ಆಂಧ್ರಪ್ರದೇಶದಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿದೆ ಇಲ್ಲಿನ ಜಲಾಶಯಗಳು
ಆಂಧ್ರಪ್ರದೇಶ: ಎರಡೂ ತೆಲುಗು ರಾಜ್ಯಗಳಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಧ್ರದ ಎನ್ ಟಿಆರ್ ಜಿಲ್ಲೆಯ ವತ್ಸವಾಯಿ, ಪೆನುಗಂಚಿಪ್ರೋಲು, ನಂದಿಗಾಮ, ಚಂದರ್ಲಪಾಡು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ವತ್ಸವಾಯಿಯ ಲಿಂಗಾಳ ಸೇತುವೆ ಜಲಾವೃತಗೊಂಡಿದ್ದು, ಇನ್ನು ಹೆಚ್ಚಿನ ಪ್ರವಾಹ ನಿರ್ಮಾಣವಾದರೆ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ವತ್ಸವಾಯಿಯ ಪೊಲಂಪಲ್ಲಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಯಾರೂ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಂಪಚೋಡವರಂನ ಭೂಪತಿ ಪಾಲೆಂ ಜಲಾಶಯ, ಮುಸುರುಮಿಲ್ಲಿ ಜಲಾಶಯ, ಮಡ್ಡಿಗಡ್ಡ ಮತ್ತು ಸೂರಂಪಾಲೆಂ ಜಲಾಶಯಗಳು ತುಂಬಿ ಹರಿಯುತ್ತಿವೆ. ಇನ್ನೆರಡು ದಿನ ಇದೇ ರೀತಿ ಮಳೆ ಸುರಿದರೆ ಜಲಾಶಯಗಳಿಂದ ನೀರು ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.