ವಿಜಯಪುರ :ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ(unseasonal rain) ವಿವಿಧ ಬೆಳೆಗಳು ನಾಶವಾಗುತ್ತಿದ್ದರೆ, ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡಿದ್ದ ತೊಗರಿ ಬೆಳೆ(Bark crop) ಹೂ ಬಿಡದೇ ಬಾಡಿ ಹೋಗುತ್ತಿದೆ.
ಅತಿ ಸುಲಭವಾಗಿ ಬೆಳೆಯುವ ತೊಗರಿ ಬೆಳೆಯನ್ನು ಕಳೆದ ಕೆಲ ವರ್ಷಗಳಿಂದ ರೈತರು ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಲಾಭವನ್ನೂ ಸಹ ಗಳಿಸಿದ್ದಾರೆ. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ ರೈತರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 4.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಆದರೆ, ಸರಿಯಾದ ಸಮಯಕ್ಕೆ ಮಳೆ ಬರದೇ ಇರುವ ಕಾರಣ ಇಂದು ತೊಗರಿ ಹಾಳಾಗಿದೆ. ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
ವಿಜಯಪುರ ಜಿಲ್ಲೆಯು ಶಾಶ್ವತ ಬರ ಪೀಡಿತ ಜಿಲ್ಲೆ ಎಂದೇ ಕರೆಸಿಕೊಂಡಿದೆ. ಈ ಜಿಲ್ಲೆಯ ರೈತರು ಕೆಲವೊಮ್ಮೆ ಅತಿವೃಷ್ಠಿಯಿಂದಾಗಿ ಬೆಳೆಗಳು ಹಾಳಾದರೆ ಮತ್ತೊಮ್ಮೆ ಅನಾವೃಷ್ಠಿಯಿಂದ ಹಾಳಾಗುತ್ತವೆ.