ಕರ್ನಾಟಕ

karnataka

'ಅಪ್ಪಾಜಿ ಈ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರು': ಭೈರವನ ಕೊನೆ ಪಾಠದ ಬಗ್ಗೆ ಶಿವಣ್ಣ ಹೀಗಂದ್ರು - Bhairavana Kone PaaTa

By ETV Bharat Karnataka Team

Published : Jul 9, 2024, 4:00 PM IST

ಬಹು ನಿರೀಕ್ಷಿತ 'ಭೈರವನ ಕೊನೆ ಪಾಠ' ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಶಿವರಾಜ್​ಕುಮಾರ್ ನಟನೆಯ ಮುಂದಿನ ಸಿನಿಮಾ ಮೇಲಿನ ಕುತೂಹಲ ಹೆಚ್ಚಿದೆ.

Bhairavana Kone PaaTa first look
ಭೈರವನ ಕೊನೆ ಪಾಠ ಫಸ್ಟ್ ಲುಕ್ (ETV Bharat)

ಕನ್ನಡ ಚಿತ್ರರಂಗಲ್ಲಿ ಸಖತ್​​ ಬ್ಯುಸಿಯಾಗಿರುವ ನಟ ಎಂದರೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್. ಇತ್ತೀಚೆಗಷ್ಟೇ 'ಭೈರತಿ ರಣಗಲ್' ಚಿತ್ರದ ಚಿತ್ರೀಕರಣ ಮುಗಿಸಿರೋ ಹ್ಯಾಟ್ರಿಕ್ ಹೀರೋ ಹೈ ಬಜೆಟ್​​ನ 'ಭೈರವನ ಕೊನೆ ಪಾಠ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರೋದು ನಿಮಗೆ ಗೊತ್ತಿರುವ ವಿಚಾರ. ಟೈಟಲ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರ, ಇದೀಗ ತನ್ನ ಫಸ್ಟ್ ಲುಕ್ ಅನಾವರಣಗೊಳಿಸಿದೆ. ಶಿವಣ್ಣನ ಜನ್ಮದಿನದ ವಿಶೇಷವಾಗಿ ಎರಡು ದಿನ ಮುಂಚಿತವಾಗಿಯೇ ನಿರ್ದೇಶಕ ಹೇಮಂತ್ ಎಂ ರಾವ್ ಸೇರಿ ಇಡೀ ಚಿತ್ರತಂಡ 'ಭೈರವನ ಕೊನೆ ಪಾಠ'ದ ಫಸ್ಟ್ ಲುಕ್ ಉಡುಗೊರೆಯಾಗಿ ನೀಡಿದೆ.

ಸಿನಿಮಾದ ಫಸ್ಟ್ ಲುಕ್ ಖಡಕ್ ಆಗಿದ್ದು, ಹಿಂದೆಂದೂ ನೀವು ನೋಡಿರದ ಅವತಾರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಎರಡು ಪೋಸ್ಟರ್​ಗಳಲ್ಲಿ ವಿಭಿನ್ನ ನೋಟದ ಮೂಲಕ ಮಾಸ್ ಲೀಡರ್ ಪ್ರತ್ಯಕ್ಷರಾಗಿದ್ದಾರೆ. ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಯುದ್ಧಕ್ಕೆ ಸಜ್ಜಾದ ಪೋಷಾಕು, ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ಹಿಂಭಾಗದಲ್ಲಿ ಕುದುರೆ ಇದೆ. ಭೈರವನ ಕೊನೆ ಪಾಠ ಎಂಬುದರ ಜೊತೆಗೆ ರಾಜನಿಗೆ ಪಾಠಗಳು ಎಂದು ಇಂಗ್ಲಿಷ್​​​​ನಲ್ಲಿ ಬರೆಯಲಾಗಿದೆ. ಪೋಸ್ಟರ್​ನಲ್ಲಿ ಹಂಪಿಯ ಕಮಲ ಮಹಲ್ ಕೂಡ ಇರುವುದು ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ ಡಾ.ಶಿವರಾಜ್‌ಕುಮಾರ್, "ಅಪ್ಪಾಜಿ, ಈ ರೀತಿಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಹೆಸರುವಾಸಿಯಾಗಿದ್ದರು. ಭೈರವನ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಹೇಮಂತ್ ಎಂ ರಾವ್ ಮತ್ತು ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ನಿರ್ದೇಶಕ ಹೇಮಂತ್ ಎಂ ರಾವ್ ಮಾತನಾಡಿ, ''ಭೈರವನ ಕೊನೆ ಪಾಠ ನನ್ನ ಮಹತ್ವಾಕಾಂಕ್ಷೆಯ ಚಿತ್ರ. ಸೂಪರ್‌ ಸ್ಟಾರ್ ಓರ್ವರ ಸಿನಿಮಾವನ್ನು ನಿರ್ದೇಶಿಸುವ ಜವಾಬ್ದಾರಿ ಸವಾಲೇ ಸರಿ. ಶಿವಣ್ಣನ ಜೊತೆ ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ನಿರ್ದೇಶಕರ ಆಸೆ. ಇಡೀ ದಿನ ಬೆಟ್ಟದ ಮೇಲೆ ಫೋಟೋಶೂಟ್ ನಡೆದಿದೆ. ಇದು ಕೆಲ ಶತಮಾನಗಳ ಹಿಂದಿನ ಸಿನಿಮಾ" ಎಂದಿದ್ದಾರೆ.

ಇದನ್ನೂ ಓದಿ:'ಭೈರತಿ ರಣಗಲ್' ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟ: ಶುಕ್ರವಾರ ಟೀಸರ್ ರಿಲೀಸ್ - Bhairathi Ranagal Audio Rights

ನಿರ್ಮಾಪಕ ವೈಶಾಕ್ ಜೆ ಗೌಡ ಮಾತನಾಡಿ, "ಭೈರವನ ಕೊನೆ ಪಾಠ ಬಹಳ ವಿಶೇಷವಾದ ಚಿತ್ರವಾಗಲಿದೆ. ಬಹಳ ಅದ್ಧೂರಿಯಾಗಿ ಮೂಡಿಬರಲಿದೆ. ಸೆಟ್‌ಗಳು, ಲೋಕೇಶನ್​ಗಳು ಸೇರಿ ಎಲ್ಲವನ್ನೂ ದೊಡ್ಡದಾಗಿ ಪ್ಲ್ಯಾನ್ ಮಾಡಲಾಗಿದ್ದು, ನಿಖರವಾಗಿ ಕಾರ್ಯಗತಗೊಳಿಸಲಾಗುತ್ತದೆ. ನನಗೆ ಬಹಳ ವಿಶ್ವಾಸವಿದೆ. ಇದೊಂದು ಅತ್ಯುತ್ತಮ ಚಲನಚಿತ್ರವಾಗಲಿದೆ" ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ದರ್ಶನ್ ಜೈಲುವಾಸದ ಮಧ್ಯೆ 2005ರ ಮಾಸ್‌ ಹಿಟ್‌ 'ಶಾಸ್ತ್ರೀ' ಶುಕ್ರವಾರ ಮರು ಬಿಡುಗಡೆ - Shastri Re Release

ಹೇಮಂತ್ ಅವರು ಈ ಮೊದಲು ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯರಾಗಿದ್ದಾರೆ. ಅವರೀಗ ಹ್ಯಾಟ್ರಿಕ್​​ ಹೀರೋನ ಜೊತೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಚಿತ್ರವನ್ನು ವೈಶಾಖ್‍ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವೈಶಾಖ್‍ ಜೆ ಗೌಡ ನಿರ್ಮಿಸುತ್ತಿದ್ದಾರೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details