ವಿಜಯಪುರ:ಸಿಎಂ ಬಿ.ಎಸ್.ಯಡಿಯೂರಪ್ಪ ಮಂಡಿಸುವ ಬಜೆಟ್ನಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಜನತೆ ಪ್ರಮುಖ ಬೇಡಿಕೆಗಳು ಸಾಕಷ್ಟಿವೆ. ಭೀಕರ ಬರಕ್ಕೆ ಹೆಸರಾದ ಜಿಲ್ಲೆಯಲ್ಲೀಗ ಯುಕೆಪಿ ಕೆಲ ಯೋಜನೆಗಳು, ಕೆರೆ ತುಂಬುವ ಯೋಜನೆ ಅನುಷ್ಠಾನದಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆದ್ರೆ ಈಗ ಮತ್ತೊಂದು ಬಜೆಟ್ ಬಂದಿದ್ದು, ಜನರಲ್ಲಿ ಮತ್ತೆ ನಿರೀಕ್ಷೆಗಳು ಮೂಡಿವೆ.
ಮಲ್ಲಿಕಾರ್ಜುನ, ಕಾರ್ಮಿಕ ಮುಖಂಡ ಹಿಂದಿನ ಬಜೆಟ್ಗಳಲ್ಲಿ ಘೋಷಣೆಯಾಗಿದ್ದ ಮುದ್ದೇಬಿಹಾಳದಲ್ಲಿ ಕೃಷಿ ವಿಜ್ಞಾನ ಕೇಂದ್ರ, ದ್ರಾಕ್ಷಿ, ದಾಳಿಂಬೆ ಬೆಳೆಗಾರರಿಗೆ ನೆರವು ಯೋಜನೆ ಅನುಷ್ಠಾನಗೊಂಡಿಲ್ಲ. ಈಗ ಮತ್ತೊಂದು ಬಜೆಟ್ ಬಂದಿದ್ದು, ಜನರಲ್ಲಿ ಮತ್ತೆ ನಿರೀಕ್ಷೆಗಳು ಮೂಡಿವೆ.
ಯುಕೆಪಿ-3 ಯೋಜನೆ ಅನುದಾನ: ಕೃಷ್ಣಾ ನ್ಯಾಯಾಧಿಕರಣ ತೀರ್ಪಿನನ್ವಯ ಹಂಚಿಕೆಯಾದ ನೀರು ಬಳಕೆಗೆ ಯುಕೆಪಿ-3 ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ. ನಾನಾ ಯೋಜನೆಗಳ ಮುಖ್ಯ ಕಾಮಗಾರಿ ಪೂರ್ಣಗೊಂಡಿವೆ. ಜಿಲ್ಲೆಯನ್ನು ಸಂಪೂರ್ಣ ನೀರಾವರಿಗೊಳಪಡಿಸಲು ಉಳಿದ ಯೋಜನೆಗಳನ್ನು ಪೂರ್ಣಗೊಳಿಸಲು ವಿಶೇಷ ಅನುದಾನ ಅಗತ್ಯವಿದೆ. ಅಲ್ಲದೆ, ಆಲಮಟ್ಟಿ ಜಲಾಶಯವನ್ನು 524.256 ಮೀ.ಗೆ ಎತ್ತರಿಸಲು ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಇದೆ.
ಪ್ರವಾಸೋದ್ಯಮ ಅಭಿವೃದ್ಧಿ: ನೂರಾರು ಸ್ಮಾರಕ ಹೊಂದಿರುವ 2ನೇ ರೋಮ್ ಎನಿಸಿಕೊಂಡ ವಿಜಯಪುರ ಪ್ರವಾಸೋದ್ಯಮ ಬೆಳವಣಿಗೆಯಾಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್ನಲ್ಲಿ ವಿಶೇಷ ಅನುದಾನದ ಘೋಷಣೆ ನಿರೀಕ್ಷೆ ಇದೆ. ಶರಣರ ಜನ್ಮಸ್ಥಳ, ಐಕ್ಯಸ್ಥಳ ಅಭಿವೃದ್ಧಿಗಾಗಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕೆಂಬುದು ಜನರ ಒತ್ತಾಸೆಯಾಗಿದೆ.
ವಿಮಾನ ನಿಲ್ದಾಣಕ್ಕೆ ಚಾಲನೆ ಕೊಡಬೇಕು. ಪ್ರವಾಸೋದ್ಯಮ ಅಭಿವೃದ್ಧಿ, ತೋಟಗಾರಿಕೆ ಉತ್ಪನ್ನಗಳ ರಫ್ತು ಉದ್ಯಮಕ್ಕೆ ಪೂರಕವಾಗಿರುವ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2009ರಲ್ಲೇ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಯೋಜನೆ ಟೇಕಾಫ್ ಆಗಿಲ್ಲ. ವಿಮಾನ ನಿಲ್ದಾಣ ಆಗಲೇಬೇಕೆಂದು ಜನತೆ ಪ್ರಬಲ ಬೇಡಿಕೆ ಇಟ್ಟಿದ್ದಾರೆ.