ಕರ್ನಾಟಕ

karnataka

By PTI

Published : 4 hours ago

ETV Bharat / bharat

ಬಿಜೆಪಿಯೊಂದಿಗೆ ಮೈತ್ರಿಯಾಗದಿದ್ದರೆ ಜಾರ್ಖಂಡ್​ನಲ್ಲಿ ಎಲ್​ಜೆಪಿ ಏಕಾಂಗಿ ಸ್ಪರ್ಧೆ: ಸಚಿವ ಚಿರಾಗ್ ಪಾಸ್ವಾನ್ - Jharkhand polls

ಜಾರ್ಖಂಡ್​ ವಿಧಾನಸಭಾ ಚುನಾವಣೆಯಲ್ಲಿ ಎಲ್​ಜೆಪಿ ಏಕಾಂಗಿಯಾಗಿ ಕಣಕ್ಕಿಳಿಯಬಹುದು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಸಚಿವ ಚಿರಾಗ್ ಪಾಸ್ವಾನ್
ಸಚಿವ ಚಿರಾಗ್ ಪಾಸ್ವಾನ್ (IANS)

ರಾಂಚಿ/ಧನಬಾದ್: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಲ್​ಜೆಪಿ (ಲೋಕ ಜನಶಕ್ತಿ ಪಾರ್ಟಿ- ರಾಮ್ ವಿಲಾಸ್) ಪಕ್ಷ ಸ್ಪರ್ಧಿಸಲಿದ್ದು, ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಬಹುದು ಅಥವಾ ಏಕಾಂಗಿಯಾಗಿ ಸ್ಪರ್ಧಿಸಬಹುದು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ರವಿವಾರ ಹೇಳಿದ್ದಾರೆ.

ಬಿಜೆಪಿಯು ಜಾರ್ಖಂಡ್​ನಲ್ಲಿ ಎಜೆಎಸ್​ಯು ಪಾರ್ಟಿ ಮತ್ತು ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಜಾರ್ಖಂಡ್​ನ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ ಒಂದು ದಿನದ ನಂತರ ಪಾಸ್ವಾನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

"ಎಲ್​ಜೆಪಿಯ ರಾಜ್ಯ ಘಟಕವು ಮೈತ್ರಿಯೊಂದಿಗೆ ಅಥವಾ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೇರಿದಂತೆ ಎಲ್ಲಾ ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದೆ" ಎಂದು ಪಾಸ್ವಾನ್ ಧನಬಾದ್​ಗೆ ತೆರಳುವಾಗ ರಾಂಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಬಿಜೆಪಿ ನೇತೃತ್ವದ ಎನ್​ಡಿಎ ಭಾಗವಾಗಿರುವ ಎಲ್​ಜೆಪಿ (ರಾಮ್ ವಿಲಾಸ್) ಜಾರ್ಖಂಡ್​ನಲ್ಲಿ ಬಲವಾದ ನೆಲೆಯನ್ನು ಹೊಂದಿದೆ. ನಾನು ಹುಟ್ಟಿದಾಗ ಜಾರ್ಖಂಡ್ ಬಿಹಾರದ ಭಾಗವಾಗಿತ್ತು. ಇದು ನನ್ನ ತಂದೆಯ ಕೆಲಸದ ಸ್ಥಳವಾಗಿತ್ತು. ಪಕ್ಷವು ರಾಜ್ಯದಲ್ಲಿ ಬಲವಾದ ಸಾಮೂಹಿಕ ನೆಲೆಯನ್ನು ಅಭಿವೃದ್ಧಿಪಡಿಸಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ" ಎಂದು ಅವರು ಹೇಳಿದರು.

ಧನಬಾದ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಾಸ್ವಾನ್, ಪಕ್ಷವು ಈಗಾಗಲೇ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಿದೆ ಎಂದು ಹೇಳಿದರು. ಮುಂಬರುವ ಚುನಾವಣೆ ಜಾತಿ, ಮತ ಅಥವಾ ಧರ್ಮದ ಯುದ್ಧವಲ್ಲ, ಆದರೆ ಅಭಿವೃದ್ಧಿ ಹೊಂದಿದ ಜಾರ್ಖಂಡ್​ಗಾಗಿ ನಡೆಯುವ ಹೋರಾಟವಾಗಿದೆ ಎಂದು ಪಾಸ್ವಾನ್ ತಿಳಿಸಿದರು.

ಒಂದು ರಾಷ್ಟ್ರ ಒಂದು ಚುನಾವಣೆ ದೇಶದ ಅಗತ್ಯವಾಗಿದೆ, ಇದು ದೇಶದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಪಾಸ್ವಾನ್ ಗುರುವಾರ ಹೇಳಿದ್ದರು.

ಬಿಜೆಪಿ ತನ್ನ ಮಿತ್ರಪಕ್ಷಗಳಾದ ಜೆಡಿಯು ಮತ್ತು ಎಜೆಎಸ್​ಯು ಪಕ್ಷದೊಂದಿಗೆ ಶೇಕಡಾ 99 ರಷ್ಟು ಸ್ಥಾನಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದೆ ಮತ್ತು ಉಳಿದ ಒಂದು ಅಥವಾ ಎರಡು ಸ್ಥಾನಗಳಿಗಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಶರ್ಮಾ ಶನಿವಾರ ಹೇಳಿದ್ದರು. ಅಕ್ಟೋಬರ್ 2 ರಂದು ಕೊನೆಗೊಳ್ಳುವ 'ಪಿತೃ ಪಕ್ಷ'ದ ನಂತರ ಈ ನಿಟ್ಟಿನಲ್ಲಿ ಔಪಚಾರಿಕ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದರು. 81 ಸದಸ್ಯರ ಜಾರ್ಖಂಡ್ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ :'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning

ABOUT THE AUTHOR

...view details