ಕರ್ನಾಟಕ

karnataka

'ಸೋಲು ಗೆಲುವು ಸಹಜ, ಸ್ಮೃತಿ ವಿರುದ್ಧ ಕೆಟ್ಟ ಪದ ಬಳಸದಿರಿ' ಬೆಂಬಲಿಗರಿಗೆ ರಾಹುಲ್ ಗಾಂಧಿ ಮನವಿ - Rahul Gandhi on Smriti Irani

By PTI

Published : Jul 12, 2024, 5:46 PM IST

ಸ್ಮೃತಿ ಇರಾನಿ ವಿರುದ್ಧ ಕೆಟ್ಟ ಪದಗಳನ್ನು ಬಳಸದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.

ಸ್ಮೃತಿ ಇರಾನಿ ಮತ್ತು ರಾಹುಲ್ ಗಾಂಧಿ
ಸ್ಮೃತಿ ಇರಾನಿ ಮತ್ತು ರಾಹುಲ್ ಗಾಂಧಿ (IANS)

ನವದೆಹಲಿ: ಮಾಜಿ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಯಾರಾದರನ್ನು ಅವಮಾನಿಸುವುದು ದೌರ್ಬಲ್ಯವೇ ಹೊರತು, ಸಾಮರ್ಥ್ಯವಲ್ಲ ಎಂದು ಹೇಳಿದ್ದಾರೆ.

ಸ್ಮೃತಿ ಇರಾನಿ ಅಮೇಥಿಯಲ್ಲಿ ಲೋಕಸಭಾ ಚುನಾವಣೆ ಸೋತಿದ್ದಾರೆ. ಅವರು ರಾಹುಲ್ ಗಾಂಧಿ ಅವರ ನಿಷ್ಠಾವಂತ ಕಿಶೋರಿ ಲಾಲ್ ಶರ್ಮಾ ವಿರುದ್ಧ 1.5 ಲಕ್ಷ ಮತಗಳ ಅಂತರದಿಂದ ಸೋತರು.

"ಜೀವನದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಆ ವಿಷಯದಲ್ಲಿ ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆಯನ್ನು ಬಳಸುವುದು ಮತ್ತು ಅಸಹ್ಯವಾಗಿ ವರ್ತಿಸುವುದನ್ನು ನಿಲ್ಲಿಸುವಂತೆ ನಾನು ಪ್ರತಿಯೊಬ್ಬರಿಗೂ ಕೇಳಿಕೊಳ್ಳುತ್ತಿದ್ದೇನೆ. ಜನರನ್ನು ಅವಮಾನಿಸುವುದು ಮತ್ತು ಹೀಯಾಳಿಸುವುದು ದೌರ್ಬಲ್ಯದ ಸಂಕೇತವೇ ಹೊರತು ಶಕ್ತಿಯಲ್ಲ" ಎಂದು ಅವರು ಎಕ್ಸ್​ನಲ್ಲಿ ಬರೆದಿದ್ದಾರೆ. ಆದರೆ ಏಕಾಏಕಿ ರಾಹುಲ್ ಇಂಥದೊಂದು ಮನವಿ ಮಾಡಲು ಕಾರಣವೇನು ಎಂಬುದು ಗೊತ್ತಾಗಿಲ್ಲ.

2019 ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಅವರ ಭದ್ರಕೋಟೆಯಾದ ಅಮೇಥಿಯಲ್ಲಿ 55,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಗಾಂಧಿ ರಾಯ್ ಬರೇಲಿ ಮತ್ತು ವಯನಾಡ್​ನಲ್ಲಿ ಸ್ಪರ್ಧಿಸಿ ಗೆದ್ದರು. ನಂತರ ಅವರು ಕೇರಳದ ವಯನಾಡ್​ ಕ್ಷೇತ್ರವನ್ನು ತ್ಯಜಿಸಿದರು. ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿದೆ.

ರಾಹುಲ್ ಗಾಂಧಿಯವರ ಮನವಿಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರನ್ನು ತೋಳಗಳ ಗುಂಪಿನಂತೆ ಸ್ಮೃತಿ ಇರಾನಿ ವಿರುದ್ಧ ಹರಿಹಾಯಲು ಬಿಟ್ಟು ಈಗ ಸುಳ್ಳು ಮನವಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಮೇಥಿ ಕ್ಷೇತ್ರದಿಂದ ಸೋತ ಕೆಲ ವಾರಗಳ ನಂತರ ಇರಾನಿ ರಾಜಧಾನಿ ದೆಹಲಿಯ 28 ತುಘಲಕ್ ಕ್ರೆಸೆಂಟ್​ ವಿಳಾಸದ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಇರಾನಿ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಅವರನ್ನು ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : ಶಂಭು ಗಡಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿ: ಹರಿಯಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ - Farmers Protest

ABOUT THE AUTHOR

...view details