ಕರ್ನಾಟಕ

karnataka

ETV Bharat / bharat

ಎಕ್ಸಿಟ್​​ ಪೋಲ್ಸ್​ ಸಮೀಕ್ಷೆ ಮತ್ತೆ ಬುಡಮೇಲು: ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್, ಜಮ್ಮು- ಕಾಶ್ಮೀರದಲ್ಲಿ 'ಕೈ' ಮೈತ್ರಿಗೆ ಪವರ್‌

ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಮತ್ತೆ ಕೈಕೊಟ್ಟಿದೆ. ಹರಿಯಾಣದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್​ ಮೈತ್ರಿ ಸರ್ಕಾರ ಅಧಿಕಾರಕ್ಕೇರಲು ಅಣಿಯಾಗಿದೆ.

By ETV Bharat Karnataka Team

Published : 6 hours ago

exit polls prediction wrong again
ಎಕ್ಸಿಟ್​​ ಪೋಲ್ಸ್​ ಸಮೀಕ್ಷೆ ಮತ್ತೆ ಬುಡಮೇಲು (ETV Bharat)

ಹೈದ್ರಾಬಾದ್​:'ಚುನಾವಣಾ ಫಲಿತಾಂಶದ ದಿಕ್ಸೂಚಿ' ಎಂದು ಪರಿಗಣಿಸಲಾಗುವ ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಸುಳ್ಳಾಗಿವೆ. ಲೋಕಸಭೆ ಚುನಾವಣೆಯಂತೆಯೇ ಹರಿಯಾಣ ಮತ್ತು ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ನಾಡಿಮಿಡಿತವನ್ನು ನಿಖರವಾಗಿ ಹಿಡಿಯುವಲ್ಲಿ ವಿಫಲವಾಗಿದ್ದು, ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲಾಗಿವೆ.

ಹರಿಯಾಣದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್​ ಗೆಲುವು ಸಾಧಿಸಲಿದೆ, ಜಮ್ಮು- ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಈಗ ಎಲ್ಲವೂ ಸುಳ್ಳಾಗಿವೆ. ಪ್ರಕಟವಾಗುತ್ತಿರುವ ಫಲಿತಾಂಶದ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಇತ್ತ ಕೇಂದ್ರಾಡಳಿತ ಪ್ರದೇಶದಲ್ಲಿ ನ್ಯಾಷನಲ್​ ಕಾನ್ಫ್​​ರೆನ್ಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿದೆ.

ಎಕ್ಸಿಟ್​​ಪೋಲ್​​ ಹೇಳಿದ್ದೇನು?:ಇಂಡಿಯಾ ಟುಡೇ-ಸಿ ವೋಟರ್​, ರಿಪಬ್ಲಿಕ್​​ ಮ್ರಾಟ್ರಿಝ್​​, ರಿಪಬ್ಲಿಕ್​ ಪಿಮಾರ್ಕ್​, ಎಕ್ಸಿಸ್​ ಮೈ ಇಂಡಿಯಾ, ಪೀಪಲ್ಸ್​ ಪಲ್ಸ್​ ಸೇರಿದಂತೆ ಬಹುತೇಕ ಸಮೀಕ್ಷೆಗಳು ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 45ರಿಂದ 60 ಸ್ಥಾನಗಳನ್ನು ಪಡೆಯುತ್ತದೆ. ಬಿಜೆಪಿ 18ರಿಂದ 32 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದ್ದವು. ಅಂದರೆ, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಲಿವೆ. ಕಾಂಗ್ರೆಸ್​ ನಿಚ್ಚಳ ಬಹುಮತ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.

ಆದರೆ, ಫಲಿತಾಂಶ ಹೊರಬೀಳುತ್ತಿರುವಂತೆಯೇ ಎಲ್ಲವೂ ಉಲ್ಟಾ ಆಗಿದೆ. ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. 90 ಸ್ಥಾನಗಳಲ್ಲಿ ಬಿಜೆಪಿ 50ರಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್​ 35 ಸ್ಥಾನಗಳಿಗೆ ಸೀಮಿತವಾಗಿದೆ. ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 46 ಆಗಿದೆ.

ಕಣಿವೆಯಲ್ಲಿ ಕಾಂಗ್ರೆಸ್​ ಮೈತ್ರಿಗೆ ಸ್ಪಷ್ಟ ಬಹುಮತ:ಇನ್ನೂ, ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ಬರುವುದು ನಿಚ್ಚಳವಾಗಿದೆ. ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾನ್ಫ್​​ರೆನ್ಸ್​ ಪಕ್ಷಗಳ ಮೈತ್ರಿಯು 90 ಸ್ಥಾನಗಳಲ್ಲಿ 49 ಸ್ಥಾನಗಳಲ್ಲಿ ಮುನ್ನಡೆ ಅಥವಾ ಗೆಲುವಿನ ಸನಿಹದಲ್ಲಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಕಣಿವೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಇಲ್ಲಿಯೂ ಭವಿಷ್ಯ ಸುಳ್ಳಾಗಿದೆ. ಬಿಜೆಪಿ 29 ಸ್ಥಾನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಈ ಮೂಲಕ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ ಸತತವಾಗಿ ಉಲ್ಟಾ ಆಗುತ್ತಿವೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಏಕಪಕ್ಷವಾಗಿ ಬಹುಮತ ಪಡೆಯಲಿದೆ. ಎನ್​ಡಿಎ ಮೈತ್ರಿಕೂಟಕ್ಕೆ ಗೆಲುವು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಎಲ್ಲವೂ ಬುಡಮೇಲಾಗಿತ್ತು. ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ.

ಇದನ್ನೂ ಓದಿ:ಜಮ್ಮು- ಕಾಶ್ಮೀರದ ನೂತನ ಸಿಎಂ ಒಮರ್ ಅಬ್ದುಲ್ಲಾ: ಫಾರೂಕ್ ಅಬ್ದುಲ್ಲಾ ಘೋಷಣೆ

ABOUT THE AUTHOR

...view details