ಕರ್ನಾಟಕ

karnataka

ETV Bharat / bharat

ನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣ ಸುಖಾಂತ್ಯ: ಕೇಸ್​ ಭೇದಿಸಿದ್ದೇ ರೋಚಕ - ACTOR MUSHTAQ AHMED

ನಟನನ್ನು ಅಪಹರಣ ಮಾಡಿದ್ದ ಅಪಹರಣಕಾರರ ಗ್ಯಾಂಗ್​ವೊಂದನ್ನು ಭೇದಿಸಿರುವ ಬಿಜ್ನೋರ್ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಲಕ್ಷ 4 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್ ಝಾ ತಿಳಿಸಿದ್ದಾರೆ.

4 kidnappers arrested who kidnapped film actor Mushtaq Ahmed in Bijnor
ನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣ ಸುಖಾಂತ್ಯ (ETV Bharat)

By ETV Bharat Karnataka Team

Published : Dec 14, 2024, 8:07 PM IST

ಬಿಜ್ನೋರ್:ಚಿತ್ರನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣವನ್ನು ಭೇದಿಸಿದ ಇಲ್ಲಿನ ಪೊಲೀಸರು, ನಾಲ್ವರು ಸದಸ್ಯರಿದ್ದ ಗ್ಯಾಂಗ್​ವೊಂದನ್ನು ಬಂಧಿಸಿದೆ. ಸಾರ್ಥಕ್ ಚೌಧರಿ, ಸಬಿಯುದ್ದೀನ್, ಅಜೀಂ ಮತ್ತು ಶಶಾಂಕ್ ಬಂಧಿತ ಆರೋಪಿಗಳು. ಈ ಗ್ಯಾಂಗ್‌ನ ನಾಯಕ ಸೇರಿದಂತೆ ಇನ್ನೂ 6 ಮಂದಿ ತಲೆಮರೆಸಿಕೊಂಡಿದ್ದು, ಆ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್ ಝಾ ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ಆಯೋಜನೆ ಹೆಸರಿನಲ್ಲಿ ನಟ ಮುಷ್ತಾಕ್ ಖಾನ್ ಅವರನ್ನು ಸಂಪರ್ಕಿಸಿದ್ದ ಈ ಗ್ಯಾಂಗ್, ನವೆಂಬರ್ 20 ರಂದು ದೆಹಲಿ-ಮೀರತ್ ಹೆದ್ದಾರಿಯಿಂದ ಕ್ಯಾಬ್‌ ಮೂಲಕ ಅಪಹರಿಸಿತ್ತು. ಅಪಹರಣದ ಬಳಿಕ ನಟನ ಮೊಬೈಲ್‌ನ ಯುಪಿಐನಿಂದ ಬೆದರಿಸಿ ತಮ್ಮ ಖಾತೆಗೆ ಹಣ ಕೂಡ ವರ್ಗಾಯಿಸಿಕೊಂಡಿದ್ದರು. ಘಟನೆ ನಡೆಯುತ್ತಿದ್ದಂತೆ ಮುಷ್ತಾಕ್ ಅವರ ಈವೆಂಟ್ ಮ್ಯಾನೇಜರ್ ಶಿವಂ ಯಾದವ್ ಕೊತ್ವಾಲಿ ನಗರದ ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅಪಹರಣಕಾರರ ಗ್ಯಾಂಗ್​ ಅನ್ನು ಬಂಧಿಸಿದೆ ಎಂದರು.

ನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣ ಸುಖಾಂತ್ಯ: ಪ್ರಕರಣ ಭೇದಿಸಿದ್ದೇ ರೋಚಕ (ETV Bharat)

ಮುಂಗಡ ಹಣ ಸಂದಾಯ: ಮೀರತ್‌ನ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ನಟ ಮುಷ್ತಾಕ್ ಖಾನ್ ಅವರೊಂದಿಗೆ ರಾಹುಲ್ ಸೈನಿ ಎಂಬಾತ ಫೋನ್‌ನಲ್ಲಿ ಮಾತನಾಡಿದ್ದರು. ಖಾತ್ರಿಗಾಗಿ ನಟನ ಖಾತೆಗೆ ಸಂಭಾವನೆ ರೂಪದಲ್ಲಿ 25,000 ರೂ.ಗಳನ್ನು ಮುಂಗಡವಾಗಿ ಜಮಾ ಕೂಡ ಮಾಡಿದ್ದರು. ನವೆಂಬರ್ 20 ರಂದು ಮುಂಬೈನಿಂದ ದೆಹಲಿಗೆ ವಿಮಾನ ಟಿಕೆಟ್ ಬುಕ್ ಸಹ ಮಾಡಿದ್ದ ನಟ ಖಾನ್ ತಲುಪಬೇಕಾದ ಕಾರ್ಯಕ್ರಮ ಸ್ಥಳವನ್ನು ತಲುಪಿರಲಿಲ್ಲ.

ಚಿತ್ರನಟ ಮುಷ್ತಾಕ್ ಅಹ್ಮದ್ (ETV Bharat)

ಕ್ಯಾಬ್ ಮೂಲಕ ಅಪಹರಣ: ನ. 20 ರಂದು, ಮುಂಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮುಷ್ತಾಕ್ ಖಾನ್​ ಅವರಿಗಾಗಿ ರಾಹುಲ್ ಸೈನಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಮೀರತ್​ಗೆ ಹೋಗಬೇಕಿದ್ದ ಕ್ಯಾಬ್ ಚಾಲಕ ದಾರಿ ಮಧ್ಯೆ ಕಾರು ನಿಲ್ಲಿಸಿ ಮುಷ್ತಾಕ್ ಅವರನ್ನು ಇನ್ನೊಂದು ಕಾರಿನಲ್ಲಿ ಕೂರಿಸಿದ್ದ. ಸ್ವಲ್ಪ ದೂರ ಸಾಗಿದ ನಂತರ ಚಾಲಕ ಕಾರು ನಿಲ್ಲಿಸಿ ಮತ್ತಿಬ್ಬರನ್ನು ಹತ್ತಿಸಿಕೊಂಡು ಕಾರನ್ನು ಅಪರಿಚಿತರ ಮನೆಗೆ ತಿರುಗಿಸಿದ್ದ. ಇಲ್ಲಿ ಅಪಹರಣಕಾರರು ನಟನಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದು, ಫೋನ್‌ ಪಾಸ್‌ವರ್ಡ್‌ ಪಡೆದಿದ್ದರು. ಆದರೆ, ಮರುದಿನ ನ. 21 ರಂದು ಖಾನ್ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಮುಂಬೈಗೆ ಮರಳಿದ್ದರು. ಮೊಬೈಲ್, ಬ್ಯಾಗ್ ಮತ್ತಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರಿಂದ ಅಪಹರಣಕಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ ಮುಷ್ತಾಕ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಲಕ್ಷ ರೂ. ಹಣ ಎಗರಿಸಿದ್ದರು.

ಸಿಸಿಟಿವಿ ದೃಶ್ಯಾವಳಿ (ETV Bharat)

ಯುಪಿಐ ಮೂಲಕ ಶಾಪಿಂಗ್:ಅಪಹರಣಕಾರರು ಮುಷ್ತಾಕ್ ಅವರ ಮೊಬೈಲ್‌ನಿಂದ 2 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಮುಜಾಫರ್‌ನಗರ ಮತ್ತು ಜನಸತ್‌ನಲ್ಲಿ ಯುಪಿಐ ಮೂಲಕ ಶಾಪಿಂಗ್ ಕೂಡ ಮಾಡಿದ್ದಾರೆ. ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಈ ಅಪಹರಣಕಾರರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅವರಿಂದ 1 ಲಕ್ಷ 4 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲವಿ ಅಲಿಯಾಸ್ ಶುಶಾಂತ್, ಆಕಾಶ್ ಅಲಿಯಾಸ್ ಗೋಲಾ, ಶಿವ, ಅರ್ಜುನ್ ಕರ್ನಾವಾಲ್, ಅಂಕಿತ್ ಅಲಿಯಾಸ್ ಪಹಾರಿ ಮತ್ತು ಲವಿಯ ಸಂಬಂಧಿ ಶುಭಂ ತಲೆಮರೆಸಿಕೊಂಡಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಭಿಷೇಕ್ ಝಾ ತಿಳಿಸಿದ್ದಾರೆ.

ಶಕ್ತಿ ಕಪೂರ್ ಸಂಪರ್ಕ: ನಟ ಶಕ್ತಿ ಕಪೂರ್ ಅವರನ್ನು ಸಹ ಸಂಪರ್ಕಿಸಲಾಗಿತ್ತು. ಆದರೆ, 5 ಲಕ್ಷ ರೂಪಾಯಿ ಸಂಭಾವಣೆ ಕೇಳಿದ ಬಳಿಕ ಮುಂದೆ ಮಾತುಕತೆ ನಡೆಸಲಿಲ್ಲ. ಅದೇ ರೀತಿ ಸಹ ನಟ ರಾಜೇಶ್ ಪುರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಝಾ ತಿಳಿಸಿದ್ದಾರೆ.

ಮಾಸ್ಟರ್​ ಮೈಂಡ್​:ಬಂಧಿತ ಆರೋಪಿ ರಿಕಿ ಅಲಿಯಾಸ್ ಸಾರ್ಥಕ್ ನಗರಸಭೆಯ ಮಾಜಿ ಕೌನ್ಸಿಲರ್ ಎಂದು ಹೇಳಿಕೊಂಡಿದ್ದು, ಇದರ ಸಂಪೂರ್ಣ ಯೋಜನೆ ರೂಪಿಸಿದ್ದು ಬಂಧಿತ ಆರೋಪಿ ಲವಿ. ಈತನೇ ಈ ಅಪಹರಣದ ಮಾಸ್ಟರ್​ ಮೈಂಡ್. ನನಗೆ ಹಲವು ನಟರ ಪರಿಚಯವಿದ್ದು, ಹೀಗೆ ಮಾಡಿದರೆ ಸೆಲೆಬ್ರಿಟಿಗಳು ಯಾರೂ ದೂರು ನೀಡುವುದಿಲ್ಲ ಎಂದು ಹೇಳುತ್ತಿದ್ದ. ಅದೇ ಧೈರ್ಯದಿಂದ ಈ ಕೃತ್ಯಕ್ಕೆ ಮುಂದಾದೆವು ಎಂದು ಸಾರ್ಥಕ್ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಅಭಿಷೇಕ್ ಝಾ ತಿಳಿಸಿದ್ದಾರೆ.

ಮುಷ್ತಾಕ್ ಖಾನ್ ಯಾರು:ಮುಷ್ತಾಕ್ ಖಾನ್ ಒಬ್ಬ ಭಾರತೀಯ ನಟ. ಕಳೆದ 30 ವರ್ಷಗಳಿಂದ ಚಲನಚಿತ್ರಗಳು ಮತ್ತು ಟಿವಿ, ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಗದರ್, ಹಮ್ ಹೇ ರಾಹಿ ಪ್ಯಾರ್ ಕೆ, ಜೋಡಿ ನಂಬರ್ 1 ಮತ್ತು ವೆಲ್ ಕಮ್ ಸೇರಿದಂತೆ 100 ಚಿತ್ರಗಳಲ್ಲಿ ಮುಷ್ತಾಕ್ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರವನ್ನೂ ನಿರ್ವಹಿಸಿದ್ದಾರೆ. ಇದಲ್ಲದೇ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಅಲ್ಲು ಅರ್ಜುನ್​ರೊಂದಿಗೆ ಸರ್ಕಾರ ನಡೆದುಕೊಂಡಿರುವ ರೀತಿ ಸರಿಯಲ್ಲ': ಬಿಜೆಪಿ, ಬಿಆರ್​ಎಸ್​ ವಾಗ್ದಾಳಿ - ALLU ARJUN ARREST

ABOUT THE AUTHOR

...view details