ಕರ್ನಾಟಕ

karnataka

ETV Bharat / bharat

ಬಂಗಾಳ ವೈದ್ಯೆ ಅತ್ಯಾಚಾರ ಮಾಡಿ ಕೊಂದಿದ್ದು ಸಂಜಯ್ ರಾಯ್​​: ಕೋರ್ಟ್​ಗೆ ಸಿಬಿಐ ಚಾರ್ಜ್​ಶೀಟ್ ಸಲ್ಲಿಕೆ

ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ಕೇಸ್​ನ ತನಿಖೆ ನಡೆಸುತ್ತಿರುವ ಸಿಬಿಐ ಕೋಲ್ಕತ್ತಾ ವಿಶೇಷ ಕೋರ್ಟ್‌ಗೆ ಇಂದು​ ಆರೋಪಪಟ್ಟಿ ಸಲ್ಲಿಸಿತು. ಇದರಲ್ಲಿ ಸಂಜಯ್​​ ರಾಯ್​​ನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ.

By PTI

Published : 4 hours ago

RG Kar rape-murder
ಬಂಗಾಳ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್​ (ETV Bharat)

ನವದೆಹಲಿ:ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ಪಶ್ಚಿಮ ಬಂಗಾಳದ ಆರ್.​ಜಿ.ಕರ್​​ ಕಾಲೇಜು ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಕೇಸ್​​ನ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಸೋಮವಾರ ಕೋಲ್ಕತ್ತಾ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತು.

ಬಂಗಾಳ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಬಂಧಿತ ಸಂಜಯ್​ ರಾಯ್.​ ಆದರೆ, ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದನ್ನು ಸಿಬಿಐ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿಲ್ಲ.

ಸ್ಥಳೀಯ ಪೊಲೀಸರೊಂದಿಗೆ ನಾಗರಿಕ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್​​ ರಾಯ್, ಆಗಸ್ಟ್ 9ರಂದು ರಾತ್ರಿ ಟ್ರೈನಿ ವೈದ್ಯೆಯ ಮೇಲೆ ದುಷ್ಕೃತ್ಯ ಎಸಗಿದ್ದಾನೆ. ವಿರಾಮದ ಸಮಯದಲ್ಲಿ ಆಕೆ ಆಸ್ಪತ್ರೆಯ ಸೆಮಿನಾರ್ ಹಾಲ್​ನಲ್ಲಿ ವಿಶ್ರಾಂತಿಗೆ ತೆರಳಿದ್ದಾಗ ಆತ ಕೃತ್ಯ ಎಸಗಿದ್ದಾನೆ ಎಂದು ಚಾರ್ಜ್​ಶೀಟ್​ನಲ್ಲಿ ವಿವರಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಸಂಜಯ್​ ರಾಯ್ ಒಬ್ಬನೇ ಅಪರಾಧ ಎಸಗಿದ್ದಾನೆ. ಪ್ರಕರಣದಲ್ಲಿ ಕೇಳಿಬಂದ ಸಾಮೂಹಿಕ ಅತ್ಯಾಚಾರದ ಆರೋಪದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಪ್ರಕರಣದ ವೃತ್ತಾಂತ:ಕೋಲ್ಕತ್ತಾದ ಆರ್.​ಜಿ.ಕರ್​​ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್​​ 9ರಂದು ಸೆಮಿನಾರ್​ ಹಾಲ್​​ನಲ್ಲಿ ವೈದ್ಯೆಯ ಶವವನ್ನು ಸಿಬ್ಬಂದಿಯೊಬ್ಬರು ಕಂಡಿದ್ದರು. ಬಳಿಕ ತಾಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಪೊಲೀಸ್​ ತಂಡ ಬೆಳಗ್ಗೆ 10.30ರ ಸುಮಾರಿಗೆ ಆಸ್ಪತ್ರೆಗೆ ಬಂದಿತ್ತು. ತಪಾಸಣೆಯ ವೇಳೆ ವೈದ್ಯೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.

ಪರಿಶೀಲನೆ ವೇಳೆ ವೈದ್ಯೆ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಕಾಲೇಜಿನ ವೈದ್ಯರು ಭಾರಿ ಪ್ರತಿಭಟನೆ ನಡೆಸಿದ್ದರು. ಪೊಲೀಸ್​ ತನಿಖೆಯ ವೇಳೆಯೇ ಆಸ್ಪತ್ರೆಯಲ್ಲಿ ನವೀಕರಣ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿತ್ತು. ಕೊಲೆ ನಡೆದ ಸೆಮಿನಾರ್​ ಹಾಲ್​​ನ ಒಂದು ಭಾಗವನ್ನು ಕೆಡವಲಾಗಿತ್ತು. ಸಾಕ್ಷಿ ನಾಶಕ್ಕೆ ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಬಂಗಾಳ ಪೊಲೀಸರು ಪ್ರಕರಣದ ಮೇಲೆ ಎಫ್​ಐಆರ್​ ದಾಖಲಿಸಲೂ ವಿಳಂಬ ಮಾಡಿದ್ದರು. ತೀವ್ರ ಆಕ್ಷೇಪದ ಬಳಿಕ ಕೇಸ್​ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಮಧ್ಯಪ್ರವೇಶಿಸಿದ ಕೋಲ್ಕತ್ತಾ ಹೈಕೋರ್ಟ್​, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೆಮಿನಾರ್ ಹಾಲ್​ ಪ್ರವೇಶಿಸಿದ್ದ ಸಂಜಯ್​ ರಾಯ್​ನನ್ನು ಬಂಧಿಸಲಾಯಿತು.

ನಂತರ ಆತನಿಗೆ ಕೋರ್ಟ್​ ಆದೇಶದ ಮೇರೆಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಯಿತು. ನಾರ್ಕೋ ಟೆಸ್ಟ್​ಗೆ ಒಪ್ಪಿಗೆ ನೀಡಲು ರಾಯ್ ನಿರಾಕರಿಸಿದ್ದ. ಇದರಿಂದ ಪರೀಕ್ಷೆ ನಡೆಸಲಾಗಲಿಲ್ಲ. ಘಟನೆಯಲ್ಲಿ ಆರೋಪಿತರಾಗಿರುವ ಪೊಲೀಸ್ ಠಾಣಾಧಿಕಾರಿ ಅಭಿಜಿತ್ ಮೊಂಡಲ್ ಮತ್ತು ಆರ್​.ಜಿ.ಕರ್​ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಸಿಬಿಐ ಬಂಧಿಸಿತ್ತು.

ವೈದ್ಯೆಯ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದರು. ವೈದ್ಯರಿಗೆ ಭದ್ರತೆ ನೀಡಬೇಕು ಎಂದು ಕೋರಿ ಈಗಲೂ ಆರ್.​ಜಿ.ಕರ್​ ಕಾಲೇಜು ವೈದ್ಯರು ನಿರಶನ ಮುಂದುವರಿಸಿದ್ದಾರೆ.

ಇದನ್ನೂ ಓದಿ:ರತನ್​ ಟಾಟಾ ಆರೋಗ್ಯದಲ್ಲಿ ಏರುಪೇರು ವದಂತಿ: ಹಿರಿಯ ಉದ್ಯಮಿ ಸ್ಪಷ್ಟನೆ ಹೀಗಿದೆ

ABOUT THE AUTHOR

...view details