ಕರ್ನಾಟಕ

karnataka

ETV Bharat / bharat

'ಸರ್ಕಾರಕ್ಕಿಂತ ಪಕ್ಷ ದೊಡ್ಡದು': ಯುಪಿ ಬಿಜೆಪಿಯಲ್ಲಿ ಭುಗಿಲೆದ್ದ ಬೇಗುದಿ, ಮೋದಿಗೆ ದೂರು - UP BJP Rift - UP BJP RIFT

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನಡುವೆ ಭಿನ್ನಾಭಿಪ್ರಾಯವೆದ್ದಿದೆ. ಇದರ ನಡುವೆ, 'ಸರ್ಕಾರಕ್ಕಿಂತ ಪಕ್ಷ ದೊಡ್ಡದು' ಎಂದು ಮೌರ್ಯ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಈ ಒಳಬೇಗುದಿ ಪ್ರಧಾನಿ ಮೋದಿ ಅಂಗಳವನ್ನೂ ತಲುಪಿದೆ.

ಯೋಗಿ ಆದಿತ್ಯನಾಥ್, ನರೇಂದ್ರ ಮೋದಿ,  ಕೇಶವ್ ಪ್ರಸಾದ್ ಮೌರ್ಯ
ಯೋಗಿ ಆದಿತ್ಯನಾಥ್, ನರೇಂದ್ರ ಮೋದಿ, ಕೇಶವ್ ಪ್ರಸಾದ್ ಮೌರ್ಯ (ETV Bharat)

By PTI

Published : Jul 18, 2024, 7:55 AM IST

ಲಖನೌ(ಉತ್ತರ ಪ್ರದೇಶ):ಲೋಕಸಭೆ ಚುನಾವಣೆ 2024ರ ಹಿನ್ನಡೆಯ ನಂತರ ಉತ್ತರ ಪ್ರದೇಶ ಸರ್ಕಾರ ಮತ್ತು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ 'ಸರ್ಕಾರಕ್ಕಿಂತ ಪಕ್ಷ ದೊಡ್ಡದು' ಎಂದು ಬುಧವಾರ ಬಹಿರಂಗವಾಗಿಯೇ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್‌' ಖಾತೆಯಲ್ಲಿ ಅವರು ಈ ಮಾರ್ಮಿಕ ಪೋಸ್ಟ್​ ಹಾಕಿದ್ದು, ಯುಪಿ ಬಿಜೆಪಿಯಲ್ಲಿ ಬಿರುಕಿನ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

ಲಖನೌದಲ್ಲಿ ಭಾನುವಾರ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೌರ್ಯ ಭಾಷಣ ಮಾಡಿದ್ದರು. ಆ ಬಳಿಕ 'ಪಕ್ಷಕ್ಕಿಂತ ಸರ್ಕಾರ ದೊಡ್ಡದಲ್ಲ' ಎಂಬರ್ಥದ ಆಯ್ದ ಭಾಗವನ್ನು ಬುಧವಾರ ಪೋಸ್ಟ್‌ ಮಾಡಿದ್ದಾರೆ. 'ಸರ್ಕಾರಕ್ಕಿಂತ ಸಂಘಟನೆ ದೊಡ್ಡದು, ಕಾರ್ಯಕರ್ತರ ನೋವು, ನನ್ನ ನೋವು. ಸಂಘಟನೆಗಿಂತ ಯಾರೂ ದೊಡ್ಡವರಲ್ಲ, ಕಾರ್ಯಕರ್ತರೇ ನಮ್ಮ ಹೆಮ್ಮೆ' ಎಂದಿದ್ದಾರೆ.

ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ್ದ ಮೌರ್ಯ, ''ಸಂಘಟನೆ ಸರ್ಕಾರಕ್ಕಿಂತ ದೊಡ್ಡದು. ಅದು ಯಾವಾಗಲೂ ದೊಡ್ಡದಾಗಿಯೇ ಇರುತ್ತದೆ. 7 ಕಾಳಿದಾಸ್ ಮಾರ್ಗದಲ್ಲಿರುವ ನನ್ನ ನಿವಾಸದ ಬಾಗಿಲು ಎಲ್ಲರಿಗೂ ತೆರೆದಿದೆ. ನಾನು ಮೊದಲು ಕಾರ್ಯಕರ್ತ, ನಂತರ ಉಪಮುಖ್ಯಮಂತ್ರಿ" ಎಂದು ಹೇಳಿದ್ದರು. ಅಷ್ಟೇ ಅಲ್ಲ, ''ಎಲ್ಲ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳು ಪಕ್ಷದ ಕಾರ್ಯಕರ್ತರನ್ನು ಗೌರವಿಸಬೇಕು'' ಎಂದೂ ಹೇಳಿದ್ದರು.

ನಡ್ಡಾ ಭೇಟಿಯಾದ ಮೌರ್ಯ, ರಾಜ್ಯಾಧ್ಯಕ್ಷ ಸಿಂಗ್: ಇದರ ಮಧ್ಯೆ, ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಮೌರ್ಯ ಮತ್ತು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಪ್ರತ್ಯೇಕವಾಗಿ ಮಂಗಳವಾರ ಭೇಟಿ ಮಾಡಿದ್ದಾರೆ. ಇದಾದ ಮರುದಿನವೇ ಈ ಪೋಸ್ಟ್ ಬಂದಿರುವುದು ಗಮನಾರ್ಹ.

ಮೋದಿಗೆ ದೂರು:ಅಷ್ಟೇ ಅಲ್ಲ, ಭೂಪೇಂದ್ರ ಸಿಂಗ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಪಕ್ಷ ಸಂಘಟನೆಯ ವಿಷಯಗಳಿಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಮೋದಿಗೆ ಭೂಪೇಂದ್ರ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.

ಮತ್ತೊಂದೆಡೆ, ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿ, ''ರಾಜ್ಯದ ಹಲವು ನಾಯಕರ ಹೇಳಿಕೆಗಳು ಶಿಸ್ತಿನ ಪಕ್ಷದ ಘನತೆಗೆ ಧಕ್ಕೆ ತಂದಿದೆ. ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಅವರು ತಮ್ಮ ಭಾವನೆಗಳನ್ನು ಹೊರಹಾಕುವ ಅಗತ್ಯವಿದ್ದುದರಿಂದ ಇದನ್ನು ನಿರೀಕ್ಷಿಸಲಾಗಿತ್ತು'' ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಅಂತಃಕಲಹ- ಅಖಿಲೇಶ್ ಕುಟುಕು: ಇದರ ನಡುವೆ ಪ್ರತಿಪಕ್ಷ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ''ಬಿಜೆಪಿಯಲ್ಲಿ ಅಂತಃಕಲಹ ಉಂಟಾಗಿದೆ. ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಉತ್ತರ ಪ್ರದೇಶದ ಜನರು ಬಳಲುವಂತಾಗಿದೆ'' ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೇ, ಇದೇ ವಿಷಯವಾಗಿ ಅವರು 'ಎಕ್ಸ್‌' ಖಾತೆಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ''ಬಿಜೆಪಿ ಅಧಿಕಾರ, ಸರ್ಕಾರ ಮತ್ತು ಆಡಳಿತದ ಹೋರಾಟದಲ್ಲಿ ಯುಪಿಗೆ ಹಿನ್ನಡೆಯಾಗಿದೆ. ಬಿಜೆಪಿ ಇತರ ಪಕ್ಷಗಳನ್ನು ಹಾಳುಮಾಡುತ್ತಿತ್ತು. ಇದೀಗ ಆಂತರಿಕ ಸಂಘರ್ಷದ ಕೆಸರಿನಲ್ಲಿ ಮುಳುಗಿದೆ. ಸಾರ್ವಜನಿಕರ ಬಗ್ಗೆ ಯೋಚಿಸುವವರು ಬಿಜೆಪಿಯಲ್ಲಿ ಯಾರೂ ಇಲ್ಲ'' ಎಂದು ಟೀಕಿಸಿದ್ದಾರೆ.

ಯುಪಿಯಲ್ಲಿ ಉಪಚುನಾವಣೆ: ಉತ್ತರ ಪ್ರದೇಶದಲ್ಲಿ ಶೀಘ್ರದಲ್ಲೇ 10 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಪೈಕಿ ತಲಾ 5 ಕ್ಷೇತ್ರಗಳು ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿದ್ದವು. ಹೀಗಾಗಿ ಆ ಸ್ಥಾನಗಳನ್ನು ಉಳಿಸಿಕೊಳ್ಳುವುದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ.

ಲೋಕಸಭೆ ಚುನಾವಣೆಯ ಫಲಿತಾಂಶ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್​ ಒಳಗೊಂಡ 'ಇಂಡಿ' ಮೈತ್ರಿಕೂಟ ರಾಜ್ಯದ 80 ಕ್ಷೇತ್ರಗಳ ಪೈಕಿ 43 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿತ್ತು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್​ಡಿಎ ಕೇವಲ 36 ಸ್ಥಾನಕ್ಕೆ ಸೀಮಿತವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ 64 ಕ್ಷೇತ್ರದಲ್ಲಿ ಎನ್​ಡಿಎ ಗೆದ್ದಿತ್ತು.

ABOUT THE AUTHOR

...view details