ಕರ್ನಾಟಕ

karnataka

ETV Bharat / bharat

ಟಂಗ್​ಸ್ಟನ್ ಗಣಿಗಾರಿಕೆ ವಿರುದ್ಧದ​ ಪ್ರತಿಭಟನೆ ; 11,608 ಜನರ ಮೇಲಿನ ಕೇಸ್ ಹಿಂಪಡೆದ ತಮಿಳುನಾಡು ಸರ್ಕಾರ - TUNGSTEN PROTEST

ಮಧುರೈನ ಮೆಲ್ಲೂರಿನಲ್ಲಿ ಟಂಗ್‌ಸ್ಟನ್ ಗಣಿಗಾರಿಕೆ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದವರ ವಿರುದ್ಧದ ಕೇಸ್​ಗಳನ್ನ ತಮಿಳುನಾಡು ಸರ್ಕಾರ ಭಾನುವಾರ ಹಿಂಪಡೆದಿದೆ.

Tamil Nadu Govt
ತಮಿಳುನಾಡು ಸಚಿವಾಲಯ ಮತ್ತು ಟಂಗ್‌ಸ್ಟನ್ ಪ್ರತಿಭಟನೆ (ETV Bharat)

By ETV Bharat Karnataka Team

Published : Jan 26, 2025, 11:00 PM IST

ಚೆನ್ನೈ (ತಮಿಳುನಾಡು) : ಕೇಂದ್ರ ಸರ್ಕಾರ ಜ. 23ರಂದು ಟಂಗ್ ಸ್ಟನ್ ಗಣಿಗಾರಿಕೆ ಯೋಜನೆ ಹರಾಜು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಟಂಗ್‌ಸ್ಟನ್ ಗಣಿಗಾರಿಕೆ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ತಮಿಳುನಾಡು ಪೊಲೀಸರು ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ತಮಿಳುನಾಡು ಸರ್ಕಾರ ಭಾನುವಾರ ಪ್ರಕಟಿಸಿದೆ.

ಏನಿದು ಘಟನೆ ? ಮಧುರೈನ ಮೆಲ್ಲೂರು ತಾಲೂಕಿನ ನಾಯಕರಪಟ್ಟಿ ಕೇಂದ್ರೀಕರಿಸಿ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್​ನಲ್ಲಿ ಟಂಗ್ ಸ್ಟನ್ ಗಣಿಗಾರಿಕೆಗೆ ಹರಾಜು ನೋಟಿಸ್ ಜಾರಿ ಮಾಡಿತ್ತು. ಅರಿತಪಟ್ಟಿ, ನರಸಿಂಗಂಪಟ್ಟಿ, ಕಿದರಿಪಟ್ಟಿ, ವಲ್ಲಲಪಟ್ಟಿ, ದಕ್ಷಿಣ ರಸ್ತೆ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯ ಸುಮಾರು 5 ಸಾವಿರ ಎಕರೆ ಭೂಮಿಯನ್ನು ಯೋಜನೆಗೆ ಮಂಜೂರು ಮಾಡಲಾಗುವುದು ಎಂದು ವರದಿಯಾಗಿತ್ತು. ಇದನ್ನು ವಿರೋಧಿಸಿ ಮೆಲ್ಲೂರು ಮತ್ತು ನರಸಿಂಗಂಪಟ್ಟಿ ಭಾಗದ ಸಾವಿರಾರು ಜನರು ತಲ್ಲಕುಳಂ ಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಈ ಯೋಜನೆಯ ಜಾರಿಗೆ ತಮಿಳುನಾಡು ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಸಿಎಂ ಸ್ಟಾಲಿನ್ ಭರವಸೆ ನೀಡಿದ್ದು, ಈ ಯೋಜನೆಯನ್ನ ತಕ್ಷಣವೇ ಕೈಬಿಡುವಂತೆ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಇದಲ್ಲದೆ, 09.12.2024 ರಂದು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಇದೀಗ ತಮಿಳುನಾಡು ಸರ್ಕಾರದ ದೃಢಸಂಕಲ್ಪ ಹಾಗೂ ಜನರ ಭಾವನೆಗಳಿಗೆ ಸಂದ ಜಯವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದೆ.

ಅದರಂತೆ, ಮಧುರೈನ ತಲ್ಲಕುಲಂ ಮತ್ತು ಮೆಲ್ಲೂರು ಪೊಲೀಸ್ ಠಾಣೆಗಳಲ್ಲಿ 11,608 ಪ್ರತಿಭಟನಾಕಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆ 2023 ರ ಸೆಕ್ಷನ್​ 3 ರ ಅಡಿಯಲ್ಲಿ ದಾಖಲಿಸಲಾಗಿದ್ದ ಎಲ್ಲಾ 4 ಕ್ರಿಮಿನಲ್ ಮೊಕದ್ದಮೆಗಳನ್ನು ಇಂದು ಹಿಂಪಡೆಯಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ಗ್ರಾಮಸಭೆಯಲ್ಲಿ ನಿರ್ಣಯ : ಮದ್ದೂರು ಪೂರ್ವದ ಚಿಟ್ಟಂಪಟ್ಟಿ, ಪುದು ತಾಮರೈಪಟ್ಟಿ ಸೇರಿದಂತೆ 35ಕ್ಕೂ ಹೆಚ್ಚು ಗ್ರಾ.ಪಂಗಳಲ್ಲಿ ಮೆಲ್ಲೂರು ಪ್ರದೇಶವನ್ನು ಸಂರಕ್ಷಿತ ಕೃಷಿ ವಲಯ ಎಂದು ಘೋಷಿಸುವಂತೆ ಒತ್ತಾಯಿಸಿ ಭಾನುವಾರ ನಡೆದ ಗ್ರಾಮಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಗಣರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಯಿತು.

ಇದನ್ನೂ ಓದಿ :ಇಂಡೋ - ಬಾಂಗ್ಲಾ ಗಡಿಯಲ್ಲಿ ಕೋಟಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್‌ ಪತ್ತೆ ಮಾಡಿದ ಬಿಎಸ್​ಎಫ್​ - BANNED COUGH SYRUPS FOUND

ABOUT THE AUTHOR

...view details