ವಿಜಯಪುರ:ಹಳೇ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳು ಪರಸ್ಪರ ಮಾರಾಕಾಸ್ತ್ರಗಳಿಂದ ಹೊಡೆದಾಡಿಕೊಂಡು ಹಲವರಿಗೆ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಸೇರಿ 5 ಜನರ ಪರಿಸ್ಥಿತಿ ಗಂಭೀರವಾಗಿದೆ. ವೆಂಕಟೇಶ ನಾಯಕ, ಶಿವಾಜಿ ಲಮಾಣಿ, ರವಿ ಲಮಾಣಿ, ರೇಷ್ಮಾ ಲಮಾಣಿ, ಶ್ರೀಕಾಂತ ನಾಯಕ ಇವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. 13 ಜನರಿಗೆ ಗಾಯಗಳಾಗಿದ್ದು, ಇವರಿಗೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಗಾಯಾಳುಗಳ ಮೇಲೂ ಹಲ್ಲೆ: ಇನ್ನು ವಿಪರ್ಯಾಸ ಅಂದ್ರೆ ಗಾಯಗೊಂಡವರನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದ ಸಂದರ್ಭದಲ್ಲೂ ಒಂದು ಗುಂಪಿನ ಕೆಲವರು ಹಿಂಬಾಲಿಸಿಕೊಂಡು ಬಂದು ಆಸ್ಪತ್ರೆಯಲ್ಲೂ ಗಾಯಾಳುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲ ಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಡಿಎಸ್ಪಿ ಮಹೇಶ್ವರಗೌಡ ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದಾರೆ.