ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ರಾಜಕೀಯ ಪ್ರೇರಿತ: ಅರವಿಂದ ಬೆಲ್ಲದ್
ಹುಬ್ಬಳ್ಳಿ:ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನೆಯ ಮೇಲಿನ ಕಲ್ಲು ತೂರಾಟ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಿದವರು ನಿಜವಾದ ಮೀಸಲಾತಿ ಬಗ್ಗೆ ಕಳಕಳಿ ಇದ್ದವರಲ್ಲ. ಒಳಮೀಸಲಾತಿ ಕೊರಚ, ಭೋವಿ - ವಡ್ಡರು ಶೇ.03 ರಷ್ಟು ಮೀಸಲಾತಿ ಕೇಳಿದ್ದರು. ಆದರೆ ಸರ್ಕಾರ ಅದಕ್ಕಿಂತಲೂ ಹೆಚ್ಚು ಮೀಸಲಾತಿ ಕೊಟ್ಟಿದೆ. ಎಡಗೈ ಮತ್ತು ಬಲಗೈ ಬೇಡಿಕೆಯಂತೆ ಒಳಮೀಸಲಾತಿ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಜಾಣತನದ ನಡೆ ಅನುಸರಿಸಿದೆ ಎಂದು ಅವರು ಸಮರ್ಥಿಸಿಕೊಂಡರು.
ಜನರ ಅಪೇಕ್ಷೆಗೆ ತಕ್ಕಂತೆ ಕೊಟ್ಟಿದ್ದೇವೆ. ಲಿಂಗಾಯತ ಸಮುದಾಯಕ್ಕೂ ಹೆಚ್ಚು ಮೀಸಲಾತಿ ಕೊಟ್ಟಿದೆ. ನಿಜವಾದ ಹೋರಾಟ ಮಾಡುತ್ತಿದ್ದವರಿಗೆ ಮೀಸಲಾತಿ ಖುಷಿಯಾಗಿದೆ. ಕಾಂಗ್ರೆಸ್ ನಾಯಕರಿಗೆ ಮಾತ್ರ ಕಸಿವಿಸಿಯಾಗಿದೆ ಎಂದರು. ಅಂಚಟಗೇರಿ ಟಿಕೆಟ್ ಕೇಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಬೆಲ್ಲದ್ ಅವರು, ಈರೇಶ ಅಂಚಟಗೇರಿ ಅವರು ತಮ್ಮ ಆಸೆಯಂತೆ ಟಿಕೆಟ್ ಕೇಳಿದ್ದಾರೆ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ, ನನಗೆ ಯಾರೇ ಎದುರಾಳಿಯಾದ್ರೂ ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇದನ್ನೂ ಓದಿ:'ಹೋಟೆಲ್, ಲಾಡ್ಜ್ನಲ್ಲಿ ಕುಳಿತು ಮೀಸಲಾತಿ ವಿಂಗಡಣೆ ಮಾಡುವುದಲ್ಲ'