ಯಾದಗಿರಿ: ಬಡಜನರಿಗಾಗಿ ಸೂರು ಕಲ್ಪಿಸಲು ಈ ಹಿಂದೆಯೇ ಸರ್ಕಾರವು ಆಶ್ರಯ ಯೋಜನೆ ಜಾರಿಗೆ ತಂದಿತ್ತು. ಆದರೆ, ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯೋ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಿ ಕೈ ತೊಳೆದುಕೊಂಡಿದೆ. ಆದರೆ, 30 ವರ್ಷಗಳು ಕಳೆದರೂ ಇಲ್ಲಿ ಒಂದು ಮನೆಯೂ ನಿರ್ಮಾಣವಾಗಿಲ್ಲ.
30 ವರ್ಷವಾದರೂ ಇಲ್ಲ ಸೂರಿನ ಭಾಗ್ಯ : ಹೀಗೆ ಒಂದು ಕಡೆ ಮಳೆಯಲ್ಲಿ ನೆನೆಯುತ್ತಾ ನಿಂತಿರುವ ಜನರು,ಮತ್ತೊಂದೆಡೆ ಪುರಸಭೆ ಕಚೇರಿ ಬಳಿ ಬಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವ ಜನರು. ಈ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ. ಗಿರಿನಾಡು ಯಾದಗಿರಿ 12 ವರ್ಷಗಳ ಹಿಂದೆ ಕಲಬುರಗಿ ಜಿಲ್ಲೆಯಿಂದ ಬೇರ್ಪಟ್ಟು ಯಾದಗಿರಿ ನೂತನ ಜಿಲ್ಲೆಯಾಗಿ ರೂಪುಗೊಂಡಿತು.
ಕೇವಲ ಹಕ್ಕು ಪತ್ರ ನೀಡಿ ಕೈತೊಳೆದುಕೊಂಡಿರುವ ಸರ್ಕಾರ: 30 ವರ್ಷಗಳ ಹಿಂದೆ ಬಡ ಜನರಿಗಾಗಿ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಶ್ರಯ ಯೋಜನೆ ಜಾರಿಗೆ ತಂದಿತ್ತು. ಅದರಂತೆ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಪಟ್ಟಣದ ಕೂಗಳತೆ ದೂರದಲ್ಲಿರುವ ನಾನಾಪುರ ಬಡಾವಣೆಯ ಸರ್ವೇ ನಂ 25ರ 3 ಎಕರೆ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡಲಾಗಿತ್ತು.
1991-92ರ ಅವಧಿಯಲ್ಲಿ ಎಸ್.ಬಂಗಾರಪ್ಪ ಅವರ ಅಧಿಕಾರದ ಅವಧಿಯಲ್ಲಿ 134 ಬಡಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 30 ವರ್ಷಗಳು ಕಳೆದರೂ ಫಲಾನುಭವಿಗಳಿಗೆ ಸ್ಥಳ ನೀಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.