ಕರ್ನಾಟಕ

karnataka

ಅದೃಷ್ಟ ಪರೀಕ್ಷೆಗಿಳಿದ ಪ್ರವೀಣ್ ತೇಜ್, ಹೊಸಬರ ಚಿತ್ರ: ಈ ವಾರ ಜಿಗರ್, ಕಾಗದ ಸಿನಿಮಾಗಳು ತೆರೆಗೆ - Jigar and Kaagada Movies

By ETV Bharat Karnataka Team

Published : Jul 2, 2024, 3:15 PM IST

ಈ ವಾರ ಜಿಗರ್ ಮತ್ತು ಕಾಗದ ಚಿತ್ರಗಳು ಬಿಡುಗಡೆಯಾಗುತ್ತಿವೆ.

Jigar and Kaagada Poster
ಜಿಗರ್ ಮತ್ತು ಕಾಗದ ಪೋಸ್ಟರ್ (ETV Bharat)

'ಹೊಂದಿಸಿ ಬರೆಯಿರಿ' ಹಾಗೂ ಇತ್ತೀಚೆಗೆ 'O2' ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಸಿನಿ ಪ್ರೇಮಿಗಳನ್ನು ರಂಜಿಸಿದ್ದ ಪ್ರವೀಣ್ ತೇಜ್ 'ಜಿಗರ್' ಚಿತ್ರದಲ್ಲಿ ಆ್ಯಕ್ಷನ್ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ‌. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಜನಮನ ಗೆದ್ದಿರುವ 'ಜಿಗರ್' ಈ ವಾರ ಪ್ರೇಕ್ಷಕರೆದುರು ಬರಲಿದೆ‌.

ಪ್ರವೀಣ್ ತೇಜ್ ಅವರಿಗೆ ನಾಯಕಿಯಾಗಿ ವಿಜಯಶ್ರೀ ನಟಿಸಿದ್ದಾರೆ. ವಿನಯಪ್ರಸಾದ್, ಯಶ್ವಂತ್ ಶೆಟ್ಟಿ, ಬಲರಾಜ್​ವಾಡಿ, ಭವ್ಯ ಪೂಜಾರಿ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿದ್ದಾರೆ. ಶಿವಸೇನ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಜ್ಞಾನೇಶ್ ಮಠದ್ ಅವರು ಸಂಕಲನದ ಜವಾಬ್ದಾರಿ ಪೂರ್ಣಗೊಳಿಸಿದ್ದಾರೆ. ಧನಂಜಯ ಬಿ ನೃತ್ಯ ನಿರ್ದೇಶನ ಹಾಗೂ ಚೇತನ್ ಡಿಸೋಜಾ ಅವರ ಸಾಹಸ ನಿರ್ದೇಶನವಿರುವ ಈ "ಜಿಗರ್" ಚಿತ್ರಕ್ಕೆ ಸುನೀಲ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಹಾಗೂ ಗಣೇಶ್ ಪರಶುರಾಮ್ ಹಾಡುಗಳನ್ನು ರಚಿಸಿದ್ದಾರೆ.

ಯು.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಸೂರಿ ಕುಂದರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಇದೇ ಜುಲೈ 5, ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ಪೂಣಚ್ಚ-ಭುವನ್​ ಪೊನ್ನಣ್ಣ; ಅಕ್ಟೋಬರ್​ಗೆ ಕಂದನ ಜನನ - Harshika Poonacha Pregnant

ಬಾಲನಟಿಯಾಗಿ ಗಮನ‌ ಸೆಳೆದಿರುವ ಅಂಕಿತ ಜಯರಾಂ ಅಭಿನಯದ 'ಕಾಗದ' ಚಿತ್ರ ಕೂಡ ಇದೇ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಮೂಲಕ ಆದಿತ್ಯ ಎಂಬ ಯುವ ಪ್ರತಿಭೆ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. 'ಕಾಗದ' ಮೊಬೈಲ್ ಬರುವ ಮುಂಚೆ ನಡೆದ ಪ್ರೇಮಕಥೆ. 2005ರ ಕಾಲಘಟ್ಟದ ಕಥೆ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆ ಅರಳಿದ ಪ್ರೇಮಕಥೆಯೂ ಹೌದು. ಯುವ ಪ್ರತಿಭೆ ಆದಿತ್ಯ ಮತ್ತು ಅಂಕಿತಾ ಜಯರಾಂ ಅಲ್ಲದೇ ನೇಹಾ ಪಾಟೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಎಲ್ಲೆಡೆ ಕಲ್ಕಿ ಕ್ರೇಜ್​​ ; ಮೊದಲ ಸೋಮವಾರ 'ಕಲ್ಕಿ 2898 ಎಡಿ' ಕಲೆಕ್ಷನ್​ ಎಷ್ಟು? ​ - Kalki Collection

ಬಲರಾಜ್​ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಪವನ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ ಕಾಗದ ಚಿತ್ರ ಇದೇ ಶುಕ್ರವಾರ, ಜುಲೈ 5ರಂದು ಚಿತ್ರಮಂದಿರ ಪ್ರವೇಶಿಸಲಿದೆ.

ABOUT THE AUTHOR

...view details