ಕರ್ನಾಟಕ

karnataka

ಪ್ರತಿಪಕ್ಷಗಳ ತೀವ್ರ ಆಕ್ಷೇಪ: 'ಲ್ಯಾಟರಲ್​ ಎಂಟ್ರಿ' ನೇಮಕಾತಿ ರದ್ದತಿಗೆ ಕೇಂದ್ರ ಸರ್ಕಾರ ಸೂಚನೆ - Lateral Entry

By ANI

Published : Aug 20, 2024, 3:38 PM IST

ಲ್ಯಾಟರಲ್​ ಎಂಟ್ರಿ ಮೂಲಕ ಅಧಿಕಾರಿಗಳ ನೇಮಕಾತಿ ಜಾಹೀರಾತನ್ನು ರದ್ದು ಮಾಡುವಂತೆ ಯುಪಿಎಸ್​ಸಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಸಾಮಾಜಿಕ ನ್ಯಾಯ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ.

ಟರಲ್​ ಎಂಟ್ರಿ' ನೇಮಕಾತಿ ರದ್ದಿಗೆ ಸೂಚಿಸಿದ ಕೇಂದ್ರ ಸರ್ಕಾರ
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ANI)

ನವದೆಹಲಿ:ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ 'ಲ್ಯಾಟರಲ್​ ಎಂಟ್ರಿ' ಜಾಹೀರಾತನ್ನು ತಕ್ಷಣದಿಂದಲೇ ರದ್ದು ಮಾಡುವಂತೆ ಕೇಂದ್ರ ಸರ್ಕಾರ ಯುಪಿಎಸ್​​ಸಿಗೆ ಮಂಗಳವಾರ ಸೂಚನೆ ನೀಡಿತು. ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಪತ್ರ ಬರೆದು ತಿಳಿಸಿದ್ದಾರೆ.

ಲ್ಯಾಟರಲ್​ ಎಂಟ್ರಿ ಮೂಲಕ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಯುಪಿಎಸ್​ಸಿ ಈಚೆಗೆ ಜಾಹೀರಾತು ಪ್ರಕಟಿಸಿತ್ತು. ಯುಪಿಎಸ್​ಸಿಯ ಈ ನಿರ್ಧಾರ ಮೀಸಲಾತಿಗೆ ಧಕ್ಕೆ ತರುತ್ತದೆ ಎಂದು ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.

ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಯುಪಿಎಸ್​ಸಿ ಅಧ್ಯಕ್ಷೆ ಪ್ರೀತಿ ಸೂದನ್​ ಅವರಿಗೆ ಪತ್ರ ಬರೆದಿದ್ದು, ಈ ಕೂಡಲೇ ಜಾಹೀರಾತನ್ನು ರದ್ದು ಮಾಡಿ. ಹಿಂದುಳಿದ ಸಮುದಾಯಗಳ ಜನರು ಸರ್ಕಾರಿ ಹುದ್ದೆಗಳಲ್ಲಿ ನ್ಯಾಯಸಮ್ಮತವಾಗಿ ತಮ್ಮ ಪ್ರಾತಿನಿಧ್ಯ ಪಡೆಯಲು ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದಾರೆ.

ಯುಪಿಎಸ್​ಸಿ ಜಾಹೀರಾತೇನು?:ಲ್ಯಾಟರಲ್​ ಎಂಟ್ರಿ ಮೂಲಕ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳು ಸೇರಿದಂತೆ 45 ಮಂದಿಯ ನೇಮಕಾತಿ ಮಾಡುವ ಸಲುವಾಗಿ ಯುಪಿಎಸ್​​ಸಿ ಜಾಹೀರಾತು ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣತರು ಹಾಗೂ ತಜ್ಞರನ್ನು ಲ್ಯಾಟರಲ್​ ಎಂಟ್ರಿ ಮೂಲಕ ನೇಮಕ ಮಾಡಿಕೊಳ್ಳಲು ಆಯೋಗ ಬಯಸಿತ್ತು.

ಪ್ರತಿಪಕ್ಷಗಳಿಂದ ತೀವ್ರ ವಿರೋಧ:ಈ ನಿರ್ಧಾರಕ್ಕೆ ಕಾಂಗ್ರೆಸ್​ ಸೇರಿದಂತೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಸರ್ಕಾರದ ಈ ಕ್ರಮದಿಂದ ಎಸ್​ಸಿ, ಎಸ್​ಟಿ ಸೇರಿದಂತೆ ದಮನಿತ, ಹಿಂದುಳಿದ ಸಮುದಾಯಗಳ ಮೀಸಲಾತಿ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಲೋಕಸೇವಾ ಆಯೋಗದ ಪ್ರಮುಖ ಹುದ್ದೆಗಳಿಗೆ ಆರ್​ಎಸ್​ಎಸ್​ ಸಂಬಂಧಿತ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲು ಪ್ರಯತ್ನ ನಡೆದಿದೆ ಎಂದು ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪ ಮಾಡಿದ್ದರು.

ಆದರೆ, ಇದನ್ನು ಮೊದಲು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ನಿಯಮವನ್ನು ಹಿಂದಿನ ಕಾಂಗ್ರೆಸ್​ ಸರ್ಕಾರದಲ್ಲಿ ರೂಪಿಸಲಾಗಿತ್ತು. 2013ರಲ್ಲಿ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರ ಸಮಿತಿಯು ಇಂಥದ್ದೊಂದು ನೇಮಕಾತಿಯನ್ನು ಶಿಫಾರಸು ಮಾಡಿತ್ತು. ಅದನ್ನು ಈಗ ಅನುಮೋದಿಸಲಾಗಿದೆ ಎಂದಿತ್ತು. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದಂತೆ ಲ್ಯಾಟರಲ್​ ಎಂಟ್ರಿ ಮೂಲಕ ವಿವಿಧ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ನಿಯಮವನ್ನು ವಾಪಸ್​ ಪಡೆದಿದೆ.

ಪ್ರತಿಪಕ್ಷಗಳ ಪ್ರತಿಕ್ರಿಯೆ:ಕೇಂದ್ರ ಸರ್ಕಾರ ಲ್ಯಾಟರಲ್​ ಎಂಟ್ರಿ ನೇಮಕಾತಿಯನ್ನು ವಾಪಸ್​ ಪಡೆದಿದ್ದನ್ನು ಪ್ರತಿಪಕ್ಷಗಳ ಧ್ವನಿಗೆ ಸಿಕ್ಕ ಜಯ ಎಂದು ಹೇಳಿಕೊಂಡಿವೆ. ಸಂವಿಧಾನ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುತ್ತೇವೆ. ಲ್ಯಾಟರಲ್ ಎಂಟ್ರಿಯಂತಹ ಬಿಜೆಪಿಯ ಷಡ್ಯಂತ್ರಗಳನ್ನು ನಾವು ವಿಫಲಗೊಳಿಸುತ್ತೇವೆ. ಶೇಕಡಾ 50ರಷ್ಟು ಮೀಸಲಾತಿ ಮಿತಿಯನ್ನು ದಾಟುವ ಮೂಲಕ ಜಾತಿ ಗಣತಿ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ಕಾಪಾಡುತ್ತೇವೆ ಎಂದು ರಾಹುಲ್​ ಗಾಂಧಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಅಧಿಕಾರದಲ್ಲಿ ಲ್ಯಾಟರಲ್​ ಪ್ರವೇಶಾತಿ; ಮೀಸಲಾತಿ ಕಿತ್ತುಕೊಳ್ಳುವ ಪ್ರಯತ್ನ ಎಂದ ರಾಹುಲ್​ ಗಾಂಧಿ - lateral entry into bureaucracy

ABOUT THE AUTHOR

...view details