ಯಾದಗಿರಿ: ಆರ್ಥಿಕ ಗಣತಿಗೂ ಮತ್ತು ಸಿಎಎ-ಎನ್ಆರ್ಸಿಗೂ ಯಾವುದೇ ಸಂಬಂಧವಿಲ್ಲ, ಆರ್ಥಿಕ ಗಣತಿ ಕಾರ್ಯವನ್ನು ಇ-ಆಡಳಿತ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮರಾವ ಸ್ಪಷ್ಟಪಡಿಸಿದ್ದಾರೆ.
ಗಣತಿದಾರರು ಮಾಹಿತಿ ಸಂಗ್ರಹಹಿಸಲು ಬಂದಾಗ ಸಾರ್ವಜನಿಕರು, ಉದ್ದಿಮೆದಾರರು ಅಗತ್ಯ ಮತ್ತು ನಿಖರ ಮಾಹಿತಿ ನೀಡಿ ಸಹಕರಿಸಬೇಕು. ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ನಡೆಯುತ್ತಿರುವ ಆರ್ಥಿಕ ಗಣತಿಗೂ ಸಿಎಎ - ಎನ್ ಆರ್ಸಿಗೂ ಯಾವುದೇ ಸಂಬಂಧವಿಲ್ಲ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
7ನೇ ಆರ್ಥಿಕ ಗಣತಿ ಕಾರ್ಯಕ್ಕೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿ, 1977 ರಲ್ಲಿ ಕೇಂದ್ರ ಸರ್ಕಾರ ಆರ್ಥಿಕ ಗಣತಿಗೆ ಚಾಲನೆ ನೀಡಿದೆ . ಪ್ರಸಕ್ತ ಆರ್ಥಿಕ ಗಣತಿ ಕಾರ್ಯವನ್ನು ಸಿ.ಎಸ್.ಸಿ ಮತ್ತು ಎನ್.ಎಸ್.ಎಸ್.ಒ ಅವರಿಗೆ ನೀಡಲಾಗಿದೆ . ಅಸಂಘಟಿತ ವಲಯದ ಆರ್ಥಿಕ ಶಕ್ತಿ ಕುರಿತು ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸದರಿ ಆರ್ಥಿಕ ಗಣತಿಯನ್ನು ಕೈಗೊಳ್ಳಲಾಗಿದೆ . ಟೈಲರಿಂಗ್ , ಬೀಡಿ ಕಟ್ಟುವುದು , ಹೈನುಗಾರಿಕೆ , ರಸ್ತೆಬದಿ ವಹಿವಾಟು , ಸೊಪ್ಪು , ತರಕಾರಿ ವ್ಯಾಪಾರ , ಹೈನುಗಾರಿಕೆ , ಮನೆಪಾಠ , ತಳ್ಳುಗಾಡಿಯ ವ್ಯಾಪಾರ ಇತ್ಯಾದಿಯಾಗಿ ಪ್ರತಿ ವಹಿವಾಟಿನ ಸಮಗ್ರ ವರದಿಯನ್ನು ಭೇಟಿ ನೀಡಲಿರುವ ಗಣತಿದಾರರಿಗೆ ನೀಡಿ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಶರ್ಮಾ ಹಾಗೂ ಸಹಾಯಕ ಆಯುಕ್ತ ಸೋಮಶೇಖರ್ ಸೋಮನಾಳ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.