ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲ ಹಿಂದುಳಿದ ವರ್ಗಗಳ (ಒಬಿಸಿ) ಜಾತಿ ಪ್ರಮಾಣಪತ್ರಗಳನ್ನು ಕಲ್ಕತ್ತಾ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿ ತಪಬ್ರತಾ ಚಕ್ರವರ್ತಿ ಮತ್ತು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರ ವಿಭಾಗೀಯ ಪೀಠ ಈ ತೀರ್ಪು ನಿಡಿದೆ. ತೀರ್ಪಿನಿಂದಾಗಿ 2011 ರಲ್ಲಿ ಅಧಿಕಾರಕ್ಕೆ ಬಂದ ಪ್ರಸ್ತುತ ತೃಣಮೂಲ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನೀಡಲಾದ ಎಲ್ಲಾ ಒಬಿಸಿ ಜಾತಿ ಪ್ರಮಾಣಪತ್ರಗಳು ಈಗ ಅಸಿಂಧು ಆಗಲಿವೆ.
ಈ ಆದೇಶದ ನಂತರ, 2010 ರಿಂದ ನೀಡಲಾದ 5 ಲಕ್ಷಕ್ಕೂ ಹೆಚ್ಚು ಒಬಿಸಿ ಪ್ರಮಾಣಪತ್ರಗಳನ್ನು ಇನ್ನು ಮುಂದೆ ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಬಳಸುವಂತಿಲ್ಲ. ಆದಾಗ್ಯೂ, ಆ ಅವಧಿಯಲ್ಲಿ ನೀಡಲಾದ ಪ್ರಮಾಣಪತ್ರಗಳನ್ನು ಬಳಸಿಕೊಂಡು ಈಗಾಗಲೇ ಉದ್ಯೋಗಗಳನ್ನು ಪಡೆದವರಿಗೆ ವಿನಾಯಿತಿ ನೀಡಲಾಗಿದೆ. ಹೊಸ ಆದೇಶವು ಇವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
2010 ರ ನಂತರ ನೀಡಲಾದ ಪ್ರಮಾಣಪತ್ರಗಳನ್ನು ನಿಗದಿತ ಕಾನೂನುಗಳ ಕಾರ್ಯವಿಧಾನಗಳಿಗೆ ಅನುಗುಣವಾಗಿ ನೀಡದ ಕಾರಣ, ಅವುಗಳನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ. ಒಬಿಸಿ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಎಂಬುದನ್ನು ರಾಜ್ಯ ವಿಧಾನಸಭೆ ಈಗ ನಿರ್ಧರಿಸಲಿ ಎಂದು ನ್ಯಾಯಪೀಠ ಸೂಚಿಸಿದೆ. ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗವು ಈಗ ಒಬಿಸಿ ಪಟ್ಟಿಯಲ್ಲಿ ಸೇರಿಸಬಹುದಾದ ಜಾತಿ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.