ತಿರುಮಲ, ಆಂಧ್ರಪ್ರದೇಶ: ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ಭಕ್ತರು ಅನೇಕ ಬಾರಿ ನಗದು, ಮೊಬೈಲ್, ಚಿನ್ನಾಭರಣ ಸೇರಿದಂತೆ ಅಗತ್ಯ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವುದು ಸಹಜ. ಈ ರೀತಿ ಕಳೆದು ಹೋದ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಬಂಧ ಪಟ್ಟ ಭಕ್ತರಿಗೆ ವಾಪಸ್ ಮಾಡಲು ತಿರುಮಲದಲ್ಲಿ ವಿಜಿಲೆನ್ಸ್ (ವಿಚಕ್ಷಣಾ) ಅಧಿಕಾರಿಗಳು ಇರುತ್ತಾರೆ. ಆದರೆ, ಆ ವಿಚಕ್ಷಣಾಧಿಕಾರಿಯೇ ಅವುಗಳ ದುರುಪಯೋಗಪಡಿಸಿಕೊಂಡಿರುವ ಘಟನೆ ವೈಎಸ್ಆರ್ಸಿಪಿ ಆಡಳಿತದಲ್ಲಿ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.
2023ರಲ್ಲಿ ಕಮಾಂಡ್ ಕಂಟ್ರೋಲ್ ವಿಭಾಗದ ವಿಚಕ್ಷಣಾಧಿಕಾರಿಯಾಗಿದ್ದ ಶಿವಶಂಕರ್ ಈ ರೀತಿ ಅಧಿಕಾರಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಭಕ್ತರಿಗೆ ಸಂಬಂಧಿಸಿದ ಕಳೆದು ಹೋದ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸುವಲ್ಲಿ ಈ ಕಮಾಂಡ್ ಕಂಟ್ರೋಲ್ ವಿಭಾಗ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ್, ಸಂಗ್ರಹಿಸಿದ ವಸ್ತುಗಳನ್ನು ದುರ್ಬಳಕೆ ಮಾಡಿರುವುದಾಗಿ ವಿಚಕ್ಷಣಾ ಭದ್ರತಾ ಅಧಿಕಾರಿ ಪದ್ಮನಾಭನ್ ವರದಿಯಲ್ಲಿ ಬೆಳಕಿಗೆ ಬಂದಿದೆ.
ವರದಿ ಸಲ್ಲಿಸಿರುವ ಪದ್ಮನಾಭನ್;ಈ ಸಂಬಂಧ ಸಲ್ಲಿಸಿರುವ ವರದಿಯಲ್ಲಿ ಶಿವಶಂಕರ್ ಮರು ಪಡೆದ ವಸ್ತುಗಳನ್ನು ಸರಿಯಾದ ದಾಖಲೆಯೊಂದಿಗೆ ನಿರ್ವಹಣೆ ಮಾಡಿಲ್ಲ. ಶಿವಶಂಕರ್ ಸೂಚನೆ ಮೆರೆಗೆ ಭಕ್ತರು ಬಳಕೆ ಮಾಡುತ್ತಿದ್ದ ಸೆಲ್ ಫೋನ್ ಮತ್ತು ಬ್ಲೂಟೂತ್ ಸಾಧನಗಳನ್ನು ಸಿಬ್ಬಂದಿ ಬಳಕೆ ಮಾಡುತ್ತಿದ್ದರು. ಇನ್ನು ಸಿಕ್ಕ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಸರಿಯಾದ ದಾಖಲೆ ಇಲ್ಲದೇ ಶ್ರೀವಾರಿ ಹುಂಡಿಗೆ ಹಾಕಲಾಗಿದೆ. ಇವುಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ವಸ್ತುಗಳು ದುರ್ಬಳಕೆಯಾಗಿವೆ. ದೇಗುಲದಲ್ಲಿ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಶಿವಶಂಕರ್ ಕುರುಡಾಗಿದ್ದರು. ಅಲ್ಲದೇ ದುರ್ಬಳಕೆಗೆ ಅವರನ್ನು ಪ್ರೋತ್ಸಾಹಿಸಿದ್ದರು. ಕಳ್ಳರಿಂದ ಪಡೆದ ಹಣವನ್ನು ಆಹಾರ ಮತ್ತು ಲಡ್ಡು ಪ್ರಸಾದದ ಖರ್ಚಿಗೆ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಸೆಕ್ಟರ್ 4ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಶಂಕರ್, ಕಳ್ಳರಿಂದ ಪಡೆದ ಹಣವನ್ನು ಅನೇಕ ಬಾರಿ ಕಚೇರಿಯಲ್ಲಿನ ಟೀ ಮತ್ತು ಟಿಕೆಟ್ಗೆ ಬಳಕೆ ಮಾಡುತ್ತಿದ್ದರು. ಇಲ್ಲಿನ ಅನೇಕ ಸೆಕ್ಟರ್ನಲ್ಲಿ ಕಳೆದ 13 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ನಾಗರಾಜು ಹೇಳುವಂತೆ, ಅನೇಕ ಸಿಬ್ಬಂದಿ ರಿಜಿಸ್ಟರ್ನಲ್ಲಿ ದಾಖಲಿಸದೇ, ಸಿಕ್ಕ ಫೋನ್ಗಳನ್ನು ಬಳಕೆ ಮಾಡುತ್ತಿದ್ದರು. ನನಗೆ ಸಿಕ್ಕ ಒಂದು ಐ ಫೋನ್ ಶಿವಶಂಕರ್ ಅವರಿಗೆ ನೀಡಿದ್ದೆ. ಆದರೆ, ಅವರು ನೋಂದಣಿ ಮಾಡುವ ಬದಲಿಗೆ ತಮ್ಮ ಸಹೋದ್ಯೋಗಿಗೆ ನೀಡಿದರು. ಸಿಸಿಟಿ ಆಪರೇಟರ್ ರಮೇಶ್ ಬಾಬು ಹೇಳುವಂತೆ ಅನೇಕ ಬಾರಿ ಈ ರೀತಿ ಸಿಕ್ಕ ಭಕ್ತರ ವಸ್ತುಗಳು ಅಧಿಕೃತ ದಾಖಲೆಯಿಂದ ಕಣ್ಮರೆಯಾಗಿವೆ ಎಂದು ಹೇಳಿದ್ದಾರೆ.
ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ಅಧಿಕಾರಿ ವಿರುದ್ದ ಕೇವಲ ನಾಮಮಾತ್ರ ಕ್ರಮಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದಾರೆ. ಶಿವಶಂಕರ್ ಅವರನ್ನು ಅಮಾನತು ಅಥವಾ ಔಪಚಾರಿಕ ತನಿಖೆಗೆ ಒಳಪಡಿಸುವ ಕಾರ್ಯವೂ ನಡೆದಿಲ್ಲ. ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು?