ಭಾರೀ ಮಳೆಗೆ ಕರಾವಳಿ ತತ್ತರ: ಅಂಕೋಲಾ-ಕಾರವಾರದಲ್ಲಿ ತಗ್ಗು ಪ್ರದೇಶಗಳು ಜಲಾವೃತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಎಡಬಿಡದೆ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅದರಲ್ಲೂ ಕಾರವಾರ ಹಾಗೂ ಅಂಕೋಲಾದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗೆ ನೆರೆ ಹಾವಳಿಯೇ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾರವಾರದ ಅಮದಳ್ಳಿ, ಚೆಂಡಿಯಾ, ಮುದಗಾ, ಕದ್ರಾ, ಕಿನ್ನರ ಹಾಗೂ ಅಂಕೋಲಾ ತಾಲೂಕಿನ ಅವರ್ಸಾ, ಹಟ್ಟಿಕೇರಿ, ಕೇಣಿ, ಹಾರವಾಡ ಭಾಗಗಳಲ್ಲಿ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.