ಕರ್ನಾಟಕ

karnataka

ಹೇಮಾ ಸಮಿತಿ ವರದಿ: ನಿರ್ದೇಶಕ ಪ್ರಕಾಶ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ - HEMA PANEL REPORT

By ETV Bharat Karnataka Team

Published : 10 hours ago

ಹೇಮಾ ಸಮಿತಿ ವರದಿಯ ಮೇರೆಗೆ ಮಲಯಾಳಂ ಚಲನಚಿತ್ರ ನಿರ್ದೇಶಕ ಪ್ರಕಾಶ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮಲಯಾಳಂ ಚಲನಚಿತ್ರ ನಿರ್ದೇಶಕ ಪ್ರಕಾಶ್
ಮಲಯಾಳಂ ಚಲನಚಿತ್ರ ನಿರ್ದೇಶಕ ಪ್ರಕಾಶ್ (IANS)

ಕೊಲ್ಲಂ: ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳವನ್ನು ಹೇಮಾ ಸಮಿತಿಯ ವರದಿಯು ಬಹಿರಂಗಪಡಿಸಿದ ನಂತರ, ಈ ವರದಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಗುರುವಾರ ಮೊದಲ ಬಂಧನ ಮಾಡಿದ್ದಾರೆ. ನಿರ್ದೇಶಕ ವಿ.ಕೆ. ಪ್ರಕಾಶ್ ಎಂಬುವರನ್ನು ಬಂಧಿಸಲಾಗಿದೆ.

ಬಂಧನ ಜಾಮೀನಿನ ಮೇಲೆ ಬಿಡುಗಡೆ:ಆದರೆ, ಈ ತಿಂಗಳ ಆರಂಭದಲ್ಲಿಯೇ ಕೇರಳ ಹೈಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ನಿರ್ದೇಶಕ ಪ್ರಕಾಶ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಯುವ ಮಹಿಳಾ ಬರಹಗಾರ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆಗಸ್ಟ್ 29 ರಂದು ಕೊಲ್ಲಂ ಪಲ್ಲಿತೋಟಂ ಪೊಲೀಸರು ನಟ-ನಿರ್ದೇಶಕ ಪ್ರಕಾಶ್ ವಿರುದ್ಧ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಕೇರಳ ಹೈಕೋರ್ಟ್​ ಮೊರೆ ಹೋಗಿದ್ದ ನಿರ್ದೇಶಕ ಪ್ರಕಾಶ್ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 'ತ್ರಿವೆಂಡ್ರಮ್ ಲಾಡ್ಜ್' (2012), 'ನಿರ್ನಾಯಕಂ' (2015), 'ಒರುಥಿ' (2022) ಮುಂತಾದ ಯಶಸ್ವಿ ಚಿತ್ರಗಳನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ.

ಆಗಸ್ಟ್​ನಲ್ಲಿ ಬಹಿರಂಗವಾಗಿದ್ದ ವರದಿ:ಆಗಸ್ಟ್ 19 ರಂದು ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಲಾಗಿತ್ತು. ಆದರೆ ಇದರಲ್ಲಿನ ಕೆಲ ಭಾಗಗಳನ್ನು ಸೆನ್ಸಾರ್ ಮಾಡಲಾಗಿದೆ. ಈ ವರದಿ ಬಹಿರಂಗವಾದ ನಂತರ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ವರದಿಯ ನಂತರ ಕೆಲ ಮಾಜಿ ನಟಿಯರು ತಮ್ಮ ಮೇಲಾದ ದೌರ್ಜನ್ಯದ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರ ನಂತರ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ 11 ಜನರ ವಿರುದ್ಧ ಎಫ್​ಐಆರ್​ಗಳು ದಾಖಲಾಗಿವೆ.

ಹಲವರ ವಿರುದ್ಧ ಆರೋಪ:ಪ್ರಸ್ತುತ ನಟ ಮತ್ತು ಸಿಪಿಐ (ಎಂ) ಶಾಸಕ ಮುಖೇಶ್ ಮಾಧವನ್, ನಿವಿನ್ ಪೌಲಿ, ಸಿದ್ದಿಕಿ, ಜಯಸೂರ್ಯ, ಎಡವೇಲಾ ಬಾಬು, ಮಣಿಯನ್ ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ಪ್ರಕಾಶ್ ಮತ್ತು ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಗಳಾದ ವಿಚು ಮತ್ತು ನೋಬಲ್ ಇವರೆಲ್ಲರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಮುಕೇಶ್, ರಂಜಿತ್, ರಾಜು ಮತ್ತು ಇನ್ನೂ ಕೆಲವರು ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

ಹೇಮಾ ಸಮಿತಿಯ ವರದಿಯ ಆಧಾರದ ಮೇಲೆ 20 ಎಫ್​ಐಆರ್​ಗಳನ್ನು ದಾಖಲಿಸಬಹುದು ಎಂದು ಸಮಿತಿಯ ವರದಿಯ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ) ಹೇಳಿದೆ. ಎಸ್ಐಟಿ ಸಂತ್ರಸ್ತರನ್ನು ಭೇಟಿ ಮಾಡುತ್ತಿದ್ದು, ಸಂತ್ರಸ್ತರು ಬಯಸಿದರೆ ಮಾತ್ರ ಎಫ್​​ಐಆರ್​ಗಳನ್ನು ದಾಖಲಿಸಲಿದೆ.

ಇದನ್ನೂ ಓದಿ :21 ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣ, 15 ಜನರ ಬಂಧನ: ಎನ್​ಡಿಎ ವಿರುದ್ಧ ಖರ್ಗೆ ವಾಗ್ದಾಳಿ - Nawada fire on houses

ABOUT THE AUTHOR

...view details