ಕರ್ನಾಟಕ

karnataka

ETV Bharat / bharat

ಕಳ್ಳರ ಕಾಟಕ್ಕೆ ಅಕ್ಕಿ ಚೀಲದಲ್ಲಿ ₹15 ಲಕ್ಷ ಅಡಗಿಸಿಟ್ಟ ವರ್ತಕ: ತಿಳಿಯದೆ ಮೂಟೆ ಮಾರಿದ ಸಿಬ್ಬಂದಿ!

ಅಂಗಡಿ ಮಾಲೀಕನೊಬ್ಬ ಕಳ್ಳರ ಕಾಟದಿಂದ ವ್ಯಾಪಾರದ ಹಣವನ್ನು ಅಕ್ಕಿ ಚೀಲದಲ್ಲಿ ಬಚ್ಚಿಟ್ಟಿದ್ದ. ಈ ಬಗ್ಗೆ ತಿಳಿಯದ ಸಿಬ್ಬಂದಿ, ಗ್ರಾಹಕರಿಗೆ ಆ ಚೀಲವನ್ನು ಮಾರಾಟ ಮಾಡಿದ್ದಾನೆ. ಮುಂದೇನಾಯಿತು ಎಂಬುದನ್ನು ಇಲ್ಲಿ ಓದಿ.

ಕಳ್ಳರ ಕಾಟಕ್ಕೆ ಅಕ್ಕಿ ಚೀಲದಲ್ಲಿ ₹15 ಲಕ್ಷ ಅಡಗಿಸಿಟ್ಟ ವರ್ತಕ
ಕಳ್ಳರ ಕಾಟಕ್ಕೆ ಅಕ್ಕಿ ಚೀಲದಲ್ಲಿ ₹15 ಲಕ್ಷ ಅಡಗಿಸಿಟ್ಟ ವರ್ತಕ (ETV Bharat)

By ETV Bharat Karnataka Team

Published : 4 hours ago

ಕಡಲೂರು(ತಮಿಳುನಾಡು):ಗಳಿಸಿದ ಹಣ ಕಾಪಾಡಿಕೊಳ್ಳುವುದೇ ಈಗ ಬಹುದೊಡ್ಡ ಸವಾಲು. ಬುದ್ಧಿವಂತರು ಹೆಚ್ಚು ನಗದನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್​ಗಳಲ್ಲಿ ಠೇವಣಿ ಇಡುತ್ತಾರೆ. ವರ್ತಕರಾದಲ್ಲಿ ವಿವಿಧೆಡೆ ಹೂಡಿಕೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ವರ್ತಕ 15 ಲಕ್ಷ ರೂಪಾಯಿ ನಗದನ್ನು ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದ. ದುರಾದೃಷ್ಟವಶಾತ್​, ಅಂಗಡಿಯ ಸಿಬ್ಬಂದಿ ಆ ಅಕ್ಕಿ ಚೀಲವನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದಾನೆ!.

ತಮಿಳುನಾಡಿನ ಕಡಲೂರು ಜಿಲ್ಲೆಯ ವಡಲೂರಿನಲ್ಲಿ ಈ ಘಟನೆ ನಡೆದಿದೆ. ಷಣ್ಮುಗಂ ಎಂಬ ವರ್ತಕ ಕೆಲವು ವರ್ಷಗಳಿಂದ ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ. ಕಳ್ಳರಿಗೆ ಹೆದರಿ ಅಕ್ಕಿ ಚೀಲದಲ್ಲಿ 15 ಲಕ್ಷ ರೂಪಾಯಿ ಬಚ್ಚಿಟ್ಟಿದ್ದ. ಈ ವಿಚಾರ ತಿಳಿಯದ ಆತನ ಸಿಬ್ಬಂದಿ ಅಕ್ಕಿ ಮೂಟೆಯನ್ನು ಮಾರಾಟ ಮಾಡಿದ್ದ. ಅಕ್ಕಿ ಖರೀದಿಸಿದವರ ಮನೆಗೆ ತೆರಳಿ ಹಣದ ಚೀಲ ಕೇಳಿದಾಗ, ಅವರು ಉಲ್ಟಾ ಹೊಡೆದಿದ್ದಾರೆ. ಸಿಟ್ಟಿಗೆದ್ದ ವರ್ತಕ ಪೊಲೀಸರಿಗೆ ದೂರು ನೀಡಿದ್ದಾನೆ.

ಘಟನೆಯ ಪೂರ್ಣ ವಿವರ ಹೀಗಿದೆ:ವಡಲೂರಿನ ರಾಘವೇಂದ್ರ ನಗರದಲ್ಲಿ ಷಣ್ಮುಗಂ ಅವರು, ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿಯು ವಡಲೂರು-ನೈವೇಲಿ ಮುಖ್ಯರಸ್ತೆಯಲ್ಲಿದೆ. ಅಂಗಡಿ ಮೇಲೆ ಕಳ್ಳರು ಬೀಳುವ ಭಯದಲ್ಲಿ ವ್ಯಾಪಾರದಲ್ಲಿ ಬಂದ 15 ಲಕ್ಷ ರೂಪಾಯಿ ಹಣವನ್ನು ಡ್ರಾಯರ್​ನಲ್ಲಿ ಇಡದೆ, ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದರು.

ಅಕ್ಟೋಬರ್ 20ರಂದು ಅಂಗಡಿಯ ಸಿಬ್ಬಂದಿ ಅಚಾನಕ್ಕಾಗಿ ಆಗಿ ಅದೇ ಅಕ್ಕಿ ಮೂಟೆಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಮರುದಿನ ವರ್ತಕ ಷಣ್ಮುಗಂ ಅವರು ಅಕ್ಕಿ ಚೀಲ ಇಲ್ಲದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಚೀಲದ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಅದನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ.

ಗೂಗಲ್​ ಪೇನಿಂದ ವ್ಯಕ್ತಿ ಪತ್ತೆ:ತಕ್ಷಣವೇ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಅಕ್ಕಿ ಚೀಲ ಖರೀದಿಸಿದಾತ ಗೂಗಲ್ ಪೇ ಮೂಲಕ ನಗದು ಪಾವತಿಸಿದ್ದ. ಅದೇ ಮಾಹಿತಿಯೊಂದಿಗೆ ಅವರ ಮನೆಗೆ ತೆರಳಿದ್ದಾರೆ. ತಮ್ಮ ಅಂಗಡಿಯಿಂದ ಖರೀದಿಸಿದ ಅಕ್ಕಿಯ ಚೀಲದಲ್ಲಿ 15 ಲಕ್ಷ ರೂಪಾಯಿ ಇದೆ. ಚೀಲವನ್ನು ಮರಳಿಸಿ ಎಂದು ಕೇಳಿದ್ದಾರೆ.

ಆದರೆ, ಗ್ರಾಹಕನ ಕುಟುಂಬಸ್ಥರು ಉಲ್ಟಾ ಹೊಡೆದು, ಚೀಲದಲ್ಲಿ 10 ಲಕ್ಷ ರೂಪಾಯಿ ಮಾತ್ರ ಇದೆ ಎಂದಿದ್ದಾರೆ. ಉಳಿದ ಹಣದ ಬಗ್ಗೆ ಕೇಳಿದಾಗ ತಮಗೆ ಗೊತ್ತಿಲ್ಲ ಎಂದು ವಾದಿಸಿದ್ದಾರೆ. ಇದು ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಬಳಿಕ ಷಣ್ಮುಗಂ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮತ್ತೆ 70 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ: 11 ದಿನದಲ್ಲಿ 250 ವಿಮಾನಗಳಿಗೆ 'ಹುಸಿ' ಕಾಟ

ABOUT THE AUTHOR

...view details