Health benefits of papaya for Diabetes and High BP:ಯಾವುದೇ ಋತುಮಾನವಿರಲಿ ಪಪ್ಪಾಯಿ ಹಣ್ಣು ಲಭ್ಯವಿರುತ್ತದೆ. ಸಿಹಿ ರುಚಿಯನ್ನು ಹೊಂದಿರುವ ಹಳದಿ ಬಣ್ಣವಿರುವ ಪಪ್ಪಾಯಿ ಹಲವು ಪೌಷ್ಟಿಕಾಂಶಗಳನ್ನು ಹೊಂದಿದೆ. ಈ ಹಣ್ಣು ವಿಟಮಿನ್ ಎ, ಸಿ, ಇ, ಫೋಲೇಟ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿದೆ. ಇದು ನಮ್ಮ ದೇಹಕ್ಕೆ ಹಲವು ಪ್ರಯೋಜನಗಳು ಒದಗಿಸಲು ಸಹಾಯ ಮಾಡುತ್ತದೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಪಪ್ಪಾಯಿ ಸೇವಿಸಬಹುದೇ? ಈ ಕುರಿತಂತೆ ಅನೇಕ ಜನರಿಗಿರುವ ಅನುಮಾನಗಳ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.
ಪಪ್ಪಾಯಿ ಹಣ್ಣಿನ ಆರೋಗ್ಯದ ಲಾಭಗಳು:
ಜೀರ್ಣಕ್ರಿಯೆ ಸುಧಾರಿಸುತ್ತೆ:ಪ್ರತಿದಿನ ಪಪ್ಪಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ಪಪೈನ್ ಎಂಬ ಕಿಣ್ವವು ಜೀರ್ಣಕಾರಿ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಹೃದಯದ ಆರೋಗ್ಯಕ್ಕೆ ಪೂರಕ: ಪಪ್ಪಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಲೈಕೋಪೀನ್ ಹಾಗೂ ವಿಟಮಿನ್ ಸಿ ಅಧಿಕವಾಗಿದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ. ಇದರಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕ್ಯಾನ್ಸರ್ ತಡೆಯುತ್ತೆ: ಈ ಹಣ್ಣಿನಲ್ಲಿರುವ ಲೈಕೋಪೀನ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕವು ಕೆಲವು ರೀತಿಯ ಕ್ಯಾನ್ಸರ್ ತಡೆಯುತ್ತದೆ ಎನ್ನುವುದನ್ನು ಅಧ್ಯಯನಗಳು ಬಹಿರಂಗಪಡಿಸಿವೆ ಎಂದು ತಜ್ಞರು ತಿಳಿಸುತ್ತಾರೆ.
ರೋಗನಿರೋಧಕ ಶಕ್ತಿ ಹೆಚ್ಚುತ್ತೆ:ಪಪ್ಪಾಯಿ ಸೇವನೆಯಿಂದ ದೇಹಕ್ಕೆ ಜೀವಸತ್ವಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿ ದೊರೆಯುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೈಸರ್ಗಿಕವಾಗಿ ನಿರ್ವಿಶೀಕರಣ:ಪಪ್ಪಾಯಿಯಲ್ಲಿ ಫೈಬರ್ ಹಾಗೂ ನೀರಿನ ಅಂಶ ಹೆಚ್ಚಿದೆ. ಇದು ನೈಸರ್ಗಿಕ ನಿರ್ವಿಶೀಕರಣಕಾರಕವಾಗಿ ಕಾರ್ಯನಿರ್ವಹಿಸುತ್ತದೆ. ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ಸುಲಭವಾಗಿ ತೆಗೆದುಹಾಕುವಲ್ಲಿ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
ಮಧುಮೇಹ & ಅಧಿಕ ರಕ್ತದೊತ್ತಡ ಇರುವವರು ಪಪ್ಪಾಯಿ ಸೇವಿಸಬಹುದೇ?:ಮಧುಮೇಹದಿಂದ ಬಳಲುತ್ತಿರುವವರು ಪಪ್ಪಾಯಿ ಸೇವಿಸಬಹುದು. ಆದ್ರೆ, ಇವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಪಪ್ಪಾಯಿಯು ಮಧ್ಯಮ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಪಪ್ಪಾಯ ಸೇವನೆ ಮಾಡುವುದರಿಂದ ಹೆಚ್ಚಿನ ಗ್ಲೈಸೆಮಿಕ್ ಹಣ್ಣುಗಳಿಗೆ ಹೋಲಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಾಗುವುದಿಲ್ಲ. ಪಪ್ಪಾಯಿಯಲ್ಲಿರುವ ಫ್ಲೇವನಾಯ್ಡ್ಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಜರ್ನಲ್ ಆಫ್ ಫಂಕ್ಷನಲ್ ಫುಡ್ಸ್ನಲ್ಲಿ ಪ್ರಕಟವಾದ 2019ರ ಅಧ್ಯಯನವು ಪಪ್ಪಾಯಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ ಹಾಗೂ ಉರಿಯೂತ ಕಡಿಮೆ ಮಾಡುತ್ತದೆ ಎಂಬುದು ತಿಳಿದಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯದಲ್ಲಿ ಪ್ರಕಟವಾದ ಅಧ್ಯಯನದಲ್ಲಿಯೂ ಇದೇ ವಿಷಯವು ಸ್ಪಷ್ಟವಾಗಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಮಧುಮೇಹಿಗಳಿಗೆ ಮಾತ್ರವಲ್ಲದೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಪಪ್ಪಾಯಿ ಹಣ್ಣು ಪ್ರಯೋಜನಕಾರಿಯಾಗಿದೆ. ಏಕೆಂದರೆ ಪಪ್ಪಾಯಿಯಲ್ಲಿ ಪೊಟ್ಯಾಸಿಯಮ್ ಹೇರಳವಾಗಿದೆ. ಇದು ದೇಹದಿಂದ ಹೆಚ್ಚುವರಿ ಸೋಡಿಯಂ ತೆಗೆದುಹಾಕುವಲ್ಲಿ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ರೆ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದನ್ನು ಹಿತಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಪಪ್ಪಾಯಿ ಸೇವಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ ಎಂದು ತಜ್ಞರು ವಿವರಿಸುತ್ತಾರೆ.
ಓದುಗರಿಗೆ ವಿಶೇಷ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.