ಹೆಸರಾಂತ ಭೂಕಂಪಶಾಸ್ತ್ರಜ್ಞರಾದ ಸಿ.ಪಿ.ರಾಜೇಂದ್ರನ್ ಮತ್ತು ಕುಸಲಾ ರಾಜೇಂದ್ರನ್ ಅವರು ತಮ್ಮ 'ದಿ ರಂಬ್ಲಿಂಗ್ ಅರ್ಥ್-ದಿ ಸ್ಟೋರಿ ಆಫ್ ಇಂಡಿಯನ್ ಅರ್ಥ್ಕ್ವೇಕ್ಸ್' ಎಂಬ ಪುಸ್ತಕದಲ್ಲಿ ಭಾರತದಲ್ಲಿನ ಭೂಕಂಪಗಳ ಇತಿಹಾಸವನ್ನು ತಿಳಿಸಿದ್ದಾರೆ. ಈ ಪುಸ್ತಕದಲ್ಲಿ ಇಬ್ಬರು ಲೇಖಕರ ಅನುಭವಗಳಿವೆ.
ಭೂಕಂಪಗಳು ಏಕೆ ಮತ್ತು ಹೇಗೆ ಸಂಭವಿಸುತ್ತವೆ? ಎಂಬುದನ್ನು ಅರ್ಥಮಾಡಿಕೊಳ್ಳುವುದು ನಮ್ಮ ವೃತ್ತಿ. 80ರ ದಶಕದಲ್ಲಿ ನಮ್ಮ ವಿವಾಹ ಕೇವಲ ಇಬ್ಬರು ವ್ಯಕ್ತಿಗಳ ಮಿಲನವಾಗಿರಲಿಲ್ಲ, ಬದಲಿಗೆ ಭೂ ವಿಜ್ಞಾನದಲ್ಲಿ ನಮ್ಮ ಸಂಶೋಧನಾ ಪ್ರಯತ್ನಗಳಲ್ಲಿ ಒಟ್ಟಿಗೆ ಕೆಲಸ ಮಾಡಲು ಅಲಿಖಿತ ಒಪ್ಪಿಗೆಯಾಗಿತ್ತು. ಗಂಡ ಮತ್ತು ಹೆಂಡತಿಯಾಗಿ ವೈಜ್ಞಾನಿಕ ಸಂಶೋಧನೆ ನಡೆಸುವ ನಮ್ಮ ಉತ್ಸಾಹವನ್ನು ಹೆಚ್ಚಿಸಿತ್ತು. ಡಾಕ್ಟರೇಟ್ ಮತ್ತು ಪೋಸ್ಟ್ ಡಾಕ್ಟರಲ್ ಸಂಶೋಧನೆಗಾಗಿ ನಾವು 80ರ ದಶಕದ ಉತ್ತರಾರ್ಧದಲ್ಲಿ ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯವನ್ನು ತಲುಪುವವರೆಗೂ ಭೂಕಂಪ ಅಧ್ಯಯನವನ್ನು ನಮ್ಮ ವೃತ್ತಿಯಾಗಿ ಸ್ವೀಕರಿಸಲಿಲ್ಲ. ಆದರೆ, 1886ರಲ್ಲಿ ಸಂಭವಿಸಿದ್ಧ ನಿಗೂಢ ಭೂಕಂಪದ ಅಧ್ಯಯನದೊಂದಿಗೆ ನಾವು ಈ ಕ್ಷೇತ್ರಕ್ಕೆ ಬಂದೆವು. ಈ ಭೂಕಂಪ ದಕ್ಷಿಣ ಕೆರೊಲಿನಾದ ಕೊಲಂಬಿಯಾದಲ್ಲಿನ ನಮ್ಮ ವಿಶ್ವವಿದ್ಯಾಲಯದಿಂದ ಸ್ವಲ್ಪ ದೂರದಲ್ಲಿರುವ ಐತಿಹಾಸಿಕ ಪಟ್ಟಣ ಚಾರ್ಲ್ಸ್ಟನ್ ಅನ್ನು ನಾಶಪಡಿಸಿತ್ತು ಎಂದು ಹೇಳಿದ್ದಾರೆ.
ದಕ್ಷಿಣ ಕೆರೊಲಿನಾ ಕರಾವಳಿ ಮೈದಾನದ ಜೌಗು ಪ್ರದೇಶಗಳಲ್ಲಿ ಭೂಕಂಪದ ಪುರಾವೆಗಳನ್ನು ಹುಡುಕುತ್ತಿರುವಾಗ, ನಾವು ವೃತ್ತಿಪರ ಭೂಕಂಪಶಾಸ್ತ್ರಜ್ಞರಾದೆವು. ಅಮೆರಿಕದಲ್ಲಿ ಐದು ವರ್ಷ ಇದ್ದು, ನಂತರ ಭಾರತಕ್ಕೆ ಮರಳಿದ ನಾವು, ಭೂಕಂಪಗಳಿಗೆ ಸಂಬಂಧಿಸಿದ ನಿಗೂಢ ರಹಸ್ಯಗಳನ್ನು ಬಿಚ್ಚಿಡುವ ಕೆಲಸ ಮುಂದುವರಿಸಿದೆವು. ಪೆಂಗ್ವಿನ್ ರಾಂಡಮ್ ಹೌಸ್ ಈಗ ಪ್ರಕಟಿಸುತ್ತಿರುವ 'ದಿ ರಂಬ್ಲಿಂಗ್ ಅರ್ಥ್ - ದಿ ಸ್ಟೋರಿ ಆಫ್ ಇಂಡಿಯನ್ ಅರ್ಥ್ಕ್ವೇಕ್ಸ್' ಪುಸ್ತಕದಲ್ಲಿ ಭೂಕಂಪಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಜ್ಞಾತ ಪ್ರದೇಶಗಳಲ್ಲಿನ ನಮ್ಮ ಸಾಹಸ ಹಾಗೂ ಭೂಕಂಪಗಳು ಏಕೆ ಮತ್ತು ಎಲ್ಲಿ ಸಂಭವಿಸುತ್ತವೆ ಎಂಬುದನ್ನು ವಿವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪುಸ್ತಕ ಯಾರಿಗೆ ಮತ್ತು ಏಕೆ?: ಇತಿಹಾಸದ ಅನ್ವೇಷಣೆ ಮತ್ತು ಭೂಕಂಪಗಳ ಬಗ್ಗೆ ಪುರಾತತ್ವ ಆವಿಷ್ಕಾರಗಳು ಹೊಸ ಆಸಕ್ತಿಯನ್ನು ಹುಟ್ಟುಹಾಕುತ್ತವೆ. ಭೂಮಿ ಇದ್ದಕ್ಕಿದ್ದಂತೆ ಏಕೆ ಕಂಪಿಸುತ್ತದೆ ಮತ್ತು ಕಂಪಿಸುವಿಕೆಯ ಪರಿಣಾಮವನ್ನು ಕಡಿಮೆ ಮಾಡಲು ಹಾಗೂ ಜೀವಗಳನ್ನು ಉಳಿಸಲು ನಾವು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿಯುವ ಕುತೂಹಲ ಹೊಂದಿರುವ ಆಸಕ್ತರು ಈ ಪುಸ್ತಕ ಖರೀದಿಸಿ ಓದಬಹುದು.
ಭೂಕಂಪದ ಕುರಿತು ತಿಳಿಯಲು ಬಯಸುವವರಿಗೆ ಮತ್ತು ಭೂಕಂಪಗಳ ಕುರಿತು ಮಾಧ್ಯಮಗಳಲ್ಲಿ ವರದಿ ಮಾಡುವವರಿಗೆ ಹಾಗೂ ಸಂಕೀರ್ಣ ವೈಜ್ಞಾನಿಕ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಇದು ಸೂಕ್ತವಾದ ಪುಸ್ತಕ. ಜೊತೆಗೆ ಭೂ ಗ್ರಹವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಬಯಸುವ ವಿದ್ಯಾರ್ಥಿಗಳಲ್ಲಿ ಈ ಪುಸ್ತಕ ಆಸಕ್ತಿ ಕೆರಳಿಸುತ್ತದೆ.