ಶಿರಸಿ :ಶೀತ, ಜ್ವರ ಬಂದಾಗ ಮನೆಗಳಲ್ಲಿ ಬೆಂಕಿಯ ಕೆಂಡಕ್ಕೆ ಧೂಪವನ್ನು ಹಾಕಿ ಅದರ ಹಬೆಯನ್ನು ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆ ಇದೀಗ ಪೊಲೀಸ್ ಠಾಣೆಗಳಲ್ಲೂ ಬಂದಿದ್ದು, ಶಿರಸಿ ಉಪವಿಭಾಗದ 7 ಠಾಣೆಗಳಲ್ಲಿ ಹಬೆ ಯಂತ್ರಗಳನ್ನು ಅಳವಡಿಸಲಾಗಿದೆ.
ಕೊರೊನಾದಿಂದ ರಕ್ಷಿಸಿಕೊಳ್ಳೋಕೆ ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದು, ಶಿರಸಿ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ ಸ್ಟೀಮ್ನ ವ್ಯವಸ್ಥೆ ಮಾಡಲಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಬನವಾಸಿ ಹಾಗೂ ಮುಂಡಗೋಡು ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿ ಹಬೆಯನ್ನ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ರವಿ ನಾಯ್ಕ ಉಪವಿಭಾಗದ ವ್ಯಾಪ್ತಿಯ ಎಲ್ಲಾ ಠಾಣೆಗಳಲ್ಲಿ ಸ್ಟೀಮ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಪೊಲೀಸರು ಯಾವಾಗಲೂ ಜನರ ಸಂಪರ್ಕದಲ್ಲಿ ಇರೋದ್ರಿಂದ ಕೊರೊನಾದ ತೀವ್ರತೆಯಿಂದ ತಪ್ಪಿಸಿಕೊಳ್ಳೋಕೆ ಈ ವಿಧಾನದ ಮೊರೆ ಹೋಗಲಾಗಿದೆ.
ಕೊರೊನಾ ತಡೆಗಾಗಿ ಪೊಲೀಸರಿಗೆ ಸ್ಟೀಮ್.. ಠಾಣೆಯಲ್ಲಿ ಒಂದು ಸಿಲಿಂಡರ್ ಒಲೆಯನ್ನ ಇಟ್ಟು, ಅದರ ಮೇಲೆ ನೀರು ಹಾಗೂ ನೋವುನಾಶಕ ನೀಲಗಿರಿ ಎಣ್ಣೆಯ ಮಿಶ್ರಣವನ್ನು ಕುಕ್ಕರ್ನಲ್ಲಿ ಹಾಕಿಡಲಾಗುತ್ತೆ. ಕುಕ್ಕರ್ನಿಂದ ಪೈಪ್ಗಳ ಮೂಲಕ ಹಬೆ ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.
ಪೈಪ್ಗಳ ತುದಿಯಲ್ಲಿ ಹಬೆ ಹೊರಗಡೆ ಹೋಗುವಂತೆ ಸಣ್ಣ ಕಿಂಡಿಗಳನ್ನು ಮಾಡಲಾಗಿದೆ. ಒಲೆ ಆನ್ ಮಾಡಿದ 5 ರಿಂದ 10 ನಿಮಿಷಗಳಲ್ಲಿ ಹಬೆಯಾಡೋಕೆ ಪ್ರಾರಂಭವಾಗುತ್ತೆ.
ಕಿಂಡಿಗಳ ಸಮೀಪ ಆಸನಗಳನ್ನು ಹಾಕಿಕೊಂಡು ಹಬೆ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಸಿಬ್ಬಂದಿ ಬೆಳಗ್ಗೆ ಡ್ಯೂಟಿಗೆ ಹೋಗೋ ಮುನ್ನ ಹಾಗೂ ಡ್ಯೂಟಿ ಮುಗಿದ ನಂತರ ಹಬೆ ತೆಗೆದುಕೊಳ್ತಾರೆ.
ಪ್ರತಿ ಬಾರಿ ಪರಿಸ್ಥಿತಿಗೆ ತಕ್ಕಂತೆ ಹೊಸ ಪ್ಲ್ಯಾನ್ಗಳನ್ನು ರೂಪಿಸಿ ಜನಸಾಮಾನ್ಯರ ಕೈಯಲ್ಲಿ ಸೈ ಎನಿಸಿಕೊಂಡ ಶಿರಸಿ ಉಪವಿಭಾಗದ ಪೊಲೀಸರು, ಈ ಬಾರಿಯೂ ಜನರ ರಕ್ಷಣೆ ಜೊತೆ ತಮ್ಮ ರಕ್ಷಣೆಯ ಕಡೆಗೂ ಗಮನಹರಿಸಿದ್ದಾರೆ. ಪೊಲೀಸ್ ಮೇಲಧಿಕಾರಿಗಳ ಈ ಕ್ರಮಕ್ಕೆ ಸಿಬ್ಬಂದಿ ಅಷ್ಟೇ ಅಲ್ಲದೇ ಸಾರ್ವಜನಿಕರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.