ಬಲಂಗೀರ್ (ಒಡಿಶಾ):ಬಲಂಗೀರ್ ಜಿಲ್ಲೆಯ ಲಾಥೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಲಿಯಾಲಿಟಿ ಗ್ರಾಮದ ಬಳಿ ನರಬಲಿ ನಡೆದಿರುವ ಆರೋಪ ಕೇಳಿಬಂದಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ 13 ವರ್ಷದ ಅಪ್ರಾಪ್ತನನ್ನು ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಸಂತ್ರಸ್ತ ಕುಟುಂಬ ಆಗ್ರಹಿಸಿದೆ.
ಬಾಲಕ ಗುರುವಾರದಿಂದ ನಾಪತ್ತೆಯಾಗಿದ್ದ. ಇದೀಗ ಆತನ ಶವ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಯಾವುದೇ ದುರಾಸೆಗಾಗಿ ನರಬಲಿ ನೀಡಲಾಗಿದೆ ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.
ಬಲಿ ನೀಡಿದವರು ಶವವನ್ನು ಹೂಳಲು ಯತ್ನಿಸಿದ್ದಾರೆ. ಆದರೆ, ಯಾಕೋ ಹಾಗೆಯೇ ಬಿಸಾಡಿ ಹೋಗಿದ್ದಾರೆ. ಇದು ನರಬಲಿ ಪ್ರಕರಣ ಎಂದು ನಮಗೆ ಶಂಕಿಸಲಾಗಿದೆ. ಹುಣ್ಣಿಮೆಯ ರಾತ್ರಿಯಾದ್ದರಿಂದ ಯಾರೋ ನನ್ನ ಮಗನನ್ನು ಯಾವುದೋ ಉದ್ದೇಶಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ರಸ್ತೆ ತಡೆದು ಆಕ್ರೋಶ:ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಸಂತ್ರಸ್ತೆಯ ಕುಟುಂಬಸ್ಥರು ನುವಾಪಾದ ರಸ್ತೆಯ ಮೇಲೆ ಧರಣಿ ನಡೆಸಿದರು. ವಾಹನ ತಡೆದು ರಸ್ತೆಯನ್ನು ನಿರ್ಬಂಧಿಸಿದರು. ಕೃತ್ಯ ಎಸಗಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಮತ್ತು ಶ್ವಾನದಳ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.