ಕರ್ನಾಟಕ

karnataka

ETV Bharat / bharat

ಶತಮಾನದ ಕನಸು ನನಸಾಗುವ ಅಮೃತ ಘಳಿಗೆ: ಅಯೋಧ್ಯೆಗಾಗಿ 500 ವರ್ಷಗಳಲ್ಲಿ ನಡೆದಿದ್ದೇನು?

Ayodhya Ram Mandir History: ಕೋಟ್ಯಂತರ ಭಾರತೀಯರ ಕನಸು ಇನ್ನು ಮುಂದಿನ ಕೆಲವೇ ಗಂಟೆಗಳಲ್ಲಿ ನನಸಾಗಲಿದೆ. ಹಲವು ವಿವಾದಗಳು, ಅನೇಕರ ತ್ಯಾಗ, ಕಾನೂನು ಹೋರಾಟಗಳ ಬಳಿಕ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ.

By ETV Bharat Karnataka Team

Published : Jan 22, 2024, 8:37 AM IST

ayodhya ram mandir  ayodhya ram mandir history  ವಿವಾದದಿಂದ ಪ್ರಾಣ ಪ್ರತಿಷ್ಠೆ  500 ವರ್ಷಗಳ ಇತಿಹಾಸ  ಕನಸು ಕೆಲವೇ ಗಂಟೆಗಳಲ್ಲಿ ನನಸಾಗಲಿದೆ
ಶ್ರೀರಾಮ ಮಂದಿರದ ವೈಭೋಗ

ಅಯೋಧ್ಯೆ(ಉತ್ತರ ಪ್ರದೇಶ):ಇನ್ನು ಕೆಲವೇ ಗಂಟೆಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಹಲವು ವರ್ಷಗಳಿಂದ ಇಡೀ ದೇಶವೇ ಈ ಅಮೃತ ಗಳಿಗೆಗಾಗಿ ಅತ್ಯಂತ ಕಾತರತೆಯಿಂದ ಕಾಯುತ್ತಿದೆ. ಆದರೆ ಇದ್ಯಾವುದೂ ಅಷ್ಟು ಸುಲಭ ಸಾಧ್ಯವಾಗಲಿಲ್ಲ. ಇದರ ಹಿಂದೆ ಶತಮಾನಗಳ ಇತಿಹಾಸವಿದೆ. ಅನೇಕ ಸಂಘರ್ಷ, ಸಾವು-ನೋವುಗಳಿವೆ. ಆದರೆ ಇವೆಲ್ಲವನ್ನೂ ಮೆಟ್ಟಿನಿಂತು ರಾಮನಿಗೆ ಸರ್ವಾಂಗ ಸುಂದರ ದೇಗುವ ನಿರ್ಮಿಸುವ ಪ್ರಯತ್ನ ಕೊನೆಗೂ ಈಡೇರಿದೆ. ಇದರೊಂದಿಗೆ ಕೋಟ್ಯಂತರ ಹಿಂದೂಗಳ ಕನಸು ನನಸಾಗುತ್ತಿದೆ.

ಅಯೋಧ್ಯೆ ವಿವಾದ:ಅಯೋಧ್ಯೆ ಸಂಘರ್ಷ 1528ರಲ್ಲಿ ಪ್ರಾರಂಭವಾಯಿತು. ಅದು ಮೊಘಲರು ಭಾರತವನ್ನು ಆಳುತ್ತಿದ್ದ ಕಾಲ. ಬಾಬರನ ಆಳ್ವಿಕೆಯಲ್ಲಿ ಕಮಾಂಡರ್ ಆಗಿದ್ದ ಮೀರ್ ಬಾಖಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸಿದನು. ರಾಮಾಯಣದಂತೆ, ಅಯೋಧ್ಯೆ ಶ್ರೀರಾಮನ ಜನ್ಮಸ್ಥಳ. ಮೀರ್‌ ಬಾಖಿ ಬಾಬರಿ ಮಸೀದಿಯನ್ನು ನಿರ್ಮಿಸಿದ ನಿಖರವಾದ ಸ್ಥಳದಲ್ಲೇ ಬಾಲರಾಮ ಜನಿಸಿದರು ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಮಸೀದಿ ನಿರ್ಮಾಣವಾದಾಗ ಘರ್ಷಣೆಗಳು ಪ್ರಾರಂಭವಾದವು. ನಂತರದಲ್ಲಿ, ಅಂದರೆ 1843ರಿಂದ 1949ರವರೆಗೆ ಮಸೀದಿಯ ಸುತ್ತ ಅನೇಕ ವಿವಾದಗಳು ನಡೆದವು. 1853 ಮತ್ತು 1859ರಲ್ಲಿ ಈ ವಿವಾದ ಭುಗಿಲೆದ್ದಿತು. ಆಗಿನ ಬ್ರಿಟಿಷ್ ಸರ್ಕಾರ ಅಯೋಧ್ಯೆಯ ಪ್ರದೇಶದ ಸುತ್ತಲೂ ಬೇಲಿಗಳನ್ನು ಹಾಕಿತು. ಈ ಸ್ಥಳದಲ್ಲಿದ್ದ ಮಸೀದಿಯ ಒಳಗೆ ಮುಸ್ಲಿಮರು ಮತ್ತು ಹೊರಗೆ ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಯಿತು.

ಭವ್ಯ ಶ್ರೀರಾಮ ಮಂದಿರದ ಒಳಭಾಗದ ವಿಹಂಗಮ ನೋಟ

ಸ್ವಾತಂತ್ರ್ಯಾ ನಂತರದ ಸಂಘರ್ಷ:1949ರಲ್ಲಿ ಭಾರತದ ಸ್ವಾತಂತ್ರ್ಯವಾದ ನಂತರ ಈ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿತು. ಹಿಂದೂಗಳು ಬಾಬರಿ ಮಸೀದಿಯಲ್ಲಿ ಬಾಲರಾಮನ ವಿಗ್ರಹವಿದೆ ಎಂದು ಹೇಳಲು ಪ್ರಾರಂಭಿಸಿದರು. ಧಾರ್ಮಿಕ ಘರ್ಷಣೆಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಗಿನ ಸರ್ಕಾರ ಇದನ್ನು 'ವಿವಾದಾತ್ಮಕ ಸ್ಥಳ'ವೆಂದು ಘೋಷಿಸಿತು. ಬಾಗಿಲುಗಳು ಮುಚ್ಚಿದವು. 1984ರಲ್ಲಿ ವಿಶ್ವ ಹಿಂದೂ ಪರಿಷತ್ ಈ ಸ್ಥಳವನ್ನು ಮುಕ್ತಗೊಳಿಸಿ ರಾಮಮಂದಿರ ನಿರ್ಮಾಣಕ್ಕಾಗಿ ಚಳುವಳಿ ಪ್ರಾರಂಭಿಸಿತು.

ಫೆಬ್ರವರಿ 1, 1986ರಂದು ಫೈಜಾಬಾದ್‌ನ ಜಿಲ್ಲಾ ನ್ಯಾಯಾಧೀಶರು ಬೀಗಗಳನ್ನು ತೆಗೆಯಲು ಆದೇಶಿಸಿದರು. ಹಿಂದೂಗಳು ಒಳಗೆ ಹೋಗಿ ಪೂಜೆ ಮಾಡಬಹುದು ಎಂದು ಹೇಳಿದರು. ಅಪ್ಪಾಡೆ ಬಾಬರಿ ಮಸೀದಿ ಕ್ರಿಯಾ ಸಮಿತಿ ರಚಿಸಲಾಗಿತ್ತು. 1990ರಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಲು ಸೋಮನಾಥದಿಂದ ರಥಯಾತ್ರೆ ಕೈಗೊಂಡರು. ಡಿಸೆಂಬರ್ 6, 1992ರಂದು ಕೆಲವು ಕಾರ್ಯಕರ್ತರು ಬಾಬರಿ ಮಸೀದಿಯನ್ನು ಕೆಡವಿದರು. ಇದು ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತು. ಇದರಿಂದಾಗಿ ಹಲವೆಡೆ ಧಾರ್ಮಿಕ ಘರ್ಷಣೆ ನಡೆಯಿತು. ಅಯೋಧ್ಯೆ ಮಾತ್ರವಲ್ಲದೇ ಹಲವೆಡೆ ಸಾವಿರಾರು ಜನರು ಸಾವನ್ನಪ್ಪಿದರು.

ವಿವಾದಿತ ಭೂಮಿ ಮೂರು ಭಾಗ:2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿದ ಉತ್ಖನನದಲ್ಲಿ ಮಸೀದಿಯ ಅಡಿಯಲ್ಲಿ ಒಂದು ರಚನೆ ಇದೆ ಎಂದು ತಿಳಿದುಬಂತು. ಎಎಸ್‌ಐ ಬಹಿರಂಗಪಡಿಸಿದ್ದನ್ನು ಮುಸ್ಲಿಮರು ಒಪ್ಪಲಿಲ್ಲ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ ಭೂಮಿಯನ್ನು 3 ಭಾಗಗಳಾಗಿ ವಿಂಗಡಿಸಿ ಮಹತ್ವದ ತೀರ್ಪು ನೀಡಿತು. ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ಪ್ರತಿನಿಧಿಗಳಿಗೆ ಹಂಚಿಕೆ ಮಾಡಲು ಆದೇಶಿಸಿತು. 2011ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತು. 2011ರಿಂದ 2016ರವರೆಗೆ ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಬಾರಿ ವಿಚಾರಣೆ ನಡೆಯಿತು.

ಭವ್ಯ ಶ್ರೀರಾಮ ಮಂದಿರ

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ನವೆಂಬರ್ 9, 2019ರಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ವಿವಾದಿತ 2.77 ಎಕರೆ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ಗೆ ನೀಡಬೇಕೆಂದು ತೀರ್ಪು ನೀಡಿತು. ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿಯೇ ಪರ್ಯಾಯ ಸ್ಥಳದಲ್ಲಿ 5 ಎಕರೆ ಭೂಮಿ ಮೀಸಲಿಡಲಾಗಿದೆ. ಫೆಬ್ರವರಿ 5, 2020ರಂದು, ರಾಮ ಮಂದಿರದ ನಿರ್ಮಾಣ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರವು 'ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ' ಟ್ರಸ್ಟ್ ಸ್ಥಾಪಿಸಿತು.

ಪ್ರಧಾನಿ ಮೋದಿ ಶಂಕುಸ್ಥಾಪನೆ:ಆಗಸ್ಟ್ 5, 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಜನ್ಮಭೂಮಿಯ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಜನವರಿ 2024ರ ವೇಳೆಗೆ ರಾಮಮಂದಿರದ ಉದ್ಘಾಟನೆಗಾಗಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮಾಡಲಾಯಿತು. ಇಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಹೊಸ ದೇವಾಲಯವು ಬಾಲರಾಮನ ಹೊಸ ವಿಗ್ರಹದೊಂದಿಗೆ ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ಮೋದಿ ಅವರು ಯಜಮಾನನಾಗಿ ಮುಂದೆ ನಿಂತು ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ನಾಳೆ ರಜೆ ಘೋಷಣೆ ಮಾಡುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ABOUT THE AUTHOR

...view details