17ನೇ ಲೋಕಸಭೆಯ ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಸಂಸತ್ ಸದಸ್ಯರು (ಸಂಸದರು) ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗುವಲ್ಲಿ ಮತ್ತು ಸದನದಲ್ಲಿ ಪ್ರಶ್ನೆಗಳನ್ನು ಕೇಳುವಲ್ಲಿ ಒಂದಿಷ್ಟು ಮುಂದಿದ್ದಾರೆ. ಆದರೆ ಚರ್ಚೆಗಳಲ್ಲಿ ಭಾಗವಹಿಸಲು ನಮ್ಮ ಸಂಸದರು ಅಷ್ಟೊಂದು ಆಸಕ್ತಿ ತೋರಿಸಿಲ್ಲ. ಕರ್ನಾಟಕದ ಸಂಸದರು ಸರಾಸರಿ ರಾಷ್ಟ್ರೀಯ ಹಾಜರಾತಿಯಷ್ಟೇ ಹಾಜರಾತಿಯನ್ನು ಹೊಂದಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ.
ಕರ್ನಾಟಕದ ಸಂಸದರು ಚರ್ಚೆಯಲ್ಲಿ ಭಾಗವಹಿಸುವಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿದ್ದಾರೆ. ಅಲ್ಲದೆ, ಕೆಲವು ಸಂಸದರು ಅತ್ಯಂತ ಕಡಿಮೆ ಹಾಜರಾತಿಯನ್ನು ದಾಖಲಿಸಿದ್ದಾರೆ ಅಥವಾ ಒಂದೇ ಒಂದು ಪ್ರಶ್ನೆಯನ್ನು ಎತ್ತಿಲ್ಲ ಅಥವಾ ಯಾವುದೇ ಚರ್ಚೆಯಲ್ಲಿ ಭಾಗವಹಿಸಿಲ್ಲ. 17 ನೇ ಲೋಕಸಭೆಯಲ್ಲಿ ಕರ್ನಾಟಕದ ಸಂಸದರ ಪೈಕಿ ಬಹುತೇಕರು ಬಹಳ ಕಡಿಮೆ ಅಧಿವೇಶನಗಳಿಗೆ ಹಾಜರಾಗಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಸಂಸದರು ಚರ್ಚೆಗಳಲ್ಲಿ ಭಾಗವಹಿಸುವ ಮತ್ತು ಕರ್ನಾಟಕದ ಬಗ್ಗೆ ಸಮಸ್ಯೆಗಳನ್ನು ಎತ್ತುವ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಈ ಪ್ರವೃತ್ತಿ ಈ ಅಧಿವೇಶನದ ಅವಧಿಯಲ್ಲೂ ಮುಂದುವರಿಯಿತು. ಕರ್ನಾಟಕದ ಬಹುಪಾಲು ಸಂಸದರು ಆಡಳಿತ ಪಕ್ಷಕ್ಕೆ (ಬಿಜೆಪಿ) ಸೇರಿದವರಾಗಿರುವುದರಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಠಿಣ ಪ್ರಶ್ನೆಗಳನ್ನು ಅವರು ಕೇಳಲು ಸಾಧ್ಯವಿಲ್ಲದಿರುವುದು ಕೂಡ ಇದಕ್ಕೆ ಒಂದು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕವು ಲೋಕಸಭೆಗೆ 28 ಸಂಸದರನ್ನು ಕಳುಹಿಸುತ್ತದೆ. ಅದರಲ್ಲಿ 25 ಜನ ಬಿಜೆಪಿಯವರಾಗಿದ್ದಾರೆ. ದಿವಂಗತ ಸುರೇಶ್ ಅಂಗಡಿ ಮಧ್ಯಾವಧಿಯಲ್ಲಿ ನಿಧನರಾದರು. ಈ ಕ್ಷೇತ್ರವನ್ನು ಅವರ ಪತ್ನಿ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ತಲಾ ಒಬ್ಬರು ಸಂಸದರಿದ್ದಾರೆ. ಒಬ್ಬರು ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೇ ತಮ್ಮ ಕ್ಷೇತ್ರಕ್ಕೆ ಬಿಡುಗಡೆಯಾದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನಿಧಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡುವುದರಿಂದ ಲೋಕಸಭೆಯಲ್ಲಿ ಪ್ರಶ್ನೆ ಕೇಳುವುದು ಅನಿವಾರ್ಯವಲ್ಲ ಎಂದು ಆಡಳಿತ ಪಕ್ಷದ ಕೆಲ ಸಂಸದರು ಹೇಳಿದ್ದಾರೆ.
ಕೆಲ ಸಂಸದರಿಗೆ ಹಿಂದಿ ಭಾಷೆ ನಿರರ್ಗಳವಾಗಿ ಬಾರದಿರುವುದು ಕೂಡ ಅವರು ಚರ್ಚೆಗಳಲ್ಲಿ ಭಾಗವಹಿಸದಿರುವುದಕ್ಕೆ ಕಾರಣವಾಗಿರಬಹುದು ಎಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಹೇಳುತ್ತಾರೆ.
17ನೇ ಲೋಕಸಭೆಯ ಅವಧಿ ಇದೇ ಮೇ ತಿಂಗಳಲ್ಲಿ ಕೊನೆಗೊಳ್ಳಲಿದ್ದು, 15 ಅಧಿವೇಶನಗಳಲ್ಲಿ 274 ಬಾರಿ ಸದನ ಕಲಾಪ ನಡೆದಿವೆ.
ಸಂಸದರ ರಾಷ್ಟ್ರೀಯ ಸರಾಸರಿ ಹಾಜರಾತಿ ಶೇ 79 ಆಗಿದ್ದರೆ, ಕರ್ನಾಟಕದ 17 ಸಂಸದರು ಅದಕ್ಕಿಂತ ಕಡಿಮೆ ಹಾಜರಾತಿಯನ್ನು ದಾಖಲಿಸಿದ್ದಾರೆ. ರಾಜ್ಯ ಸಂಸದರ ಸರಾಸರಿ ಹಾಜರಾತಿ ಶೇ 71 ಆಗಿತ್ತು. ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಶೇ 33ರಷ್ಟು ಹಾಗೂ ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಶೇ 38ರಷ್ಟು ಅಧಿವೇಶನಗಳಿಗೆ ಹಾಜರಾಗಿದ್ದರು.