ಕರ್ನಾಟಕ

karnataka

ETV Bharat / bharat

ವಯನಾಡು ಕ್ಷೇತ್ರಕ್ಕೆ ನಾನು ಅನಧಿಕೃತ ಸಂಸದ: ರಾಹುಲ್​ ಗಾಂಧಿ

ರಾಹುಲ್​​ ಗಾಂಧಿ ಅವರಿಂದ ತೆರವಾದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ವಾದ್ರಾ ಅವರು ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ (ETV Bharat)

By ETV Bharat Karnataka Team

Published : 5 hours ago

ವಯನಾಡು(ಕೇರಳ):ಇನ್ನು ಮುಂದೆ ನಾನು ಕೇರಳದ ವಯನಾಡು ಕ್ಷೇತ್ರದ ಅನಿಧಿಕೃತ ಸಂಸದನಾಗಿ ಮುಂದುವರಿಯುವೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಕೇರಳದ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ತಾವು ಇದೇ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿದ ರಾಹುಲ್​ ಗಾಂಧಿ, ಕ್ಷೇತ್ರವನ್ನು ಸಹೋದರಿ ಪ್ರಿಯಾಂಕಾಗೆ ಬಿಟ್ಟು ಕೊಡುತ್ತಿದ್ದೇನೆ. ಆದರೆ, ನಾನು ಈ ಕ್ಷೇತ್ರದ ಅನಧಿಕೃತ ಸಂಸದನಾಗಿರುವೆ ಎಂದಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಸಂಸತ್ತಿನಲ್ಲಿ ಇಬ್ಬರು ಸಂಸದರನ್ನು ಹೊಂದಿರುವ ದೇಶದ ಏಕೈಕ ಕ್ಷೇತ್ರವಾಗಿ ವಯನಾಡು ಇರಲಿದೆ. ಉಪ ಚುನಾವಣೆಯಲ್ಲಿ ಗೆದ್ದ ಪ್ರಿಯಾಂಕಾ ಅಧಿಕೃತ ಸಂಸದೆಯಾಗಲಿದ್ದಾರೆ. ನಾನು ಕೂಡ ಪರೋಕ್ಷ ಸಂಸದನಾಗಿ ಮಂದುವರೆಯುವೆ" ಎಂದು ತಿಳಿಸಿದರು.

ಇದಕ್ಕೂ ಮೊದಲು ವಯನಾಡಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್​, "ವಯನಾಡಿನ ಜನರು ಪ್ರಿಯಾಂಕಾ ಗಾಂಧಿ ತಮ್ಮ ಮಗಳಂತೆ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿನ ಜನರಿಗಾಗಿ ನನ್ನ ತಂಗಿ ಮತ್ತು ನಾನು ಒಟ್ಟಾಗಿ ಶ್ರಮಿಸುತ್ತೇವೆ. ನಮ್ಮ ತಂದೆ (ರಾಜೀವ್​​ ಗಾಂಧಿ) ತೀರಿಕೊಂಡಾಗ ಪ್ರಿಯಾಂಕಾ ತನ್ನ ತಾಯಿಯನ್ನು ಜತನದಿಂದ ನೋಡಿಕೊಂಡರು. ಆಕೆ ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುವ ವ್ಯಕ್ತಿ. ವಯನಾಡಿನ ಜನರನ್ನು ತನ್ನ ಕುಟುಂಬವೆಂದು ಪರಿಗಣಿಸುತ್ತಾಳೆ. ಹಾಗಾಗಿ, ಆಕೆ ತನ್ನ ಸಂಪೂರ್ಣ ಶಕ್ತಿಯನ್ನು ಇಲ್ಲಿನ ಜನರಿಯಾಗಿ ಮುಡಿಪಿಡಲಿದ್ದಾಳೆ" ಎಂದರು.

ನನ್ನಂತೆ ಸಹೋದರಿಯನ್ನು ಗೆಲ್ಲಿಸಿ:"ಯಾವುದೇ ಸಮಸ್ಯೆಯಲ್ಲೂ ಪ್ರಿಯಾಂಕಾ ವಯನಾಡಿನ ಜನರೊಂದಿಗೆ ಇರುತ್ತಾರೆ ಎಂಬುದು ಖಚಿತ. ನನಗೆ ಕೊಟ್ಟ ಪ್ರೀತಿಯನ್ನು ಅವಳಿಗೂ ಕೊಡಬೇಕು. ವಯನಾಡಿನ ಜನರೇ ನಿಮ್ಮನ್ನು ನನ್ನ ಸಹೋದರಿಯನ್ನು ಒಪ್ಪಿಸುತ್ತಿದ್ದೇನೆ. ಆಕೆಗೆ ವಯನಾಡಿನ ಜನತೆಯ ಸಂಪೂರ್ಣ ಬೆಂಬಲ ಸಿಗಬೇಕು. ಉಪ ಚುನಾವಣೆಯಲ್ಲಿ ಆಕೆಯನ್ನು ಗೆಲ್ಲಿಸಬೇಕು" ಎಂದು ಮನವಿ ಮಾಡಿದರು.

"ರಾಖಿ ಹಬ್ಬದಂದು ಪ್ರಿಯಾಂಕಾ ನನ್ನ ಕೈಗೆ ರಾಖಿ ಕಟ್ಟಿದ್ದಳು. ಅದು ಕಿತ್ತು ಹೋಗುವವರೆಗೂ ನಾನು ಅದನ್ನು ತೆಗೆದಿರಲಿಲ್ಲ. ಅಂತೆಯೇ, ಪ್ರಿಯಾಂಕಾ ಮತ್ತು ವಯನಾಡಿನ ಜನರ ನಡುವಿನ ಬಂಧವೂ ಅಷ್ಟೇ ಬಲವಾಗಿರಲಿದೆ. ನೀವು ಅವಳೊಂದಿಗೆ ನಿಲ್ಲಿ. ನಾನು ಅವಳೊಂದಿಗೆ ಇರುತ್ತೇನೆ" ಎಂದು ಭರವಸೆ ನೀಡಿದರು.

35 ವರ್ಷಗಳ ರಾಜಕೀಯ ಅನುಭವ:ಉಮೇದುದಾರೆ ಪ್ರಿಯಾಂಕಾ ವಾದ್ರಾ ಮಾತನಾಡಿ, ನನಗೆ ರಾಜಕೀಯದಲ್ಲಿ 35 ವರ್ಷಗಳ ಅನುಭವವಿದೆ. ನನ್ನ ಬಾಲ್ಯದಿಂದಲೂ ತಂದೆ, ತಾಯಿ, ಅಣ್ಣನ ಪರ ಪ್ರಚಾರ ಮಾಡಿದ್ದೇನೆ. ಇದೀಗ ನನಗಾಗಿ ರಾಜಕೀಯ ಪ್ರಚಾರ ಆರಂಭಿಸಿದ್ದೇನೆ. 17ನೇ ವಯಸ್ಸಿನಲ್ಲಿ ತಂದೆ ರಾಜೀವ್ ಗಾಂಧಿ ಅವರ ಪರವಾಗಿ ಪ್ರಚಾರ ಮಾಡಿದ್ದೆ ಎಂದರು.

ವಯನಾಡಿನಲ್ಲಿ ನವೆಂಬರ್ 13 ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ:ವಯನಾಡಿನಲ್ಲಿ ಬೃಹತ್​ ರೋಡ್​ ಶೋ ಬಳಿಕ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

ABOUT THE AUTHOR

...view details