ಕಾರವಾರ: ಸರ್ಕಾರ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ಕಳೆದ ಹಲವು ವರ್ಷಗಳ ಹಿಂದೆ ಮನೆ ಮಂಜೂರು ಮಾಡಿದೆ. ಈ ಪೈಕಿ ಕೆಲವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಕಾರವಾರ ನಗರಸಭೆ ಇನ್ನೂ ಕೆಲವರಿಗೆ ಈವರೆಗೂ ಮನೆ ನಿರ್ಮಾಣ ಮಾಡಿಲ್ಲ. ಆದರೆ ಮನೆ ನಿರ್ಮಾಣದ ಭರವಸೆಯಲ್ಲಿಯೇ ಬಾಡಿಗೆ ಮನೆಗಳಲ್ಲಿ ಕಾಲ ಕಳೆಯುತ್ತಿರುವ ಪೌರ ಕಾರ್ಮಿಕರು ಇದೀಗ ತಮಗೆ ಮಂಜೂರಾದ ಮನೆ ನಿರ್ಮಾಣಕ್ಕೆ ಪಟ್ಟು ಹಿಡಿದು ಆಗ್ರಹಿಸಿದ್ದಾರೆ.
ಹೌದು, ಕಾರವಾರದ ನಗರಸಭೆಯ ಪೌರಕಾರ್ಮಿಕರಿಗಾಗಿ ಅಂದಿನ ಸರ್ಕಾರ ಗೃಹಭಾಗ್ಯ ಯೋಜನೆ ರೂಪಿಸಿತ್ತು. ಹಿರಿತನದ ಆಧಾರದ ಮೇಲೆ ಆಯ್ದ ಪೌರ ಕಾರ್ಮಿಕರಿಗೆ ಸ್ವಂತ ಮನೆ ಕಟ್ಟಿಕೊಡುವ ಯೋಜನೆ ಇದಾಗಿತ್ತು. ಅದರಂತೆ ಕಾರವಾರ ನಗರಸಭೆಯಿಂದ 34 ಮಂದಿ ಪೌರ ಕಾರ್ಮಿಕರು ಈ ಯೋಜನೆಯಡಿ ಆಯ್ಕೆಯಾಗಿದ್ದರು. ಒಂದು ಮನೆಗೆ 7.5 ಲಕ್ಷದಂತೆ ಸರ್ಕಾರ ಅನುದಾನ ಒದಗಿಸಿದ್ದು, ಮನೆಯೊಂದಕ್ಕೆ ಒಟ್ಟು 11.50 ಲಕ್ಷ ವೆಚ್ಚದಂತೆ ಮೊದಲ ಹಂತದಲ್ಲಿ 16 ಮನೆಗಳ ಅಪಾರ್ಟ್ಮೆಂಟ್ನ್ನು ನಿರ್ಮಿಸಿಕೊಡಲಾಗಿತ್ತು.
ಒಂದೇ ಕಡೆ ಜಾಗ ಲಭ್ಯವಾಗದ ಹಿನ್ನೆಲೆಯಲ್ಲಿ ಉಳಿದ ಪೌರ ಕಾರ್ಮಿಕರಿಗೆ ಬೇರೆ ಕಡೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ನಗರಸಭೆ ತಿಳಿಸಿತ್ತು. ಆದರೆ ಇದೀಗ ನಾಲ್ಕು ವರ್ಷ ಕಳೆದರೂ ಸಹ ಉಳಿದ 18 ಮಂದಿ ಪೌರ ಕಾರ್ಮಿಕರಿಗೆ ಮನೆ ಲಭ್ಯವಾಗಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಜಾಗದ ಸಮಸ್ಯೆ ನೆಪ ಹೇಳಿ ಮನೆ ಕಟ್ಟಿಕೊಡಲು ನಿರಾಸಕ್ತಿ ತೋರಿಸುತ್ತಿದ್ದು, ಈ ನಿಟ್ಟಿನಲ್ಲಿ ಮನೆ ಕಟ್ಟಿಕೊಡುವಂತೆ ಪೌರ ಕಾರ್ಮಿಕ ನಾರಾಯಣ ಮಾದಿಗ ಆಗ್ರಹಿಸಿದ್ದಾರೆ.
ಇನ್ನು ಕಾರವಾರ ನಗರಸಭೆಯಲ್ಲಿ ಹಲವಾರು ಮಂದಿ ಹತ್ತಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು, ಈಗಾಗಲೇ ಸಾಕಷ್ಟು ಮಂದಿ ನಿವೃತ್ತಿ ಹೊಂದಿದ್ದಾರೆ. ಖಾಯಂ ಪೌರ ಕಾರ್ಮಿಕರಿಗೆ ನಗರಸಭೆ ಕ್ವಾಟ್ರಸ್ಗಳನ್ನು ನೀಡಲಾಗುತ್ತದೆಯಾದರೂ ಬರುವ ವೇತನದಲ್ಲಿ ಬಾಡಿಗೆ ಹಣವನ್ನು ಕಡಿತಗೊಳಿಸುವುದರಿಂದ ಜೀವನ ನಿರ್ವಹಣೆಗೆ ಆರ್ಥಿಕ ತೊಂದರೆಯಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.