ಕರ್ನಾಟಕ

karnataka

By ETV Bharat Karnataka Team

Published : Feb 15, 2024, 9:36 AM IST

ETV Bharat / bharat

ರೈತರ ದೆಹಲಿ ಚಲೋ: ಕೇಂದ್ರದ ಜೊತೆ ಇಂದು ಮೂರನೇ ಸುತ್ತಿನ ಸಭೆ, ರೈಲು ತಡೆ ಎಚ್ಚರಿಕೆ

ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಇತ್ತ ಕೇಂದ್ರ ಸರ್ಕಾರ ಮಾತುಕತೆ ನಡೆಸಲು ಆಹ್ವಾನ ನೀಡಿದೆ.

ರೈತರ ದೆಹಲಿ ಚಲೋ
ರೈತರ ದೆಹಲಿ ಚಲೋ

ನವದೆಹಲಿ:ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಸಂಘರ್ಷದ ಹಾದಿ ಹಿಡಿದಿದೆ. ರಾಷ್ಟ್ರ ರಾಜಧಾನಿಗೆ ಬರದಂತೆ ಗಡಿಗಳಲ್ಲಿ ಪೊಲೀಸರು ತಡೆವೊಡ್ಡುತ್ತಿದ್ದರೆ, ಇದಕ್ಕೆ ರೈತರು ಕೂಡ ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಪ್ರತಿಭಟನೆ ಮೂರನೇ ದಿನಕ್ಕೆ ತಲುಪಿದ್ದು, ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಮುಖಂಡರನ್ನ ಆಹ್ವಾನಿಸಿದೆ.

ಫೆಬ್ರವರಿ 8 ಮತ್ತು 12 ರಂದು ನಡೆಸಿದ ಎರಡು ಮಾತುಕತೆಗಳು ಫಲ ಕಂಡಿಲ್ಲ. ಇದರಿಂದ ಒಂದು ವಾರದಲ್ಲಿ ಮೂರನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ರೈತರ ಮುಖಂಡರು ಕೇಂದ್ರದ ಮುಂದೆ ಇಟ್ಟಿದ್ದಾರೆ.

ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ:ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿ ಚಲೋ ತಡೆಯುವ ಮತ್ತು ಪ್ರತಿಭಟನೆಗೆ ಸ್ವಾತಂತ್ರ್ಯ ನೀಡುವಂತೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಈ ಹಿಂದಿನ ವಿಚಾರಣೆಯಲ್ಲಿ ನವೀಕರಿಸಿದ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಜೊತೆಗೆ ಪಂಜಾಬ್, ಹರಿಯಾಣ, ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ.

ಮೂಲ ಹಕ್ಕುಗಳ ನಡುವೆ ಸಮತೋಲನ ಇರಬೇಕು ಎಂದು ಹೈಕೋರ್ಟ್ ಹೇಳಿತ್ತು. ರೈತರು ಮತ್ತು ಜನಸಾಮಾನ್ಯರಿಗೆ ಅವರದ್ದೇ ಆದ ಹಕ್ಕಿದೆ. ಸರ್ಕಾರಗಳು ಸಮಸ್ಯೆಯನ್ನು ಬಗೆಹರಿಸಬೇಕು. ಬಲಪ್ರಯೋಗ ಕೊನೆಯ ಅಸ್ತ್ರವಾಗಬಾರದು.

ಇಂದು ಮೂರನೇ ಸಭೆ:ಕೇಂದ್ರದೊಂದಿಗೆ ಮೂರನೇ ಸುತ್ತಿನ ರೈತರ ಸಭೆ ಇಂದು ಸಂಜೆ ನಡೆಯಲಿದೆ. ಪಂಜಾಬ್‌ನ ಶಂಭು, ಖಾನೂರಿ ಮತ್ತು ದಬ್ವಾಲಿ ಗಡಿಯಲ್ಲಿ ರೈತರ ಪ್ರತಿಭಟನೆ ಜೋರಾಗಿದ್ದು, ಅವರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳು, ರಬ್ಬರ್ ಮತ್ತು ಪ್ಲಾಸ್ಟಿಕ್ ಬುಲೆಟ್‌ಗಳನ್ನು ಹಾರಿಸುತ್ತಿದ್ದಾರೆ.

ರೈಲು ನಿಲುಗಡೆ ಘೋಷಣೆ:ಪಂಜಾಬ್-ಹರಿಯಾಣದ ಶಂಭು ಗಡಿಯನ್ನು ಮುಚ್ಚಿದ ನಂತರ, ಭಾರತೀಯ ರೈತ ಸಂಘವು ಇಂದು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರೈಲುಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಪಂಜಾಬ್ ಲೂಧಿಯಾನ, ಅಮೃತಸರ, ಬಟಿಂಡಾ, ಬರ್ನಾಲಾ, ಫತೇಘರ್ ಸಾಹಿಬ್ ಮತ್ತು ಮೊಗಾದ 6 ಜಿಲ್ಲೆಗಳಲ್ಲಿ ರೈಲುಗಳನ್ನು ನಿಲ್ಲಿಸಲಾಗುತ್ತದೆ ಎಂದು ರೈತ ಸಂಘಗಳು ಹೇಳಿವೆ.

ಸರ್ಕಾರ ಮೊಂಡುತನ ಬಿಡಲಿ:ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಬಿಡಬೇಕು. ರೈತರು ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ಅವರ ನೀತಿಗಳನ್ನು ಸರ್ಕಾರವು ಅಳವಡಿಸಿಕೊಳ್ಳಬೇಕು ಎಂದು ರೈತ ಮುಖಂಡ, ರಾಕೇಶ್​ ಟಿಕಾಯತ್​ ಅವರ ಪುತ್ರ ಚೌಧರಿ ನರೇಶ್ ಟಿಕಾಯತ್ ಹೇಳಿದ್ದಾರೆ.

ಇದನ್ನೂ ಓದಿ:ರಫ್ತುದಾರರಾದ ರೈತರು; ಆಸ್ಟ್ರೇಲಿಯಾಕ್ಕೆ ರೆಡಿ-ಟು-ಕುಕ್​ ಮಿಲೆಟ್​​​ ಪೂರೈಕೆಗೆ ಅವಕಾಶ ನೀಡಿದ ಎಪಿಇಡಿಎ

ABOUT THE AUTHOR

...view details