ಕರ್ನಾಟಕ

karnataka

ಅಭಿನಯ ಚಕ್ರವರ್ತಿ ಬರ್ತ್​ಡೇಗೆ 'ಮ್ಯಾಕ್ಸ್​'​ ಸ್ಪೆಷಲ್​​ ಗಿಫ್ಟ್: ಸಖತ್ತಾಗಿದೆ 'ಮ್ಯಾಕ್ಸಿಮಮ್ ಮಾಸ್'​ ಸಾಂಗ್​​​ - Maximum Mass song

By ETV Bharat Karnataka Team

Published : Sep 2, 2024, 12:46 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಹುಬೇಡಿಕೆ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ನಿರೀಕ್ಷೆಯಂತೆ ಮುಂಬರುವ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್​​' ನಿಂದ 'ಮ್ಯಾಕ್ಸಿಮಮ್ ಮಾಸ್'​ ಶೀರ್ಷಿಕೆಯ ಹಾಡು ಅನಾವರಣಗೊಂಡಿದೆ.

Maximum Mass song Release
'ಮ್ಯಾಕ್ಸಿಮಮ್ ಮಾಸ್'​ ಸಾಂಗ್​​​ ರಿಲೀಸ್​​ (ETV Bharat)

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​​​ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 51ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಪತ್ನಿ ಪ್ರಿಯಾ, ಮಗಳು ಸಾನ್ವಿ ಹಾಗೂ ತಂದೆ-ತಾಯಿ ಜೊತೆ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ನಟ ಸುದೀಪ್. ಅಭಿನಯ ಚಕ್ರವರ್ತಿ, ಪೈಲ್ವಾನ್, ಹೆಬ್ಬುಲಿ, ಆರಡಿ ಕಟೌಟ್​​ ಹೀಗೆ ಹಲವಾರು ಬಿರುದುಗಳಿಂದ ಗುರುತಿಸಿಕೊಂಡಿದ್ದು, ಚಿತ್ರರಂಗದವರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ಸುದೀಪ್​ 'ಮ್ಯಾಕ್ಸ್​'​ ಲುಕ್​​ (ETV Bharat)

ಕಲಾವಿದರ ಜನ್ಮದಿನದಂದು ಅವರ ಮುಂದಿನ ಚಿತ್ರಗಳಿಂದ ವಿಶೇಷ ಉಡುಗೊರೆ ಸಿಗೋದು ಸಹಜ. ನಿರೀಕ್ಷೆಯಂತೆ ಮುಂಬರುವ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್​​' ನಿಂದ ಪ್ರಮೋಶನಲ್​ ಕಂಟೆಂಟ್​​ ಹೊರಬಿದ್ದಿದೆ. 'ಮ್ಯಾಕ್ಸಿಮಮ್ ಮಾಸ್'​ ಟೈಟಲ್​​​ನ ಸಾಂಗ್​ ಅನ್ನು ಅನಾವರಣಗೊಳಿಸುವ ಮೂಲಕ ​​ಮ್ಯಾಕ್ಸ್​​​ ಚಿತ್ರತಂಡ ತಮ್ಮ ನಾಯಕ ನಟನಿಗೆ ಮತ್ತು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಬರ್ತ್​​ಡೇ ಲೆಕ್ಕದಲ್ಲಿ ಸ್ಪೆಷಲ್​​​ ಟ್ರೀಟ್​​​ ಕೊಟ್ಟಿದ್ದಾರೆ.

ಇಂದು ಬಿಡುಗಡೆ ಆಗಿರುವ ಮಾಸ್ ಗೀತೆ ಸೋಷಿಯಲ್​​ ಮೀಡಿಯಾಗಳಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಸಿನಿಪ್ರಿಯರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಈ‌ ಹಾಡಿಗೆ ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ರಚಿಸಿದ್ದು, ಚೇತನ್ ಗಂಧರ್ವ ಮತ್ತು ಎಂ.ಸಿ ಬಿಜ್ಜು ದನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಟ್ಟಾರೆ ಅಭಿಮಾನಿಗಳಿಗೆ ಈ‌ ಮಾಸ್‌ ಗೀತೆಯು ಮನರಂಜನೆಯ ರಸದೌತಣ ಉಣಬಡಿಸಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಸುದೀಪ್​ 'ಮ್ಯಾಕ್ಸ್​'​ ಲುಕ್​​ (ETV Bharat)

ಇದನ್ನೂ ಓದಿ:51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ರಾತ್ರಿಯೇ ಅಭಿಮಾನಿಗಳಿಗೆ ದರ್ಶನ - Sudeep Birthday

"ಮ್ಯಾಕ್ಸ್" ಒಂದು ಮಾಸ್ ಚಿತ್ರವಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ವರಲಕ್ಷ್ಮೀ ಶರತ್​​​​ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿರುತ್ತಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೈಪುಲಿ ಎಸ್ ತನು ತಮ್ಮ ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಸುದೀಪ್ ತಮ್ಮ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಬಹುನಿರೀಕ್ಷಿತ ಚಿತ್ರವನ್ನು ನಿರ್ಮಿಸಿರುತ್ತಾರೆ.

ಇದನ್ನೂ ಓದಿ:ಹಗಲು ಸೂರ್ಯ, ರಾತ್ರಿ ಚಂದ್ರ ಬರಬೇಕು.. ಎರಡೂ ಒಟ್ಟಿಗೆ ಬಂದರೆ ಸಮಸ್ಯೆ: ಕಿಚ್ಚನ ಮಾರ್ಮಿಕ ಉತ್ತರ - Sudeep on Darshan

ಇಂದು ಜಯನಗರದ ಎಂಇಎಸ್ ಗ್ರೌಂಡ್​ನಲ್ಲಿ ಬರ್ತ್​ಡೇ ಬಾಯ್​​​ ಸುದೀಪ್​​ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.​​ ಜನ್ಮದಿನದಂದು ಮನೆ ಹತ್ತಿರ ಬರಬೇಡಿ. ಸೋಮವಾರದಂದು ನಾನೇ ಜಯನಗರದ ಎಂಇಎಸ್ ಗ್ರೌಂಡ್​​ನಲ್ಲಿ ಬೆಳಗ್ಗೆ 10ರಿಂದ 12 ಗಂಟೆವರೆಗೂ ಸಿಗುತ್ತೇನೆ ಎಂದು ಶನಿವಾರವಷ್ಟೇ ಸುದ್ದಿಗೋಷ್ಠಿ ನಡೆಸಿ ಸುದೀಪ್​​ ಮನವಿ ಮಾಡಿಕೊಂಡಿದ್ದರು. ಅದಾಗ್ಯೂ ಜೆ.ಪಿ.ನಗರದ ಪುಟ್ಟೇನಹಳ್ಳಿಯ ನಟನ ನಿವಾಸದ ಬಳಿ ಕಳೆದ ರಾತ್ರಿ ಅಭಿಮಾನಿಗಳು ಜಮಾಯಿಸಿದ್ದರು. ಅಭಿಮಾನಿಗಳನ್ನು ವಾಪಸ್​ ಕಳಿಸುವುದು ಬೇಡವೆಂದು ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​​​ ರಾತ್ರಿ ಫ್ಯಾನ್ಸ್​ಗೆ ಕೈ ಮುಗಿದು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ABOUT THE AUTHOR

...view details