ಮುದ್ದೇಬಿಹಾಳ : ಜಾತ್ರೆಗೆಂದು ಬಂದು ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಮೂಕ ಮಗುವೊಂದು ಸಾಮಾಜಿಕ ಜಾಲತಾಣಗಳ ಸಹಕಾರದಿಂದ ತಾಯಿಯ ಮಡಿಲು ಸೇರಿದ ಅಪರೂಪದ ಘಟನೆ ಪಟ್ಟಣದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಪಟ್ಟಣದಲ್ಲಿ ಶನಿವಾರ ಗೊಲ್ಲರ ಸಮುದಾಯದವರು ರೇಣುಕಾ ಯಲ್ಲಮ್ಮ ದೇವಿ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಮೆರವಣಿಗೆ ನಡೆಸಿದ್ದರು. ಈ ಜಾತ್ರೆಗೆ ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದಿಂದ ಸೋಮಪ್ಪ ಹಾಗೂ ರೇಖಾ ಗೊಲ್ಲರ ಕುಟುಂಬದವರು ತಮ್ಮ ಐದು ವರ್ಷದ ಮಗು ಸಚಿನ್ನನ್ನು ಜೊತೆಗೆ ಕರೆದುಕೊಂಡು ಬಂದಿದ್ದರು.
ಜಾತ್ರೆಯ ಗದ್ದಲದಲ್ಲಿ ಮಗುವನ್ನು ಮರೆತು ಹಾಗೇ ಊರಿಗೆ ತೆರಳಿದ್ದಾರೆ. ಮಾತುಬಾರದ ಬಾಲಕ ಸಚಿನ್ ತನ್ನವರ ಬಗ್ಗೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತನ್ನ ತಂದೆ ತಾಯಿ ಹುಡುಕಾಡುತ್ತಾ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಬಂದಿದ್ದಾನೆ. ಅಳುತ್ತ ನಿಂತಿದ್ದ ಆತನನ್ನು ಗಮನಿಸಿದ ಮುದ್ದೇಬಿಹಾಳದ ನಿವಾಸಿ ಲಕ್ಷ್ಮಣ್ ಬಂಡಿವಡ್ಡರ ಹಾಗೂ ಅವರ ಸ್ನೇಹಿತರು ಮಗುವನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು.
ತಕ್ಷಣ ಪೊಲೀಸರು ಬಾಲಕ ಸಚಿನ್ ಫೋಟೋವನ್ನು ತೆಗೆದು ಈ ಮಗು ಮುದ್ದೇಬಿಹಾಳದಲ್ಲಿ ಸಿಕ್ಕಿದ್ದು ಪಾಲಕರ ಪತ್ತೆಗೆ ನೆರವಾಗಿ ಎಂದು ತಮ್ಮೆಲ್ಲಾ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯ ಅವರಿವರ ಕಿವಿಗೆ ಬೀಳುತ್ತಲೇ ಅಸ್ಕಿ ಗ್ರಾಮದ ಸೋಮಪ್ಪ ಹಾಗೂ ರೇಖಾ ಗೊಲ್ಲರ ದಂಪತಿ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಆಗಮಿಸಿ ಮಗು ತಮ್ಮದೇ ಎಂದು ಗುರುತಿಸಿದ್ದಾರೆ. ಬಳಿಕ ಪಾಲಕರಿಂದ ಮುಚ್ಚಳಿಕೆ ಬರೆದುಕೊಂಡು ಪೊಲೀಸರು ಮಗುವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಮಗು ಸುರಕ್ಷಿತವಾಗಿರುವುದನ್ನು ಕಂಡ ತಾಯಿ ಠಾಣೆಯಲ್ಲಿಯೇ ಮಗುವಿಗೆ ಮುತ್ತಿಕ್ಕಿ ಆನಂದಭಾಷ್ಪ ಹಾಕಿದಳು. ಸುರಕ್ಷಿತವಾಗಿ ಮಗುವನ್ನು ಪತ್ತೆ ಹಚ್ಚಿಕೊಟ್ಟ ಪೊಲೀಸರು, ಮಗುವನ್ನು ಠಾಣೆಗೆ ತಂದು ಒಪ್ಪಿಸಿದ್ದ ಲಕ್ಷಣ್ ಹಾಗೂ ಸ್ನೇಹಿತರಿಗೆ ಗೊಲ್ಲರ ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.
ಮುದ್ದೇಬಿಹಾಳ ಪೊಲೀಸರ ಈ ಸಮಯೋಚಿತ ಕಾರ್ಯದಿಂದ ಮಗುವೊಂದು ಪಾಲಕರ ಮಡಿಲಿಗೆ ಬೇಗನೇ ಸೇರಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಅಲ್ಲದೇ, ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯ ಕೆಲಸವನ್ನೂ ಮಾಡಬಹುದು ಎಂಬ ಸಂದೇಶವನ್ನು ಸಾರಿದ್ದಾರೆ.