ಕರ್ನಾಟಕ

karnataka

ಇನ್ನೆರಡು ದಿನಗಳಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ: ಅರವಿಂದ್ ಕೇಜ್ರಿವಾಲ್ ಘೋಷಣೆ - Arvind Kejriwal to step down

By ETV Bharat Karnataka Team

Published : Sep 15, 2024, 1:02 PM IST

ಇನ್ನೆರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (IANS)

ನವದೆಹಲಿ: ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿದ ಅವರು, ನವೆಂಬರ್​ನಲ್ಲಿ ಅವಧಿಗೆ ಮುಂಚಿತವಾಗಿ ಮುಂಚಿತವಾಗಿ ದೆಹಲಿಯಲ್ಲಿ ಚುನಾವಣೆ ನಡೆಸಲು ಬಯಸುವುದಾಗಿ ಹೇಳಿದರು.

ಚುನಾವಣೆ ಮುಗಿಯುವವರೆಗೂ ಮತ್ತೊಬ್ಬ ಎಎಪಿ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ಹೊಸ ಸಿಎಂ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

"ನಾನು ಅಗ್ನಿ ಪರೀಕ್ಷೆಗೆ ಸಿದ್ಧನಾಗಿದ್ದೇನೆ. ಎರಡು ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದೆಹಲಿಯಲ್ಲಿ ಚುನಾವಣೆ ನಡೆಯಲು ಇನ್ನೂ ಹಲವಾರು ತಿಂಗಳುಗಳಿವೆ. ಆದರೆ ಜನರ ತೀರ್ಪು ಬರುವವರೆಗೂ ನಾನು ಸಿಎಂ ಹುದ್ದೆಯಿಂದ ದೂರವುಳಿಯಲಿದ್ದೇನೆ" ಎಂದು ಅವರು ಹೇಳಿದರು.

"2 ರಿಂದ 3 ದಿನಗಳ ನಂತರ ಸಭೆ ನಡೆಯಲಿದ್ದು, ಸಭೆಯಲ್ಲಿ ಹೊಸ ಸಿಎಂ ಹೆಸರನ್ನು ನಿರ್ಧರಿಸಲಾಗುವುದು. ನಾನು ಮತ್ತು ಮನೀಶ್ ಸಿಸೋಡಿಯಾ 'ಜನತಾ ನ್ಯಾಯಾಲಯದ' ಮೊರೆ ಹೋಗಲಿದ್ದೇವೆ. ನಮ್ಮ ಭವಿಷ್ಯ ಮತದಾರರಾದ ನಿಮ್ಮ ಕೈಯಲ್ಲಿದೆ. ನಾನು ಪ್ರಾಮಾಣಿಕನಾಗಿದ್ದರೆ ನನಗೆ ಮತ ಚಲಾಯಿಸಿ, ಇಲ್ಲವಾದರೆ ಬೇಡ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ಸರ್ಕಾರವು ಜೈಲಿನಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದರೂ ಅದು ಸಾಧ್ಯ ಎಂಬುದನ್ನು ನಾನು ಸಾಬೀತುಪಡಿಸಿದ್ದೇನೆ. ಪ್ರಧಾನಿಯವರು ಸುಳ್ಳು ಕೇಸಿನಲ್ಲಿ ನಿಮ್ಮನ್ನು ಜೈಲಿಗೆ ಹಾಕಿದರೆ ರಾಜೀನಾಮೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ನಾವು ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡಬಾರದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜೈಲಿನಿಂದ ಸರ್ಕಾರ ನಡೆಸಲು ಸಾಧ್ಯ. ಇದು ನಮ್ಮ ಅಧಿಕಾರದ ದುರಾಸೆ ಅಥವಾ ನಮಗೆ ಸಿಎಂ ಸ್ಥಾನದ ಪ್ರಾಮುಖ್ಯತೆಯ ವಿಚಾರ ಅಲ್ಲ. ನಮ್ಮ ಸಂವಿಧಾನ, ನಮ್ಮ ದೇಶ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯ ವಿಚಾರ ಇಲ್ಲಿ ಮುಖ್ಯವಾಗಿದೆ" ಎಂದು ಕೇಜ್ರಿವಾಲ್ ತಿಳಿಸಿದರು.

ಆರು ತಿಂಗಳು ಜೈಲುವಾಸದ ನಂತರ ಜಾಮೀನು ಪಡೆದು ಹೊರಬಂದ ಎರಡು ದಿನಗಳ ನಂತರ, ಕೇಜ್ರಿವಾಲ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಕೇಂದ್ರ ಸರ್ಕಾರವು ಬ್ರಿಟಿಷ್ ಆಡಳಿತಕ್ಕಿಂತಲೂ ಹೆಚ್ಚು ಸರ್ವಾಧಿಕಾರಿಯಾಗಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಎಎಪಿ ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, "ಬಿಜೆಪಿ 'ಮದ್ಯ ಹಗರಣ' ಎಂಬ ಕಾಲ್ಪನಿಕ ಕಥೆಯನ್ನು ರಚಿಸಿದೆ. ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ಆ ಕಥೆಯನ್ನು ಕೊನೆಗೊಳಿಸಿದೆ. ಇದು ನಮಗೆ ಸುಖಾಂತ್ಯವಾದರೆ, ಬಿಜೆಪಿಯ ಪಾಲಿಗೆ ದುಖಾಂತ್ಯವಾಗಿದೆ. ದೆಹಲಿಯಲ್ಲಿ ಚುನಾವಣೆ ಬರುವವರೆಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿರಿಸುವ ಯೋಚನೆ ಅವರದಾಗಿತ್ತು. ಆದರೆ ಅವರ ಆರೋಪಗಳು ಸುಳ್ಳು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅದಕ್ಕಾಗಿಯೇ ಇಂದು ಅರವಿಂದ್ ಕೇಜ್ರಿವಾಲ್ ಮತ್ತು ನಾನು ಜೈಲಿನಿಂದ ಹೊರಬಂದಿದ್ದೇವೆ" ಎಂದು ಅವರು ಹೇಳಿದರು.

ಇದನ್ನೂ ಓದಿ :ಜಾರ್ಖಂಡ್​: 6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ - Vande Bharat trains

ABOUT THE AUTHOR

...view details