ಕರ್ನಾಟಕ

karnataka

ETV Bharat / business

ದೀಪಾವಳಿ ಸೀಸನ್: ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸದಂತೆ ಸೂಚನೆ, ನಿಗಾಕ್ಕೆ ತಂಡಗಳ ರಚನೆ

ಖಾಸಗಿ ಬಸ್​ ನಿರ್ವಾಹಕರು ಪ್ರಯಾಣ ದರ ಹೆಚ್ಚಿಸದಂತೆ ತಮಿಳು ನಾಡು ಸರ್ಕಾರ ಸೂಚನೆ ನೀಡಿದೆ.

ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸದಂತೆ ಸೂಚನೆ, ನಿಗಾಕ್ಕೆ ತಂಡಗಳ ರಚನೆ
ಖಾಸಗಿ ಬಸ್ ಪ್ರಯಾಣ ದರ ಹೆಚ್ಚಿಸದಂತೆ ಸೂಚನೆ, ನಿಗಾಕ್ಕೆ ತಂಡಗಳ ರಚನೆ (IANS)

By ETV Bharat Karnataka Team

Published : 4 hours ago

ಚೆನ್ನೈ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್​ಗಳ ಪ್ರಯಾಣ ದರ ಹೆಚ್ಚಳವನ್ನು ತಡೆಗಟ್ಟಲು ತಮಿಳುನಾಡು ಸರ್ಕಾರ ವಿಶೇಷ ಮೇಲ್ವಿಚಾರಣೆ ತಂಡಗಳನ್ನು ರಚಿಸಿದೆ. ಯಾವುದೇ ಖಾಸಗಿ ಬಸ್ ನಿರ್ವಾಹಕ ಕಂಪನಿಯು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ವಿಧಿಸುವುದು ಕಂಡುಬಂದರೆ, ಹೆಚ್ಚುವರಿ ಶುಲ್ಕವನ್ನು ಪ್ರಯಾಣಿಕರಿಗೆ ಮರುಪಾವತಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಪ್ರಾರಂಭವಾಗುವ ಹಬ್ಬದ ಗರಿಷ್ಠ ಸಂಚಾರ ದಟ್ಟಣೆ ಅವಧಿಯಲ್ಲಿ ಶುಲ್ಕವನ್ನು ಹೆಚ್ಚಿಸದಂತೆ ರೆಡ್​ಬಸ್​ ಸೇರಿದಂತೆ ಎಲ್ಲಾ ಬಸ್ ಬುಕಿಂಗ್ ಅಪ್ಲಿಕೇಶನ್​ಗಳಿಗೆ ಅಧಿಸೂಚನೆಗಳನ್ನು ಕಳುಹಿಸಲಾಗಿದೆ ಎಂದು ಸಚಿವರು ದೃಢಪಡಿಸಿದರು.

ದೀಪಾವಳಿಗಾಗಿ ತಮಿಳುನಾಡು ಸಾರಿಗೆ ಇಲಾಖೆಯು ಚೆನ್ನೈನ ಮುಖ್ಯ ಬಸ್ ನಿಲ್ದಾಣದಿಂದ ರಾಜ್ಯದ ವಿವಿಧ ಸ್ಥಳಗಳಿಗೆ 9,658 ಬಸ್ಸುಗಳನ್ನು ನಿಯೋಜಿಸಲಿದೆ. ಇದರಲ್ಲಿ 3,408 ವಾಡಿಕೆಯ ದೈನಂದಿನ ಸೇವೆಗಳು, 4,250 ವಿಶೇಷ ಬಸ್ಸುಗಳು ಮತ್ತು 2,000 ಓಮ್ನಿಬಸ್​ಗಳು ಸೇರಿವೆ ಎಂದು ಸಚಿವ ಶಿವಶಂಕರ್ ಮಾಹಿತಿ ನೀಡಿದರು.

ಹಬ್ಬದ ಸಮಯದಲ್ಲಿ ಟೋಲ್ ಪ್ಲಾಜಾಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಮುಖ್ಯ ಕಾರ್ಯದರ್ಶಿ ಎನ್ ಮಿರುಗಾನಂದಂ ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಹೆಚ್ಚುವರಿಯಾಗಿ, ಅಗತ್ಯವಿದ್ದರೆ ಹೆಚ್ಚುವರಿ ಬಸ್ಸುಗಳಿಗೆ ಮೀಸಲು ಪಾರ್ಕಿಂಗ್ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಟಿಎನ್ಎಸ್​ಟಿಸಿ ಕುಂಬಕೋಣಂ ಬಸ್​ಗಳು ವಂಡಲೂರು ಮೃಗಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆಯಾದರೆ, ಓಮ್ನಿಬಸ್​ಗಳು ಮರೈಮಲೈ ನಗರ ಪುರಸಭೆಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆಯಾಗಲಿವೆ.

ಇತರ ಜಿಲ್ಲೆಗಳಿಗೆ ದೂರದ ಬಸ್ಸುಗಳು ಕಿಲಂಬಕ್ಕಂನಿಂದ ಕಾರ್ಯನಿರ್ವಹಿಸಲಿವೆ. ಸಾರಿಗೆ ನಿಗಮವು ಚೆನ್ನೈನ ಎಲ್ಲಾ ಪ್ರದೇಶಗಳಿಂದ ಈ ಟರ್ಮಿನಲ್​ಗೆ ಬಸ್ಸುಗಳನ್ನು ವ್ಯವಸ್ಥೆ ಮಾಡಿದೆ.

ಇದಲ್ಲದೆ, ಎಂಟಿಸಿ ಟರ್ಮಿನಲ್ ಮತ್ತು ಇಂಟರ್ ಸಿಟಿ ಬಸ್ ಪ್ರದೇಶದ ನಡುವೆ ಎಂಟು ಎಲೆಕ್ಟ್ರಿಕ್ ವಾಹನಗಳು ಸಂಚರಿಸಲಿವೆ. ಕಿಲಂಬಕ್ಕಂ ಟರ್ಮಿನಲ್​ನಲ್ಲಿ ಪ್ರಯಾಣಿಕರು 2,000 ಪ್ರಯಾಣಿಕರು ಕಾಯುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಇದು ಎಂಟು ಎಟಿಎಂಗಳು, ಮೂರು ಆಹಾರ ಕೇಂದ್ರಗಳು, 18 ನೀರು ಶುದ್ಧೀಕರಣ ಯಂತ್ರಗಳು ಮತ್ತು ಪ್ರಯಾಣಿಕರಿಗೆ 140 ವಸತಿ ಸೌಲಭ್ಯಗಳನ್ನು ಹೊಂದಿದೆ. ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ.

ಅಕ್ಟೋಬರ್ 31 ರ ದೀಪಾವಳಿಯ ನರಕಚತುರ್ದಶಿ ಹಬ್ಬಕ್ಕೂ ಮುನ್ನ ಬಸ್​ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಲಿದೆ. ಈ ಸಂದರ್ಭದಲ್ಲಿ ಖಾಸಗಿ ಬಸ್​ ಪ್ರಯಾಣ ದರ ಜನರಿಗೆ ಹೊರೆಯಾಗದಂತೆ ತಮಿಳುನಾಡು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ.

ಇದನ್ನೂ ಓದಿ : ಕೋಟ್ಯಧಿಪತಿ ತೆರಿಗೆದಾರರ ಸಂಖ್ಯೆ 5 ಪಟ್ಟು ಹೆಚ್ಚಳ: 8.62 ಕೋಟಿಗೆ ತಲುಪಿದ ಒಟ್ಟು ತೆರಿಗೆದಾರರ ಸಂಖ್ಯೆ

ABOUT THE AUTHOR

...view details