ಕರ್ನಾಟಕ

karnataka

By ETV Bharat Karnataka Team

Published : Feb 25, 2024, 10:49 AM IST

ETV Bharat / health

ಕಲುಷಿತ ಗಾಳಿಗೆ ನಿರಂತರವಾಗಿ ಒಡ್ಡಿಕೊಂಡರೆ ಹೃದಯಾಘಾತದ ಅಪಾಯ: ಅಧ್ಯಯನ

ಕಲುಷಿತ ಗಾಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ವಾಯು ಮಾಲಿನ್ಯಕ್ಕೆ ಯಾವುದೇ ಸುರಕ್ಷಿತ ಮಿತಿ ಇಲ್ಲ ಎಂಬುದಾಗಿ ಬ್ರಿಟಿಷ್ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳುತ್ತದೆ.

Air quality and heart attacks
ಕಲುಷಿತ ಗಾಳಿಗೆ ನಿರಂತರವಾಗಿ ಒಡ್ಡಿಕೊಂಡರೆ ಹೃದಯಾಘಾತದ ಅಪಾಯ ಹೆಚ್ಚಳ

ನವದೆಹಲಿ: ಪ್ರತಿ ಚಳಿಗಾಲದ ಸಮಯದಲ್ಲಿ ಕೆಲವು ವಾರಗಳವರೆಗೆ ದೇಶದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ತೀರಾ ಕಳಪೆ ಮಟ್ಟ ತಲುಪುತ್ತದೆ. ಇದು ಜನರ ಆರೋಗ್ಯದ ಮೇಲೆ ತೀವ್ರ ಸ್ವರೂಪದ ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಇದೀಗ ವಿಜ್ಞಾನಿಗಳು ಹೇಳುವಂತೆ, ವಾಯುಮಾಲಿನ್ಯಕ್ಕೆ ಯಾವುದೇ ಸುರಕ್ಷಿತ ಮಿತಿ ಎಂಬುದಿಲ್ಲ. ಇದರ ಜೊತೆಗೆ ಹೆಚ್ಚಿನ ಮಟ್ಟದ ವಾಯು ಮಾಲಿನ್ಯವನ್ನು ಸರಿಪಡಿಸುವ ಕಾರ್ಯವೂ ಅಸಾಧ್ಯವಾಗಿದೆ. ಕಡಿಮೆ ಅಥವಾ ಮಧ್ಯಮ ಮಟ್ಟದ ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ದೇಹದ ರಕ್ತನಾಳಗಳಿಗೆ ಹಾನಿಯಾಗುತ್ತದೆ. ಹೃದಯಾಘಾತದ ಅಪಾಯವನ್ನೂ ಇದು ಹೆಚ್ಚಿಸಬಲ್ಲದು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.

''ಕಡಿಮೆ ಮಟ್ಟದ ವಾಯು ಮಾಲಿನ್ಯಕ್ಕೆ ನಿರಂತರವಾಗಿ ಒಡ್ಡುವಿಕೆಯು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಈ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ'' ಎಂದು ಹಿರಿಯ ಹೃದ್ರೋಗ ತಜ್ಞ ಮತ್ತು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸಂಸ್ಥಾಪಕ ಡಾ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.

ಕಲುಷಿತ ಗಾಳಿ ಮತ್ತು ಹೃದಯದ ಆರೋಗ್ಯದ ನಡುವೆ ನಿರಂತರ ಸಂಬಂಧವಿದೆ. ಗಾಳಿಯ ಗುಣಮಟ್ಟಕ್ಕಾಗಿ ನಾವು ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿಗಳನ್ನು ಅನುಸರಿಸಿದರೆ ಮಾತ್ರ ಇದರಿಂದಾಗುವ ಪರಿಣಾಮಗಳನ್ನು ತಡೆಯಬಹುದು. ಸೂಕ್ಷ್ಮ ಗಾತ್ರದ ಕಣಗಳ ಪಿಎಂ 2.5ಗೆ ದೀರ್ಘಕಾಲದವರೆಗೆ ಒಡ್ಡಿಕೊಂಡರೆ, ಹೃದಯರಕ್ತನಾಳದ ಕಾಯಿಲೆಯ ಅಪಾಯ ಜಾಸ್ತಿ ಮತ್ತು ಇದಕ್ಕೆ ಯಾವುದೇ ಸುರಕ್ಷಿತ ಮಿತಿ ಇಲ್ಲ ಎಂದು ಸಂಶೋಧನಾ ವರದಿ ಹೇಳುತ್ತದೆ. ಕಾರ್ಡಿಯಾಕ್ ಆರ್ಹೆತ್ಮಿಯಾ ಮತ್ತು ಹೃದಯ ವೈಫಲ್ಯವು ಪಿಎಂ 2.5ಗೆ ಒಡ್ಡಿಕೊಂಡ ರೋಗಿಗಳಲ್ಲಿ ಕಂಡುಬಂದಿದೆ. ಕಾರ್ಡಿಯಾಕ್ ಆರ್ಹೆತ್ಮಿಯಾ ಎನ್ನುವುದು ಅನಿಯಮಿತ ಅಥವಾ ಅಸಹಜ ರೀತಿಯ ಹೃದಯಬಡಿತದ ಸ್ಥಿತಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ≤5 µg/m3ನ ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವುದು ಗಣನೀಯ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಪಿಎಂ ಅಥವಾ ಎಸ್​ಪಿಎಂ 2.5 ಎಂದರೇನು?: ≤2.5 µm (ಪಿಎಂ 2.5) ವಾಯುಬಲವೈಜ್ಞಾನಿಕ ವ್ಯಾಸ ಹೊಂದಿರುವ ಪರ್ಟಿಕ್ಯುಲೇಟ್ ಮ್ಯಾಟರ್ ಸುತ್ತುವರಿದ ವಾಯು ಮಾಲಿನ್ಯದ ಪ್ರಮುಖ ಅಂಶ. ಈ ಕಣಗಳು ಶ್ವಾಸಕೋಶಕ್ಕೆ ಆಳವಾಗಿ ಉಸಿರಾಡುವಷ್ಟು ಚಿಕ್ಕವು. ಅವು ರಕ್ತನಾಳದೊಳಗೆ ಸೇರಿಕೊಳ್ಳಬಹುದು. ಇದು ವ್ಯವಸ್ಥಿತ ಉರಿಯೂತ, ರಕ್ತನಾಳಗಳ ಸಂಕೋಚನ, ಹೃದಯದ ಬಡಿತದಲ್ಲಿ ಬದಲಾವಣೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೃದಯರಕ್ತನಾಳದ ಕಾಯಿಲೆಯ (CVD) ಉಲ್ಬಣಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಕಣಗಳು ದೇಹ ಸೇರಿಕೊಂಡರೆ ಹೃದಯಸಂಬಂಧಿ ಕಾಯಿಲೆಗಳು ಕಾಡುತ್ತವೆ. ಪಿಎಂ 2.5ಗೆ ಒಡ್ಡಿಕೊಳ್ಳುವುದರಿಂದ ಹೃದಯ ರಕ್ತನಾಳದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಸಾವಿನ ಅಪಾಯವು ಹೆಚ್ಚಾಗುವ ಸಾಧ್ಯತೆಯಿದೆ.

ತಜ್ಞರ ಸಲಹೆಗಳು:''ನಾವು ವರ್ಷಕ್ಕೆ ಆರು ಅಥವಾ ಎಂಟು ತಿಂಗಳುಗಳವರೆಗೆ ಮಧ್ಯಮ, ಕಡಿಮೆ ಮಟ್ಟದ ಮಾಲಿನ್ಯಕ್ಕೆ ಒಡ್ಡಿಕೊಂಡರೆ, ರಕ್ತನಾಳಗಳಿಗೆ ನಿರಂತರ ಕಿರಿಕಿರಿ ಉಂಟಾಗುತ್ತದೆ. ತೀವ್ರವಾದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತ ಹಾಗು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ'' ಎಂದು ಡಾ.ರೆಡ್ಡಿ ವಿವರಿಸಿದ್ದಾರೆ. ''ಕಲುಷಿತ ಗಾಳಿಗೆ ನಿಮ್ಮ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು. ವಾತಾವರಣವು ಸ್ವಲ್ಪ ತಿಳಿಯಾದಾಗ, ಹೊಗೆಸಹಿತ ಗಾಳಿ ಇಲ್ಲದ ಸಮಯದಲ್ಲಿ ಹೊರಹೋಗಬೇಕು. ಹೊರಗೆ ತೆರಳುವಾಗ ಮಾಸ್ಕ್ ಬಳಸಬೇಕು'' ಎಂದು ಅವರು ಸಲಹೆ ನೀಡಿದ್ದಾರೆ.

ವಾಯು ಮಾಲಿನ್ಯದಿಂದ ಹೃದಯರಕ್ತನಾಳದ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ ಗಣನೀಯ ಪ್ರಯೋಜನಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಏಕೈಕ ಕಾರ್ಯವೆಂದರೆ, ವಾಯು ಮಾಲಿನ್ಯ ಮಟ್ಟವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು.

ಇದನ್ನೂ ಓದಿ:ಜುಲೈ 1ರಿಂದ ಭಾರತದಾದ್ಯಂತ ಹೊಸ ಅಪರಾಧ ನ್ಯಾಯ ಕಾನೂನುಗಳು ಜಾರಿ

ABOUT THE AUTHOR

...view details