ಕರ್ನಾಟಕ

karnataka

ETV Bharat / bharat

ಸಿದ್ಧವಾಗುತ್ತಿದೆ 7.5 ಅಡಿ ಎತ್ತರದ ರಾಮೋಜಿ ರಾವ್ ಪ್ರತಿಮೆ - Ramoji Rao Statue

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ 'ಈನಾಡು' ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರ ಪ್ರತಿಮೆ ತಯಾರಾಗುತ್ತಿದೆ.

STATUE OF RAMOJI RAO
ರಾಮೋಜಿ ರಾವ್ ಪ್ರತಿಮೆ (ETV Bharat)

By ETV Bharat Karnataka Team

Published : Jun 15, 2024, 11:22 AM IST

Updated : Jun 15, 2024, 1:25 PM IST

ರಾಮೋಜಿ ರಾವ್ ಪ್ರತಿಮೆ (ETV Bharat)

ಹೈದರಾಬಾದ್​: 'ಈನಾಡು' ಸಮೂಹ ಸಂಸ್ಥೆಗಳ ಅಧ್ಯಕ್ಷ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅವರ 7.5 ಅಡಿ ಎತ್ತರದ ಪ್ರತಿಮೆ ಸಿದ್ಧವಾಗುತ್ತಿದೆ. ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ಪದ್ಮವಿಭೂಷಣ ರಾಮೋಜಿ ಅವರ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ಪ್ರತಿಮೆಯನ್ನು ವಿಶಾಖಪಟ್ಟಣದಲ್ಲಿ ಸ್ಥಾಪಿಸಲಾಗುತ್ತದೆ.

ಜಗತ್​ಪ್ರಸಿದ್ಧ ಫಿಲ್ಮ್​ ಸಿಟಿಯ ನಿರ್ಮಾತೃ ರಾಮೋಜಿ ರಾವ್​ (87) ಜೂನ್​ 8 ರಂದು ನಿಧನರಾಗಿದ್ದಾರೆ. ಆಂಧ್ರ ಪ್ರದೇಶದ ವಿಜಯನಗರ ಸಂಸದ ಕಾಳಿಶೆಟ್ಟಿ ಅಪ್ಪಲನಾಯ್ಡು ಅವರ ಆಶಯದಂತೆ ಕೊತಪೇಟ್‌ನಲ್ಲಿ ಖ್ಯಾತ ಶಿಲ್ಪಿ ರಾಜಕುಮಾರ್ ವುಡೆಯಾರ್ ಅವರು ರಾಮೋಜಿ ಅವರ ಪ್ರತಿಮೆಯನ್ನು ತಯಾರಿಸುತ್ತಿದ್ದಾರೆ. ರಾಮೋಜಿ ಅವರ ಅನೇಕ ಛಾಯಚಿತ್ರಗಳನ್ನು ಶಿಲ್ಪಿ ರಾಜಕುಮಾರ್ ನೋಡಿದ ಬಳಿಕ 60ನೇ ವಯಸ್ಸಿನಲ್ಲಿದ್ದ ರಾಮೋಜಿ ರಾವ್ ಅವರ ಭಾವಚಿತ್ರದಲ್ಲಿರುವಂತೆ ಪ್ರತಿಮೆಗೆ ರೂಪ ನೀಡುತ್ತಿದ್ದಾರೆ.

ರಾಮೋಜಿ ರಾವ್ ಅವರ 7.5 ಅಡಿ ಎತ್ತರದ ಈ ಪ್ರತಿಮೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಸ್ಪೂರ್ತಿದಾಯಕ ವ್ಯಕ್ತಿತ್ವದ ರಾಮೋಜಿ ರಾವ್ ಅವರ ಪ್ರತಿಮೆ ನಿರ್ಮಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಶಿಲ್ಪಿ ರಾಜಕುಮಾರ್ ತಿಳಿಸಿದ್ದಾರೆ. ಸಂಸದ ಕಾಳಿಶೆಟ್ಟಿ ಅಪ್ಪಲನಾಯ್ಡು ಸಹ ಶುಕ್ರವಾರ ರಾತ್ರಿ ಪ್ರತಿಮೆಯನ್ನು ಪರಿಶೀಲಿಸಿದರು. ರಾಮೋಜಿ ರಾವ್ ಆರಂಭಿಸಿದ 'ಈನಾಡು' ಪತ್ರಿಕೆ ಸ್ಥಾಪನೆಯಾದ ವಿಶಾಖಪಟ್ಟಣದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ.

ರಾಮೋಜಿ ರಾವ್ ಪ್ರತಿಮೆ (ETV Bharat)

ಈ ಒಂದು ಪ್ರತಿಮೆ ಮಾತ್ರವಲ್ಲ, ಅನೇಕ ಪ್ರತಿಮೆಗಳನ್ನು ಸಿದ್ಧಪಡಿಸಬೇಕೆಂಬ ಆಲೋಚನೆ ಇದೆ. ಮತ್ತೊಂದು ಪ್ರತಿಮೆಯನ್ನು ಶ್ರೀಕಾಕುಳಂ ಜಿಲ್ಲೆಯ ರಣಸ್ಥಳಂನಲ್ಲಿರುವ ಸಾಯಿ ಪದವಿ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗುವುದು. ಮುಂದಿನ ಪೀಳಿಗೆಗೆ ರಾಮೋಜಿ ಅವರ ಚೈತನ್ಯವನ್ನು ತಿಳಿಸುವ ಉದ್ದೇಶ ಹಾಗೂ ತೆಲುಗು ಜನರಿಗೆ ಮಾಡಿದ ಸೇವೆಯ ಗುರುತಾಗಿ ರಾಮೋಜಿ ರಾವ್​ ಪ್ರತಿಮೆಗಳು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಕಾಳಿಶೆಟ್ಟಿ ಅಪ್ಪಲನಾಯ್ಡು ಮಾಹಿತಿ ನೀಡಿದರು.

1936ರ ನವೆಂಬರ್ 16ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ರಾಮೋಜಿ ರಾವ್ ಜನಿಸಿದ್ದರು. ಜೂನ್​ 8ರಂದು ಬೆಳಗ್ಗೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಜೂನ್​ 9 ರಂದು ಫಿಲ್ಮ್​ ಸಿಟಿಯಲ್ಲಿ ನಡೆದ ರಾಮೋಜಿ ರಾವ್ ಅಂತ್ಯಸಂಸ್ಕಾರದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪಾಲ್ಗೊಂಡಿದ್ದರು. ರಾಮೋಜಿ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ಗೌರವ ಸಮರ್ಪಿಸಿದ್ದರು.

ಇದನ್ನೂ ಓದಿ:ಅವಕಾಶ ದೊರೆತಾಗೆಲ್ಲ, ಕನ್ನಡದ ಡಿಂಡಿಮ ಬಾರಿಸಿದ್ದೇವೆ - ರಾಮೋಜಿ ರಾವ್​ 'ಕನ್ನಡ' ಮಾತು; ಒಂದು ನೆನಪು

Last Updated : Jun 15, 2024, 1:25 PM IST

ABOUT THE AUTHOR

...view details