ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

ಲಡಾಖ್​ಗೆ 6ನೇ ಶೆಡ್ಯೂಲ್​​​ನಲ್ಲಿ ಸ್ಥಾನಮಾನಕ್ಕೆ ಒತ್ತಾಯಿಸಿ ಪಾದಯಾತ್ರೆ; ಸೋನಂ ವಾಂಗ್ಚುಕ್ ಬಂಧನ - Sonam Wangchuk Arrest

ದೆಹಲಿ ಚಲೋ ಪಾದಯಾತ್ರೆ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ದೆಹಲಿ ಗಡಿಯಲ್ಲಿ ಬಂಧಿಸಲಾಗಿದೆ.

ಸೋನಂ ವಾಂಗ್ಚುಕ್
ಸೋನಂ ವಾಂಗ್ಚುಕ್ (ETV Bharat)

ನವದೆಹಲಿ: ಮಹಾತ್ಮ ಗಾಂಧಿಯವರಿಗೆ ಗೌರವ ನಮನ ಸಲ್ಲಿಸಲು ದೆಹಲಿಯ ರಾಜ್​ಘಾಟ್​ಗೆ ಮೆರವಣಿಗೆಯ ಮೂಲಕ ತೆರಳುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ದೆಹಲಿಯ ಸಿಂಘು ಗಡಿಯಲ್ಲಿ ಬಂಧಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್​ಗೆ ಆರನೇ ಶೆಡ್ಯೂಲ್ ಸ್ಥಾನಮಾನ ನೀಡುವಂತೆ ಒತ್ತಾಯಿಸಲು ಅವರು ಲಡಾಕ್​ನಿಂದ 100 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ರಾಜಧಾನಿ ದೆಹಲಿಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಸೋಮವಾರ ರಾತ್ರಿ ನಗರದ ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಂಗ್ಚುಕ್ ಮತ್ತು ಅವರ ಬೆಂಬಲಿಗರು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಲಡಾಖ್ ನಾಯಕರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಒತ್ತಾಯಿಸಿ ಲೇಹ್​ನಿಂದ ದೆಹಲಿಗೆ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದ್ದರು. ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವುದು, ಸ್ಥಳೀಯ ಜನರಿಗೆ ತಮ್ಮ ಭೂಮಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಕಾನೂನು ರೂಪಿಸುವ ಅಧಿಕಾರ ನೀಡುವುದು ಇವರ ಪ್ರಮುಖ ಬೇಡಿಕೆಗಳಲ್ಲಿ ಸೇರಿವೆ.

ಭಾರತೀಯ ಸಂವಿಧಾನದ 6 ನೇ ಅನುಸೂಚಿಯು ಭಾರತದ ಕೆಲವು ಬುಡಕಟ್ಟು ಪ್ರದೇಶಗಳಿಗೆ ವಿಶೇಷ ರಕ್ಷಣೆ ಮತ್ತು ಸ್ವಾಯತ್ತತೆಯನ್ನು ಒದಗಿಸುತ್ತದೆ. ಇದು ಅವರ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಅವರ ಸಂಪನ್ಮೂಲಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಲಡಾಖ್​ಗೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನವನ್ನು ನೀಡಲಾಗಿದೆ. ಪ್ರಸ್ತುತ ಲಡಾಖ್​ನ ಪರಿಸರವನ್ನು ರಕ್ಷಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು, ಲಡಾಖ್​ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ರಾಜ್ಯವನ್ನು ಸಂವಿಧಾನದ 6 ನೇ ಶೆಡ್ಯೂಲ್ ಅಡಿ ತರಬೇಕು ಎಂದು ವಾಂಗ್ಚುಕ್ ಒತ್ತಾಯಿಸುತ್ತಿದ್ದಾರೆ.

ತಮ್ಮ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ವಾಂಗ್ಚುಕ್ ಜನವರಿ 26 ರಿಂದ 30 ರವರೆಗೆ ಲೇಹ್​ನ ಹಿಮಾಲಯನ್ ಇನ್ ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲಡಾಖ್ (ಎಚ್ಐಎಎಲ್) ಕ್ಯಾಂಪಸ್​ನಲ್ಲಿ ಐದು ದಿನಗಳ 'ಹವಾಮಾನ ಉಪವಾಸ' ನಡೆಸಿದ್ದರು. ಜನವರಿ 31 ರಂದು ಲೇಹ್​ನ ಪೊಲೊ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯೊಂದಿಗೆ ಪ್ರತಿಭಟನೆ ಕೊನೆಗೊಂಡಿತ್ತು. ನೂರಾರು ಸ್ಥಳೀಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಆಗ ವಾಂಗ್ಚುಕ್ ತಮ್ಮ ಭಾಷಣದಲ್ಲಿ ಕೇಂದ್ರಾಡಳಿತ ಸ್ಥಾನಮಾನ ಮತ್ತು ಲೆಫ್ಟಿನೆಂಟ್ ಗವರ್ನರ್ ಆಡಳಿತ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋನಮ್ ವಾಂಗ್ಚುಕ್ ಮತ್ತು ಅವರ ಬೆಂಬಲಿಗರನ್ನು ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿರುವುದನ್ನು ಖಂಡಿಸಿದ್ದಾರೆ.

ಇದನ್ನೂ ಓದಿ : ಭಾರತೀಯ ವಾಯುಸೇನೆ ವಿಮಾನ ಪತನವಾಗಿ 56 ವರ್ಷಗಳ ಬಳಿಕ ಪತ್ತೆಯಾದ ನಾಲ್ವರು ಯೋಧರ ಮೃತದೇಹಗಳು! - 4 soldiers bodies recovered

ABOUT THE AUTHOR

...view details