ಥಿಕತೆ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುತ್ತಿರುವ ಎಂದಿಗೂ ಮುಗಿಯದ ಭ್ರಷ್ಟಾಚಾರವನ್ನು ಸರ್ಕಾರ ನಿಗ್ರಹಿಸುವಂತಾಗಲು ಐಎಂಎಫ್ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಪರಿಶೀಲನೆ ಮಾಡಲಿದೆ ಎಂದು ವಿದೇಶಾಂಗ ಮತ್ತು ವಲಸಿಗ ವ್ಯವಹಾರಗಳ ಕ್ಯಾಬಿನೆಟ್ ಕಾರ್ಯದರ್ಶಿಯೂ ಆಗಿರುವ ಪ್ರಧಾನ ಕ್ಯಾಬಿನೆಟ್ ಕಾರ್ಯದರ್ಶಿ ಮುಸಾಲಿಯಾ ಮುದವಾಡಿ ಹೇಳಿದರು.

ಭ್ರಷ್ಟಾಚಾರ ನಿಗ್ರಹಕ್ಕೆ ಆಗ್ರಹಿಸಿ ಯುವ ಜನತೆ ತೀವ್ರ ಪ್ರತಿಭಟನೆ ನಡೆಸಿದ ನಂತರ ಆಡಳಿತದಲ್ಲಿ ಸುಧಾರಣೆ ತರುವುದು ಅಧ್ಯಕ್ಷ ವಿಲಿಯಂ ರುಟೊ ಸರ್ಕಾರಕ್ಕೆ ಈಗ ಅನಿವಾರ್ಯವಾಗಿದೆ. ಇದೇ ಕಾರಣದಿಂದ ಸರ್ಕಾರವು ತನ್ನ ಆಡಳಿತಾತ್ಮಕ ವಿಷಯಗಳ ಬಗ್ಗೆ ಮೌಲ್ಯಮಾಪನ ಮಾಡುವಂತೆ ಐಎಂಎಫ್​ಗೆ ಕೋರಿದೆ ಎನ್ನಲಾಗಿದೆ.

ಇದನ್ನೂ ಓದಿ: 5 ದಿನ ಡಿಜಿಟಲ್ ಅರೆಸ್ಟ್​, ನಕಲಿ ವಿಚಾರಣೆ: ಮಹಿಳೆಗೆ 46 ಲಕ್ಷ ರೂ. ದೋಖಾ!

ABOUT THE AUTHOR

...view details