ಕರ್ನಾಟಕ

karnataka

ರೆಟ್ರೋ ಸ್ಟೈಲ್​ನಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಕಲಾವಿದರು: ರಕ್ಷಿತ್​ ಶೆಟ್ಟಿ ಸಿನಿಮಾ ನೋಡುವ ಕಾತರದಲ್ಲಿ ಸಿನಿಪ್ರಿಯರು - Ibbani Tabbida Ileyali

By ETV Bharat Entertainment Team

Published : Jul 31, 2024, 7:26 PM IST

ಸ್ಯಾಂಡಲ್​ವುಡ್​ನ ಜನಪ್ರಿಯ ನಟ ರಕ್ಷಿತ್​ ಶೆಟ್ಟಿ ನಿರ್ಮಾಣದ ಮುಂದಿನ ಬಹುನಿರೀಕ್ಷಿತ ಚಿತ್ರ 'ಇಬ್ಬನಿ ತಬ್ಬಿದ ಇಳೆಯಲಿ'. ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ವಿಹಾನ್, ಅಂಕಿತಾ ಅಮರ್ ಮತ್ತು ಮಯೂರಿ ನಟರಾಜ್ ರೆಟ್ರೋ ಶೈಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ಹೇಳು ಗೆಳತಿ' ಎಂಬ ಮೆಲೋಡಿ ಸಾಂಗ್​ ಸದ್ಯ ಟ್ರೆಂಡಿಂಗ್​ನಲ್ಲಿದೆ.

Ibbani Tabbida Ileyali
ರೆಟ್ರೋ ಸ್ಟೈಲ್​ನಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ಕಲಾವಿದರು (ETV Bharat)

''ಪಂಚತಂತ್ರ'' ಚಿತ್ರದ ಮೂಲಕ ಗಮನ ಸೆಳೆದ ವಿಹಾನ್ ಅವರೀಗ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಮಾಡುತ್ತಿರೋದು ನಿಮಗೆ ತಿಳಿದಿರುವ ವಿಚಾರ. ಈ ಚಿತ್ರ ಕನ್ನಡದ ಖ್ಯಾತ ನಟ ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡುತ್ತಿರೋ ಹಿನ್ನೆಲೆ ಗಮನ ಸೆಳೆದಿದೆ. ಇತ್ತೀಚೆಗೆ ಅನಾವರಣಗೊಂಡಿರುವ ಹಾಡಿನಲ್ಲಿ ವಿಹಾನ್ ಮತ್ತು ಅಂಕಿತಾ ಅಮರ್ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಾಗಿದೆ.

ಚಂದ್ರಜಿತ್ ಬೆಳ್ಳಿಯಪ್ಪ ಆ್ಯಕ್ಷನ್​ ಕಟ್​ ಹೇಳಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾದ 'ಹೇಳು ಗೆಳತಿ' ಎಂಬ ಮೆಲೋಡಿ ಹಾಡನ್ನು ಚಿತ್ರತಂಡ ಇತ್ತೀಚೆಗಷ್ಟೇ ಅನಾವರಣಗೊಳಿಸಿದೆ. ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಹೇಳು ಗೆಳತಿ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಧುರ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಅವರ ರೆಟ್ರೋ ಲುಕ್ ನೋಡುಗರ ಗಮನ ಸೆಳೆದಿದೆ.

ಬಿಡುಗಡೆಗೆ ಸಜ್ಜಾಗುತ್ತಿದೆ 'ಇಬ್ಬನಿ ತಬ್ಬಿದ ಇಳೆಯಲಿ' (ETV Bharat)

ಚರಣ್‌ರಾಜ್ ಈ ಗೀತೆಗೆ ದನಿಗೂಡಿಸಿರುವುದು ವಿಶೇಷ. ನಾಗಾರ್ಜುನ ಶರ್ಮಾ ಸಾಹಿತ್ಯವಿರುವ ಈ ಹಾಡಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಸಖತ್​ ಟ್ರೆಂಡಿಂಗ್​​ನಲ್ಲಿರುವ ಈ ಗೀತೆಯಲ್ಲಿ ದೀಕ್ಷಿತ್ ಕುಮಾರ್ ಅವರ ನಿರ್ದೇಶನವಿದೆ. ಹಾಡಿಗೆ ಕೇಳುಗರು ಫಿದಾ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನಿರ್ಮಾಪಕ ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಟ್ರೆಂಡಿಂಗ್​​​ನಲ್ಲಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸಾಹಿತ್ಯವನ್ನು ಮೆಚ್ಚಿಕೊಂಡಿದ್ದಾರೆ.

ಅಂಕಿತಾ ಅಮರ್​ (ETV Bharat)

ಕಿರಿಕ್ ಪಾರ್ಟಿ ಹಾಗೂ ಅವನ್ನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳ್ಳಿಯಪ್ಪ, ರಕ್ಷಿತ್‌ ಅವರ 'ಸೆವೆನ್ ಆಡ್ಸ್' ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗೂ ಕಥಾಸಂಗಮ ಚಿತ್ರದ ನಿರ್ದೇಶಕರಲ್ಲೊಬ್ಬರಾಗಿದ್ದರು. ಇದೀಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಮಯೂರಿ ನಟರಾಜ್ (ETV Bharat)

ಇದನ್ನೂ ಓದಿ:ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ರಘು ತಾತಾ' ಟ್ರೇಲರ್ ಔಟ್​​: ಹಳ್ಳಿ ಹುಡುಗಿಯಾಗಿ ಕೀರ್ತಿ ಸುರೇಶ್ - Raghu Thatha Trailer

ತೆಲುಗಿನ ಸೂಪರ್‌ಹಿಟ್ ಗೀತಾಂಜಲಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ಮಯೂರಿ ನಟರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಸೇರಿದಂತೆ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಕಿಚ್ಚನ 'ಮ್ಯಾಕ್ಸ್' ಬಿಡುಗಡೆಗೆ ಮುಹೂರ್ತ ಫಿಕ್ಸ್: ಇನ್ಮುಂದೆ ವರ್ಷಕ್ಕೆ 2 ಸಿನಿಮಾ ಕೊಡಲಿದ್ದಾರೆ ಸುದೀಪ್ - MAX movie

ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ಮಗ್ನವಾಗಿದ್ದು, ವಿಎಫ್‌ಎಕ್ಸ್ ಕೆಲಸ ಪಿನಾಕ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಕ್ಷಿತ್ ಕಾಪ್ ಅವರ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಹಾಡುಗಳಿಂದ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ರಕ್ಷಿತ್​ ಶೆಟ್ಟಿ ನಿರ್ಮಾಣದ ಸಿನಿಮಾ ನೋಡುವ ಕಾತರದಲ್ಲಿ ಸಿನಿಪ್ರಿಯರಿದ್ದು, ಚಿತ್ರತಂಡದಿಂದ ಹೊಸ ಅಪ್ಡೇಟ್ಸ್ ನಿರೀಕ್ಷಿಸಿದ್ದಾರೆ.

ABOUT THE AUTHOR

...view details