ಕರ್ನಾಟಕ

karnataka

ETV Bharat / entertainment

'ಮಧ್ಯಂತರ' ಕಿರುಚಿತ್ರಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ

'ಮಧ್ಯಂತರ' ಕಿರುಚಿತ್ರಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ ಒಲಿದಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.

By ETV Bharat Entertainment Team

Published : 6 hours ago

Suresh Urs baggs Best editing National Film award
'ಮಧ್ಯಂತರ'ಕ್ಕೆ ಅತ್ಯುತ್ತಮ ಸಂಕಲನ ರಾಷ್ಟ್ರ ಪ್ರಶಸ್ತಿ (Photo: film poster)

ನವದೆಹಲಿ: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಅದ್ಧೂರಿಯಾಗಿ ಜರುಗಿತು. ನಾನ್ ಫೀಚರ್ ಫಿಲಂ ವಿಭಾಗದಲ್ಲಿ 'ಮಧ್ಯಂತರ' ಎಂಬ ಅದ್ಭುತ ಕಿರುಚಿತ್ರ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. 36 ನಿಮಿಷ ಕಾಲಾವಧಿಯ ಕಿರುಚಿತ್ರದ ನಿರ್ದೇಶಕ ದಿನೇಶ್ ಶೆಣೈ ಹಾಗೂ ಸಂಕಲನಕಾರ ಸುರೇಶ್ ಅರಸ್ ಅವರು ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

2022ನೇ ಸಾಲಿನ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರದಾನವಾಗಿದ್ದು, ನಾನ್ ಫೀಚರ್ ಫಿಲಂ ವಿಭಾಗದಲ್ಲಿ, 'ಮಧ್ಯಂತರ' ಶೀರ್ಷಿಕೆಯ ಕಿರುಚಿತ್ರ ಸಂಕಲನಕಾರ ಸುರೇಶ್ ಅರಸ್ (Suresh Urs) ಅವರು ಚಿತ್ರದ ಅತ್ಯುತ್ತಮ ಸಂಕಲನ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಯುವಕರಿಬ್ಬರ ಸಿನಿಮಾ ಪ್ರೇಮವನ್ನೊಳಗೊಂಡ ಕಥೆಯೇ 'ಮಧ್ಯಂತರ'. ಹಾಸ್ಯಭರಿತವಾಗಿ ಅದ್ಭುತ ಕಥೆಯನ್ನು ಇದರಲ್ಲಿ ಕಟ್ಟಿಕೊಡಲಾಗಿದೆ. ಹೋಟೆಲ್​ನಲ್ಲಿ ಕೆಲಸ ಮಾಡುವ ಸಪ್ಲೈಯರ್​ಗಳು ಸಿನಿಮಾ ಮಾಡುವ ಕನಸು ಕಾಣುತ್ತಾರೆ. ಚಲನಚಿತ್ರ ಮೋಹಕ್ಕೆ ಅಂಟಿಕೊಂಡ ಇವರು ಅದ್ಭುತ ಸಿನಿಮಾವೊಂದನ್ನು ಮಾಡಲು ಸಜ್ಜಾಗುತ್ತಾರೆ. ಹೀಗೆ ಸದಾ ಸಿನಿಮಾ ಧ್ಯಾನದಲ್ಲೇ ಇರುವ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ಅವರ ಕನಸು ನನಸಾಗುತ್ತದೆಯೇ? ಎಂಬುದೇ ಈ ಕಿರುಚಿತ್ರದ ಮುಖ್ಯಕಥೆ.

2022ರ ಮಾರ್ಚ್ ತಿಂಗಳಲ್ಲಿ ಮಧ್ಯಂತರ ಶೂಟಿಂಗ್​ ನಡೆದಿದೆ. ಕ್ರೌಡ್ ಫಂಡಿಂಗ್ ಮೂಲಕ ಈ ಕಿರುಚಿತ್ರ ಸಿದ್ಧಗೊಂಡಿದೆ. ಮುಖ್ಯಪಾತ್ರಗಳಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯುಳ್ಳ ಅಜಯ್ ನೀನಾಸಂ ನಟಿಸಿದ್ದಾರೆ.

'ಮಧ್ಯಂತರ' 1976-85ರವರೆಗಿನ ಕಾಲಘಟ್ಟದ ಕಥೆ. ಈ ಕಥೆ ಹುಟ್ಟಿದ್ದು ಕೋವಿಡ್​ ಸಂದರ್ಭದಲ್ಲಿ. 11 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಕಥೆಯನ್ನು ಹಿರಿತೆರೆಯಲ್ಲಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ಇತ್ತೀಚೆಗಷ್ಟೇ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು.

ಇತ್ತಿಚೆಗಷ್ಟೇ ಚಿತ್ರತಂಡ ಆಯ್ದ ಮಂದಿಗೆ ಸಿನಿಮಾವನ್ನು ಪ್ರದರ್ಶಿಸಿದೆ. ಹಿರಿಯ ನಟಿ ಜಯಮಾಲ‌ ಸೇರಿದಂತೆ ಕೆಲವರು ಈ ಕಿರುಚಿತ್ರ ವೀಕ್ಷಿಸಿ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ನಿರ್ದೇಶಕ ದಿನೇಶ್ ಶೆಣೈ, ಚಿತ್ರರಂಗದೊಂದಿಗೆ 27 ವರ್ಷಕ್ಕೂ ಮೀರಿದ‌ ನಂಟಿದೆ. ಕೋವಿಡ್​ ಸಂದರ್ಭ ಈ ಕಥೆ ಹೊಳೆಯಿತು. ಸಿನಿಮಾಗ ಮೊದಲು ಕಿರುಚಿತ್ರ ಮಾಡಲು ಯೋಚಿಸಿದೆ. ಜನರಿಗಿದು ಹಿಡಿಸಿದರೆ, ಮುಂದಿನ ದಿನಗಳಲ್ಲಿ ದೊಡ್ಡ ಸಿನಿಮಾ ಮಾಡಬಹುದು. ಆಗ ನಿರ್ಮಾಪಕರು ಸಿಗುತ್ತಾರೆ ಎಂಬ ಉದ್ದೇಶದಿಂದ ಕಿರುಚಿತ್ರ ಮಾಡಲು ಮುಂದಾದೆ. ನಮ್ಮ ಈ ಕಿರುಚಿತ್ರ ವೀಕ್ಷಿಸಿದ ದಯಾಳ್ ಪದ್ಮನಾಭನ್‌ ಪನೋರಮಾಗೆ ಕಳುಹಿಸಲು ಸಲಹೆ ನೀಡಿದರು. ಹಾಗೆಯೇ, ಡಿಸೆಂಬರ್ ಒಳಗೆ ಸೆನ್ಸಾರ್ ಮಾಡಿಸಿದರೆ ರಾಷ್ಟ್ರಪ್ರಶಸ್ತಿಗೂ ಕಳುಹಿಸಬಹುದೆಂದು ಮತ್ತೋರ್ವ ಸ್ನೇಹಿತರು ಸಲಹೆ ನೀಡಿದ್ದರು. ಅದರಂತೆ ಇದೀಗ ಫೀಚರ್ ವಿಭಾಗದಲ್ಲಿ 'ಮಧ್ಯಂತರ'ಕ್ಕೆ 2 ಪ್ರಶಸ್ತಿಗಳು ಒಲಿದಿದ್ದು, ನನ್ನ ತಂಡಕ್ಕೆ ಮನತುಂಬಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದರು.

ABOUT THE AUTHOR

...view details